ಕೋವಿಡ್ 4ನೇ ಅಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಪ್ಲ್ಯಾನ್ ರಿವೀಲ್ ಮಾಡಿದ ಸಚಿವ ದಿನೇಶ್ ಗುಂಡೂರಾವ್!

By Sathish Kumar KHFirst Published Dec 20, 2023, 8:01 PM IST
Highlights

ದೇಶದ ಕೋವಿಡ್ ಹಾಟ್‌ಸ್ಪಾಟ್ ಕರ್ನಾಟಕದಲ್ಲಿ ಕೊರೊನಾ ಹೊಸ ಪ್ರಭೇದದ ವೈರಸ್‌ಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮಾಡಿದ ಸಿದ್ಧತೆಯ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು (ಡಿ.20): ನಮ್ಮ ದೇಶದಲ್ಲಿ ಈಗ ಕಾಣಿಸಿಕೊಂಡಿರುವ ಹಾಮಾರಿ ಕೋವಿಡ್ ವೈರಸ್‌ನ ರೂಪಾಂತರಿ ತಳಿಯ ಅಬ್ಬರವನ್ನು 4ನೇ ಅಲೆಯೆಂದು ಹೇಳಲಾಗುತ್ತಿದೆ. ಈಗಾಗಲೇ ದೇಶದಲ್ಲಿ ಕೇರಳ ಮತ್ತು ಕರ್ನಾಟಕ ಕೋವಿಡ್ ಹಾಟ್‌ಸ್ಪಾಟ್‌ ರಾಜ್ಯಗಳಾಗಿ ಕಾಣಿಸಿಕೊಂಡಿವೆ. ಈಗ ರಾಜ್ಯದಲ್ಲಿ 92 ಮಂದಿಗೆ ಸೋಂಕು ದೃಢವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲಿಯೇ ಕೋವಿಡ್ 4ನೇ ಅಲೆಯನ್ನು ಕಟ್ಟಿಹಾಕಲು ಆರೋಗ್ಯ ಇಲಾಖೆ ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂಬುದನ್ನು ಆರೊಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ 4ನೇ ಅಲೆಯ ಭೀತಿ ಶುರುವಾಗಿದೆ. ಇದರ ಬೆನ್ನಲ್ಲಿಯೇ ರಾಜ್ಯ ಆರೋಗ್ಯ ಇಲಾಖೆಯಿಂದ ಮೇಲಿಂದ ಮೇಲೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯನ್ನು ನಡೆಸಲಾಗುತ್ತಿದೆ. ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿದ್ದು, ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಕೋವಿಡ್‌ಗೆ ಜಯದೇವ ಆಸ್ಪತ್ರೆ ಹಾಗೂ ಸಿಎಂಎಚ್ ಆಸ್ಟರ್ ಆಸ್ಪತ್ರೆಯಲ್ಲಿ ತಲಾ ಒಬ್ಬರಂತೆ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕೊರೋನಾದಿಂದಲೇ ಸಾವನ್ನಪ್ಪಿದ್ದಾರಾ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕೋವಿಡ್ ಹೊಸ ವೈರಸ್‌ಗೆ 2 ಬಲಿ: ಶತಕದ ಗಡಿ ತಲುಪಿದ ಸೋಂಕಿತರ ಸಂಖ್ಯೆ!

ಇನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಜೊತೆ ತಯಾರಿ ಬಗ್ಗೆ ಚರ್ಚೆ ಮಾಡಲಾಗಿದೆ. ಬೆಂಗಳೂರಲ್ಲಿ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಅಂತ ತಿಳಿಸಿದ್ದೇನೆ. ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಳಕ್ಕೆ ತಿಳಿಸಲಾಗಿದೆ. ರಾಜ್ಯದಲ್ಲಿ ಪ್ರತಿ ದಿನ 1500 ಟೆಸ್ಟ್ ಮಾಡಲು ಹಾಗೂ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಎಲ್ಲ ವ್ಯವಸ್ಥೆ ಸರಿಯಾಗಿಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಜೊತೆಗೆ, ಬೆಂಗಳೂರಿನ ಬಿಬಿಎಂಪಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಗಳು ಇಲ್ಲ. ಆದರೆ ಇಲ್ಲಿ ವೆಂಟಿಲೇಶನ್ ಬೆಡ್ ಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ. ಅವುಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಅನುಕೂಲ ಆಗುವಂತೆ ಔಷಧಿ ಕೊರತೆ ಇದ್ದರೆ ಕೂಡಲೇ ಅವುಗಳನ್ನು ಖರೀದಿಸಲು ನಿರ್ಧಾರ ಕೈಗೊಳ್ಳಲಾಗಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಕೋವಿಡ್ ಸೋಂಕಿನ ಪ್ರಾಬಲ್ಯತೆ, ಸೋಂಕು ನಿರ್ವಹಣೆ ಮತ್ತು ಸೋಂಕು ನಿಯಂತ್ರಣಾ ಕಾರ್ಯದ ಸಿದ್ಧತೆಯ ಬಗ್ಗೆ ಪರಿಶೀಲನಾ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ರಾಜ್ಯಾದ್ಯಂತ ಯಾವ ರೀತಿ ಪೂರ್ವ ತಯಾರಿ ಮಾಡಿಕೊಳ್ಳಬೇಕು ಅಂತ ಚರ್ಚೆ ನಡೆಯಲಿದೆ. ಅಗತ್ಯಕ್ಕೆ ತಕ್ಕಂತೆ ಸೋಂಕು ನಿಯಂತ್ರಣಕ್ಕೆ ಬೇಕಾದ ವೈದ್ಯಕೀಯ ಪರಿಕರ ಎಷ್ಟು ಬೇಕು ಅನ್ನೋದನ್ನ ಚರ್ಚೆ ಮಾಡಿ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.

ಭಾರತದಲ್ಲಿ 21 ಹೊಸ ಕೋವಿಡ್ ತಳಿ JN.1 ಪ್ರಕರಣ ದೃಢ, 4ನೇ ಅಲೆ ಭೀತಿ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ: ಬಿಬಿಎಂಪಿ ವಲಯವಾರು ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸೋಂಕಿತರ ಬಗ್ಗೆ ಹೆಚ್ಚು ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಹೇಳಿದ್ದೇವೆ. ಪ್ರತಿಯೊಂದು ವಲಯ ದಲ್ಲೂ ಅಲರ್ಟ್ ಆಗುವಂತೆ ಸೂಚನೆ ನೀಡಲಾಗಿದ್ದು, ಜನರು ಆತಂಕ ಪಡುವ ಅಗತ್ಯ ಇಲ್ಲ. ಕೋವಿಡ್ ಮಣಿಸಲು ಸಕಲ ರೀತಿಯಲ್ಲೂ ತಯಾರಿ ನಡೆಸಿದ್ದೇವೆ. ರಾಜ್ಯದ ಎಲ್ಲೆಲ್ಲಿ ಹಾಸಿಗೆಗಳ ಕೊರತೆ ಇದೆ ಅನ್ನೋದನ್ನ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

click me!