
ಅವಕಾಶದಲ್ಲಿ ಚಿಕ್ಕದು, ದೊಡ್ಡದು ಎಂಬುದಿಲ್ಲ. ಕಲೆಯೇ ಜೀವನ ಎಂದುಕೊಂಡ ಒಬ್ಬ ಕಲಾವಿದೆಗೆ ಎಲ್ಲಾ ರೀತಿಯ ಅವಕಾಶವೂ ಒಂದೇ. ಬಂದ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರೆ ಅದು ನಮ್ಮನ್ನು ಯಶಸ್ಸಿನ ದಾರಿಗೆ ಖಂಡಿತಾ ಕರೆದೊಯ್ಯುತ್ತದೆ ಎನ್ನುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ಎಂಬಿಬಿಎಸ್ ಪದವೀಧರೆ ಅಂಕಿತಾ ಅಮರ್. ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬೆಡಗಿ ಈಕೆ. ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ಇವರಿಗೆ ಹೆಸರು ತಂದುಕೊಟ್ಟದ್ದು, ಕಲರ್ಸ್ ಕನ್ನಡದ ನಮ್ಮನೆ ಯುವರಾಣಿ ಸೀರಿಯಲ್.
ಪ್ರೇಕ್ಷಕರ ಪ್ರೀತಿಯ ಮೀರಾ ಎಂದೇ ಖ್ಯಾತಿ ಪಡೆದಿರುವ ಅಂಕಿತಾ, ನಟಿ ಮಾತ್ರವಲ್ಲದೇ ಖ್ಯಾತ ನಿರೂಪಕಿ ಕೂಡ. ಅಷ್ಟೇ ಅಲ್ಲದೇ ಈಕೆ ಗಾಯಕಿ ಮತ್ತು ನೃತ್ಯಾಂಗನೆ. ‘ನಮ್ಮನೆ ಯುವರಾಣಿ’ ಸೀರಿಯಲ್ನಲ್ಲಿ ತಮ್ಮ ಮುಗ್ಧ ನಟನೆಯ ಮೂಲಕ ಜನಪ್ರಿಯತೆ ಗಳಿಸಿದರು. ಇದಾದ ಮೇಲೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಮೂಲತಃ ಮೈಸೂರಿನವರಾದ ಅಂಕಿತಾ ಓದಿದ್ದು ಎಂಬಿಬಿಎಸ್, ಆದರೆ ಆಯ್ಕೆ ಮಾಡಿಕೊಂಡಿರುವುದು ಬಣ್ಣದ ಲೋಕವನ್ನು.
ಇದೀಗ ಅಂಕಿತಾ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಚಿತ್ತಾರಾ ಸ್ಟಾರ್ ಅವಾರ್ಡ್ ಸಂದರ್ಭದಲ್ಲಿ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಟಿ, ಅಷ್ಟಕ್ಕೂ ನಟಿಯ ಫ್ಯಾನ್ಸ್ ಅವರ ಮದುವೆಯ ಸುದ್ದಿಗಾಗಿ ಕಾಯ್ತಾ ಇದ್ದಾರೆ. ನಟಿಯ ಮದುವೆಯ ಬಗ್ಗೆ ಅವರಿಗಿಂತಲೂ ಹೆಚ್ಚಾಗಿ ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಂತಿದೆ.
ಇದೀಗ ಆ ಪ್ರಶ್ನೆಗೆ ಉತ್ತರಿಸಿರೋ ನಟಿ ಅಂಕಿತಾ, ಹೊಸದಾಗಿ ಮದುವೆಯಾಗಿರುವ ನಿರೂಪಕಿಯನ್ನೇ ಉದ್ದೇಶಿಸಿ, ನಿಮ್ಮದು ಈಗಷ್ಟೇ ಮದ್ವೆಯಾಗಿದೆಯಲ್ವಾ, ಇನ್ನೊಂದು ಐದು ವರ್ಷ ಹೀಗೆ ಹೊಸದಾಗಿ ಮದುವೆಯಾದವರನ್ನು ನೋಡಿ, ನೀವೆಲ್ಲಾ ಹೇಗೆ ಇದ್ದೀರಾ ಎಂದು ತಿಳಿದ ಮೇಲೆ ಮದುವೆಯಾಗುತ್ತೇನೆ ಎಂದು ಚಟಾಕಿ ಹಾರಿಸಿದ್ದಾರೆ! ನಿಮ್ಮ ಮದುವೆ ವರ್ಕ್ಔಟ್ ಆದ್ರೆ ನಾನು ಆಗ್ತೇನೆ ಎಂದು ನಾಚಿಕೊಂಡಿದ್ದಾರೆ.
ಇನ್ನು ನಟಿ ಕುರಿತು ಹೇಳುವುದಾದರೆ, ಈಕೆ ಖ್ಯಾತ ನೃತ್ಯಗಾರ್ತಿ ಕೂಡ. ಈ ಹಿಂದೆ ಕೃಷ್ಣನ ಭಜನೆಗೆ ನೃತ್ಯ ಮಾಡುವ ಮೂಲಕ ಎಲ್ಲರ ಮನಸೂರೆಗೊಂಡಿದ್ದರು ಅಂಕಿತಾ. ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ವೇಳೆ, ಭಜನೆಗೆ ಡ್ಯಾನ್ಸ್ ಮಾಡುವ ಮೂಲಕ ಸೈ ಎನ್ನಿಸಿಕೊಂಡವರು. ಜಯ ಜಯ ರಾಮ, ಜಾನಕಿ ಪ್ರೇಮ ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿದ್ದರು. ನೂರಾರು ಮಹಿಳೆಯರು ದಾರಿಯುದ್ದಕ್ಕೂ ಭಜನೆ ಮಾಡುತ್ತಾ ಸಾಗುತ್ತಿದ್ದರೆ, ನಟಿ ಅಂಕಿತಾ ಎದುರಿನಲ್ಲಿ ಈ ಭಜನೆಗೆ ಗೆ ಹೆಜ್ಜೆ ಹಾಕುತ್ತಾ ಸಾಗಿದ್ದರು.
ಇನ್ನು ನಟಿಯ ಒಂದಿಷ್ಟು ಸಿನಿ ಪಯಣದ ಕುರಿತು ಹೇಳುವುದಾದರೆ, ‘ಅಬಜದಬ’ ಸಿನಿಮಾ ಮೂಲಕ ಅಂಕಿತಾ ಬೆಳ್ಳಿತೆರೆ ಪ್ರವೇಶ ಮಾಡಿದ್ದರು. ಅದಿನ್ನೂ ಬಿಡುಗಡೆಯಾಗಿಲ್ಲ. ಆದರೂ ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆಯ ‘ಇಬ್ಬನಿ ತಬ್ಬಿದ ಇಳೆಯಲಿ’, ‘ಮೈ ಹೀರೋ’, ಈಗ ‘ರಂಗು ರಗಳೆ’ ಹೀಗೆ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೊಂದು ವಿಭಿನ್ನ ಶೈಲಿಯ ಸಿನಿಮಾವಾಗಿದ್ದು, ಮೂವರು ನಾಯಕರಿದ್ದಾರೆ.
ಈ ಹಿಂದೆ ತಮ್ಮ ಬಣ್ಣದ ಲೋಕದ ಕುರಿತು ಮಾಧ್ಯಮದ ಎದುರು ಮಾತನಾಡಿದ್ದ ಅಂಕಿತಾ ಅವರು, ಮಲ್ಟಿ ಟಾಸ್ಕ್ ಎಂದರೆ ನನಗಿಷ್ಟ. ಕಲೆ ಸರಸ್ವತಿಯ ರೂಪ. ಆದ್ದರಿಂದ ನಿರೂಪಣೆಯ ಅವಕಾಶ ಬಂದಾಗ ಅದನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇನೆ. ಶಾಲಾ, ಕಾಲೇಜು ದಿನಗಳಿಂದಲೂ ನನಗೆ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಒಲವು ಹೆಚ್ಚು. ಅದರಲ್ಲಿ ಭಾಗವಹಿಸಿಲ್ಲ ಎಂದರೆ ಓದಲು ಆಸಕ್ತಿಯೇ ಬರುತ್ತಿರಲಿಲ್ಲ. ಕೇವಲ ನಟನೆ ಮಾತ್ರವಲ್ಲದೆ, ಎಲ್ಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಆಸೆ. ನೃತ್ಯ, ಗಾಯನ, ಹಿನ್ನೆಲೆ ಧ್ವನಿಯಲ್ಲಿ ಈಗಾಗಲೇ ಸಕ್ರಿಯಳಾಗಿದ್ದೇನೆ. ಸದ್ಯಕ್ಕೆ ಸುಗಮ ಸಂಗೀತ ಕಲಿಯುತ್ತಿದ್ದೇನೆ. ನೃತ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಜ್ಜಾಗುತ್ತಿದ್ದೇನೆ ಎಂದಿದ್ದರು.