Snakes drinking milk myth: ಹಾವು ಹಾಲು ಕುಡಿಯುತ್ತಾ? ಈ ಪ್ರಶ್ನೆಗೆ ನಮ್ಮ ಆಚರಣೆಗಳು ಒಂದು ಉತ್ತರ ಕೊಟ್ಟರೆ, ವಿಜ್ಞಾನ ಬೇರೆಯದ್ದೇ ಸತ್ಯ ಹೇಳುತ್ತೆ. ಹಾಗಾದ್ರೆ ನಿಜವಾಗ್ಲೂ ಹಾವು ಹಾಲು ಕುಡಿಯುತ್ತಾ, ಇಲ್ವಾ? ಅಪಾಯಕಾರಿ ಅಂತ ಗೊತ್ತಿದ್ರೂ ಜನ ಯಾಕೆ ಹಾವನ್ನು ಪೂಜೆ ಮಾಡ್ತಾರೆ?.
ಹಾವುಗಳು ತುಂಬಾ ಅಪಾಯಕಾರಿ ಜೀವಿಗಳು. ಆದರೂ ಭಾರತೀಯರು ಅವುಗಳಿಗೆ ಹಾಲೆರೆದು ಪೂಜಿಸುತ್ತಾರೆ. ಅದರಲ್ಲೂ ನಾಗರ ಪಂಚಮಿ, ನಾಗರ ಚೌತಿಯಂತಹ ಹಬ್ಬಗಳಲ್ಲಿ ವಿಶೇಷವಾಗಿ ಹಾವುಗಳನ್ನು ಪೂಜಿಸಲಾಗುತ್ತದೆ. ಹಾವುಗಳು ಹಾಲು ಕುಡಿಯುವುದಿಲ್ಲ ಎಂದು ತಿಳಿದಿದ್ದರೂ, ಜನರು ಹುತ್ತಗಳಿಗೆ ಹಾಲು ಹಾಕುತ್ತಾರೆ. ಹಾಗಾದರೆ ಹಾವುಗಳು ಹಾಲು ಯಾಕೆ ಕುಡಿಯುವುದಿಲ್ಲ? ಒಂದು ವೇಳೆ ಕುಡಿದರೆ ಏನಾಗುತ್ತದೆ? ಹಾಲು ಕುಡಿಯಲ್ಲ ಅಂತ ಗೊತ್ತಿದ್ರೂ ಜನರು ಯಾಕೆ ಹಾಲು ಹಾಕುತ್ತಾರೆ? ಬನ್ನಿ, ಹಾವುಗಳ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ.
25
ಸಸ್ತನಿಗಳು ಮಾತ್ರ,..ಸರೀಸೃಪಗಳಲ್ಲ
ವಿಜ್ಞಾನದ ಪ್ರಕಾರ, ಕೇವಲ ಸಸ್ತನಿಗಳು (Mammals) ಮಾತ್ರ ಹಾಲನ್ನು ಜೀರ್ಣಿಸಿಕೊಳ್ಳಬಲ್ಲವು. ಆದರೆ ಹಾವುಗಳು ಸರೀಸೃಪ (Reptiles) ಜಾತಿಗೆ ಸೇರಿದವು. ಹಾಗಾಗಿ ಇವು ಹಾಲು ಕುಡಿಯುವುದಿಲ್ಲ. ಒಂದು ವೇಳೆ ಬಲವಂತವಾಗಿ ಹಾಲು ಕುಡಿಸಿದರೆ, ಹಾವುಗಳು ಸಾಯುವ ಸಾಧ್ಯತೆ ಇರುತ್ತದೆ. ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹಾವುಗಳಿಗಿರುವುದಿಲ್ಲ. ಹಾಲು ಕುಡಿಯುವಾಗ ಅದು ಶ್ವಾಸಕೋಶಕ್ಕೆ ಹೋದರೆ ಸೋಂಕು ತಗುಲಿ ಹಾವು ಸಾಯಬಹುದು. ಇದೇ ಕಾರಣಕ್ಕೆ ಹಾವುಗಳು ಸಾಮಾನ್ಯವಾಗಿ ಹಾಲು ಕುಡಿಯುವುದಿಲ್ಲ.
35
ಭಯಪಡುತ್ತಿದ್ದರು ಮನೆಯ ಹೆಂಗಸರು
ಪ್ರಕೃತಿ ಮತ್ತು ಪ್ರಾಣಿಗಳನ್ನು ದೇವತೆಗಳಂತೆ ಪೂಜಿಸುವುದು ಭಾರತೀಯ ಸಂಸ್ಕೃತಿಯ ಭಾಗ. ಶಿವನ ಕೊರಳಿನ ಆಭರಣ, ವಿಷ್ಣುವಿನ ಶಯನ ಹೀಗೆ ಹಲವು ದೇವರುಗಳೊಂದಿಗೆ ಹಾವುಗಳಿಗೆ ಸಂಬಂಧವಿದೆ ಎಂಬ ನಂಬಿಕೆ ಇದೆ. ಹೀಗಾಗಿಯೇ ಹಾವುಗಳನ್ನು ದೈವಸ್ವರೂಪಿ ಎಂದು ಪೂಜಿಸಲಾಗುತ್ತದೆ. ದೇವರಿಗೆ ಅರ್ಪಿಸುವಂತೆ, ಪವಿತ್ರವಾದ ಹಾಲನ್ನು ಹಾವುಗಳಿಗೂ ನೈವೇದ್ಯವಾಗಿ ಇಡುತ್ತಾರೆ. ಹುತ್ತದ ಬಳಿ ಹಾಲು ಅರ್ಪಿಸಿ ತಮ್ಮ ಭಕ್ತಿಯನ್ನು ತೋರಿಸುತ್ತಾರೆ. ಇನ್ನೊಂದು ಕಥೆಯ ಪ್ರಕಾರ, ಹಿಂದಿನ ಕಾಲದಲ್ಲಿ ಕಾಂಕ್ರೀಟ್ ಮನೆಗಳಿರಲಿಲ್ಲ. ಮಣ್ಣಿನ ಮನೆ, ಗುಡಿಸಲುಗಳೇ ಹೆಚ್ಚಾಗಿದ್ದವು. ಹೊಲಗಳ ಬಳಿಯೇ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಜನರ ಮನೆಗಳಿಗೆ ಹಾವುಗಳು ಬರುತ್ತಿದ್ದವು. ಇದನ್ನು ಕಂಡು ಮನೆಯ ಹೆಂಗಸರು ಭಯಪಡುತ್ತಿದ್ದರು. ಅವರ ಭಯವನ್ನು ಹೋಗಲಾಡಿಸಲು, ಹಾವನ್ನು ದೈವಸ್ವರೂಪ ಎಂದು ಪೂಜಿಸುವ ಸಂಪ್ರದಾಯ ಶುರುವಾಯಿತು. ಹೀಗೆ ನಾಗರ ಪಂಚಮಿಯಂತಹ ಹಬ್ಬಗಳು ಹುಟ್ಟಿಕೊಂಡವು. ಈ ಹಬ್ಬಗಳಂದು ಮಹಿಳೆಯರೇ ಹುತ್ತದ ಬಳಿ ಹೋಗಿ ಹಾಲು ಎರೆಯುತ್ತಾರೆ.
ಕೆಲವು ಹಾವಾಡಿಗರು ಜನರ ಮುಂದೆ ಹಾವುಗಳಿಂದ ಹಾಲು ಕುಡಿಸಿ ಅಚ್ಚರಿ ಮೂಡಿಸುತ್ತಾರೆ. ಇದರ ಹಿಂದೆ ಒಂದು ನೋವಿನ ತಂತ್ರ ಅಡಗಿದೆ. ಹಾವಾಡಿಗರು ಪ್ರದರ್ಶನಕ್ಕೂ ಮುನ್ನ ಹಾವಿಗೆ ಯಾವುದೇ ಆಹಾರ, ನೀರು ಕೊಡುವುದಿಲ್ಲ. ಇದರಿಂದ ತೀವ್ರ ಬಾಯಾರಿಕೆಯಿಂದ ಬಳಲುವ ಹಾವು, ತನ್ನ ಪ್ರಾಣ ಉಳಿಸಿಕೊಳ್ಳಲು ಸಿಕ್ಕ ದ್ರವ ಪದಾರ್ಥವನ್ನು (ಹಾಲು) ನೀರೆಂದು ಭಾವಿಸಿ ಕುಡಿಯುತ್ತದೆ. ಇದು ಭಕ್ತಿಯಿಂದಲ್ಲ, ಕೇವಲ ಅದರ ಪ್ರಾಣ ಸಂಕಟದಿಂದ ಮಾಡುವ ಕೆಲಸ.
55
ದಯೆ ತೋರುವುದೇ ನಿಜವಾದ ಭಕ್ತಿ
ಹೆಚ್ಚಿನ ಜನರು ಹುತ್ತದಲ್ಲಿ ಹಾವು ಇರುತ್ತದೆ ಎಂದು ಭಾವಿಸಿ ಹಾಲು ಹಾಕುತ್ತಾರೆ. ಆದರೆ ನಿಜವಾಗಿ ಹುತ್ತವನ್ನು ಕಟ್ಟುವುದು ಗೆದ್ದಲುಗಳು. ಹಾವುಗಳು ಆ ಹುತ್ತಗಳನ್ನು ಕೇವಲ ವಾಸಸ್ಥಾನವಾಗಿ ಬಳಸಿಕೊಳ್ಳುತ್ತವೆ. ಹುತ್ತಕ್ಕೆ ಹಾಲು ಹಾಕುವುದರಿಂದ ಅಲ್ಲಿ ತೇವಾಂಶ ಹೆಚ್ಚಾಗಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಹಾಲಿನಲ್ಲಿರುವ ಸಕ್ಕರೆ ಅಂಶದಿಂದ ಇರುವೆಗಳು ಮತ್ತು ಇತರ ಕೀಟಗಳು ಬಂದು ಅಲ್ಲಿ ವಾಸಿಸುವ ಹಾವಿಗೆ ತೊಂದರೆ ಕೊಡುತ್ತವೆ. ಹಾವುಗಳಿಗೆ ಹಾಲು ಅರ್ಪಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದ್ದರೂ, ವೈಜ್ಞಾನಿಕವಾಗಿ ಅದು ಅವುಗಳ ಆರೋಗ್ಯಕ್ಕೆ ಹಾನಿಕಾರಕ. ಹಾವುಗಳನ್ನು ರಕ್ಷಿಸುವುದು ಎಂದರೆ ಅವುಗಳಿಗೆ ಹಾಲು ಹಾಕುವುದಲ್ಲ, ಅವುಗಳ ವಾಸಸ್ಥಾನಗಳನ್ನು ಕಾಪಾಡುವುದು ಮತ್ತು ಹಿಂಸಿಸದೆ ಇರುವುದು. ಮೂಢನಂಬಿಕೆಗಳನ್ನು ಬದಿಗಿಟ್ಟು ಮೂಕ ಜೀವಿಗಳ ಬಗ್ಗೆ ದಯೆ ತೋರುವುದೇ ನಿಜವಾದ ಭಕ್ತಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.