1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ದನಿ ಎತ್ತಿದ್ದಕ್ಕೆ ನಟ ಮನೋಜ್ ಕುಮಾರ್ ಅವರ ಚಿತ್ರಗಳನ್ನು ಬ್ಯಾನ್ ಮಾಡಲಾಗಿತ್ತು. ಪ್ರಧಾನಿ ಇಂದಿರಾ ಗಾಂಧಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿ ಐತಿಹಾಸಿಕ ಜಯ ಸಾಧಿಸಿದ ಅವರ ರೋಚಕ ಕಥೆಯನ್ನು ಈ ಲೇಖನ ವಿವರಿಸುತ್ತದೆ.
ದೇಶದ ಇತಿಹಾಸದ ಸತ್ಯದ ಅನಾವರಣಗೊಳಿಸಿರುವ ದುರಂಧರ್ ಪಾರ್ಟ್ 1 ಮತ್ತು ಪಾರ್ಟ್ 2 ಚಿತ್ರ ಯಾವ ರೀತಿಯಲ್ಲಿ ಹಿಟ್ ಆಯಿತು, ಬಾಲಿವುಡ್ನಲ್ಲಿ ಇತಿಹಾಸ ಸೃಷ್ಟಿಸ್ತಾ ಇದೆ ಎನ್ನೋದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇ ರೀತಿ ಈ ಹಿಂದೆ ದಿ ಕೇರಳ ಸ್ಟೋರಿಯನ್ನು ಕೂಡ ದುರಂಧರ್ ರೀತಿಯಲ್ಲಿಯೇ ಪ್ರೊಪೊಗಂಡಾ ಎಂದವರು ಹಲವರು. ಆದರೂ ಸತ್ಯ ಎಂದಿಗೂ ಸತ್ಯವೇ ಎನ್ನುವುದನ್ನು ಈ ಚಿತ್ರ ಕೂಡ ಸಾಬೀತು ಮಾಡಿತ್ತು. ಆದರೆ, ಇದಕ್ಕಿಂತಲೂ ರೋಚಕವಾದ ಸ್ಟೋರಿ ಇನ್ನೊಂದಿದೆ. ಅದೇ ಪ್ರಧಾನಿ ವಿರುದ್ಧ ಕೋರ್ಟ್ನಲ್ಲಿ ಜಯ ಸಾಧಿಸಿರುವ ಸ್ಟೋರಿ ಇದು.
26
ನಟನ ಪುಣ್ಯಸ್ಮರಣೆ
ಮೊನ್ನೆಯಷ್ಟೇ ಅರ್ಥಾತ್ ಇದೇ ಏಪ್ರಿಲ್ 4ರಂದು ಈ ನಟ ನಿಧನರಾಗಿ ಒಂದು ವರ್ಷವಾಗಿದೆ. ಅವರ ಪುಣ್ಯಸ್ಮರಣೆಯ ಅಂಗವಾಗಿ ಈ ರೋಚಕ ಘಟನೆ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಕೇಳಿಬರುತ್ತಿದೆ. ಅವರೇ ಬಾಲಿವುಡ್ ಸ್ಟಾರ್ ಮನೋಜ್ ಕುಮಾರ್. 2025ರ ಏಪ್ರಿಲ್ 4ರಂದು ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ಮನೋಜ್ ಕುಮಾರ್ ಅವರನ್ನು ದೇಶಭಕ್ತಿಯ ಸಿನಿಮಾದ ಪ್ರವರ್ತಕ ಎಂದೇ ಕರೆಯಲಾಗಿತ್ತು. ಈಚಿನ ಕೆಲವು ಸ್ಟಾರ್ ನಟರ ಹಾಗೆ ಸಿನಿಮಾದಲ್ಲಿ ದೇಶ ಭಕ್ತಿ ಮೆರೆದು, ದೇಶದ ವಿಷಯ ಬಂದಾಗ ಮೌನವಾಗಿ ಕುಳಿತು ಇತರರನ್ನು ಬೆಂಬಲಿಸುವ ನಟ ಅವರಾಗಿರಲಿಲ್ಲ. ನಿಜಕ್ಕೂ ಅವರು ಭಾರತಕ್ಕಾಗಿ ಮಿಡಿದವರು.
36
ತುರ್ತು ಪರಿಸ್ಥಿತಿಯ ಕರಾಳ ಸ್ಥಿತಿ
ಅವರ ಕ್ರಾಂತಿ, ಪೂರಬ್ ಔರ್ ಪಶ್ಚಿಮ್, ರೋಟಿ ಕಪ್ಡಾ ಔರ್ ಮಕಾನ್ ಮತ್ತು ಶಹೀದ್ನಂತಹ ಚಲನಚಿತ್ರಗಳು ಅವರಿಗೆ 'ಭರತ್ ಕುಮಾರ್' ಎಂಬ ಹೆಸರನ್ನು ತಂದುಕೊಟ್ಟವು. ಆದರೆ ಅವರನ್ನು ಒಮ್ಮೆ ಚಿತ್ರರಂಗದಿಂದಲೇ ಬ್ಯಾನ್ ಮಾಡಲಾಗಿತ್ತು. ಇದಕ್ಕೆ ಕಾರಣ, 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ (Emergency). ದೇಶದಲ್ಲಿ ತುರ್ತು ಪರಿಸ್ಥಿತಿಯಿಂದ ಆಗುತ್ತಿರುವ ಸಾವು ನೋವಿನ ವಿರುದ್ಧ ದನಿ ಎತ್ತಿದವರ ದನಿಯನ್ನು ದಮನ ಮಾಡುವ ಪ್ರಯತ್ನ ನಡೆಯುತ್ತಿದ್ದ ಸಂದರ್ಭದಲ್ಲಿಯೇ, ಇದರ ವಿರುದ್ಧ ಮಾತನಾಡಿದ್ದ ನಟ ಮನೋಜ್ ಕುಮಾರ್ ಅವರ ಚಿತ್ರಗಳಿಗೆ ಸರ್ಕಾರದಿಂದಲೇ ಬ್ಯಾನ್ ಬಿಸಿ ತಟ್ಟಿತ್ತು.
ಒಂದರ ಮೇಲೊಂದರಂತೆ ಮನೋಜ್ ಕುಮಾರ್ ಚಿತ್ರವನ್ನು ಬ್ಯಾನ್ ಮಾಡಲಾಯಿತು. ಇದರಿಂದ ರೊಚ್ಚಿಗೆದ್ದ ನಟ, ಪ್ರಧಾನಿ ಇಂದಿರಾ ಗಾಂಧಿ ವಿರುದ್ಧವೇ ಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಬಹಳ ವರ್ಷ ಈ ಕೇಸ್ ನಡೆದು ಕೊನೆಗೂ ನಟನಿಗೆ ಜಯವಾಯಿತು. ಸರ್ಕಾರ ಸೋತಿತು. ಇದು ಬಾಲಿವುಡ್ ಇತಿಹಾಸದಲ್ಲಿಯೇ ಇಂದಿಗೂ ದಾಖಲಾಗಿ ಉಳಿದಿದೆ. ಈ ಸುದ್ದಿ ಆಗ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದ್ದವು.
56
ಹೊಗಳುವಂತೆ ಕೋರಿದ್ದ ಪ್ರಧಾನಿ
ಕೊನೆಗೆ ಕುತೂಹಲ ಎನ್ನುವಂತೆ, ಕೋರ್ಟ್ ಕೇಸ್ ಗೆದ್ದ ನಂತರ ಖುದ್ದು ಇಂದಿರಾಗಾಂಧಿ ನಟನ ಬಳಿ ಬಂದು ಚಿತ್ರವೊಂದನ್ನು ನಿರ್ಮಿಸುವಂತೆ, ಹಾಗೂ ಆ ಚಿತ್ರದಲ್ಲಿ ತಮ್ಮನ್ನು ಹೊಗಳುವಂತೆ ಕೇಳಿಕೊಂಡರು. ತುರ್ತು ಪರಿಸ್ಥಿತಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಆ ಚಿತ್ರವನ್ನು ಮಾಡುವಂತೆ ಕೇಳಿಕೊಳ್ಳಲಾಯಿತು. ಆದರೆ ಇದಕ್ಕೆ ನಟ ಸುತರಾಂ ಒಪ್ಪಿಲಿಲ್ಲ. ಈ ವಿಷಯವನ್ನು ಕೊನೆಗೊಂದು ದಿನ ಸಂದರ್ಶನದಲ್ಲಿ ನಟನೇ ಬಹಿರಂಗಪಡಿಸಿದ್ದರು. ಹೀಗೆ ಅನ್ಯಾಯದ ವಿರುದ್ಧ ದನಿ ಎತ್ತಿದ ಧೀಮಂತ ವ್ಯಕ್ತಿ ಎಂದು ಇಂದಿಗೂ ಗುರುತಿಸಿಕೊಳ್ಳುತ್ತಾರೆ.
66
ಶಾಸ್ತ್ರಿ ಅವರ ಅಭಿಮಾನಿ
ಇನ್ನೊಂದು ಕುತೂಹಲ ಎಂದರೆ, ಮನೋಜ್ ಕುಮಾರ್ ಅವರು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕಾರ್ಯವನ್ನು ಎಂದಿಗೂ ಶ್ಲಾಘಿಸುತ್ತಿದ್ದರು. ಅವರಲ್ಲಿ ಶ್ರದ್ಧೆ, ಭಕ್ತಿ ಇಟ್ಟಿದ್ದರು. 1965ರಲ್ಲಿ ಭಾರತ ಪಾಕಿಸ್ತಾನದ ಯುದ್ಧದ ಸಮಯದಲ್ಲಿ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಘೋಷಣೆ ಮಾಡಿದಾಗ, ಆ ಬಗ್ಗೆ ಚಿತ್ರವೊಂದನ್ನು ಮಾಡುವಂತೆ ನಟನಲ್ಲಿ ಕೇಳಿಕೊಂಡಿದ್ದರು. ಅವರ ಅಣತಿಯಂತೆಯೇ ಮೂಡಿಬಂದದ್ದು ಬ್ಲಾಕ್ ಬಸ್ಟರ್ ಚಿತ್ರ ಉಪಕಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.