ಮತ್ಸ್ಯ ಪ್ರಿಯರಿಗೆ ಸಂತಸದ ಸುದ್ದಿ: ಸರ್ಕಾರದಿಂದಲೇ ಮೀನು ಊಟದ ಹೋಟೆಲ್‌..!

By Kannadaprabha NewsFirst Published Aug 18, 2022, 9:09 AM IST
Highlights

ಮೀನು ಪ್ರಿಯರಿಗಾಗಿ ಮೀನುಗಾರಿಕಾ ಇಲಾಖೆಯ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಈಗಾಗಲೇ ಮೀನಿನ ಊಟದ ಹೋಟೆಲ್‌ ಸ್ಥಾಪನೆ

ಬೆಂಗಳೂರು(ಆ.18):  ಜನರಿಗೆ ಗುಣಮಟ್ಟದ ಮೀನಿನ ಖಾದ್ಯಗಳನ್ನು ತಲುಪಿಸಲು ರಾಜ್ಯಾದ್ಯಂತ ಖಾಸಗಿ ಸಹಭಾಗಿತ್ವದಲ್ಲಿ ಮೀನು ಊಟದ ಮನೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಜತೆಗೆ ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆಗೆ ತೀರ್ಮಾನಿಸಿದ್ದು, ತನ್ಮೂಲಕ ರಾಜ್ಯದಲ್ಲಿ ಮತ್ಸ್ಯ ಕ್ರಾಂತಿಗೆ ಪೂರ್ವ ಸಿದ್ಧತೆ ನಡೆಸಿದ್ದೇವೆ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್‌.ಅಂಗಾರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ಸ್ಯ ಕ್ರಾಂತಿ ನಡೆಯಲಿದ್ದು, ಇದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದರು.

Cholesterol Level: ರಕ್ತದಲ್ಲಿ ಏಕಾಏಕಿ ಕೊಬ್ಬು ಹೆಚ್ಚೋಕೆ ಏನ್ ಕಾರಣ ಗೊತ್ತಾ?

ಮೀನು ಪ್ರಿಯರಿಗಾಗಿ ಮೀನುಗಾರಿಕಾ ಇಲಾಖೆಯ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಈಗಾಗಲೇ ಮೀನಿನ ಊಟದ ಹೋಟೆಲ್‌ ಸ್ಥಾಪಿಸಲಾಗಿದೆ. ಆದರೆ, ಹೆಚ್ಚೆಚ್ಚು ಜನರಿಗೆ ಗುಣಮಟ್ಟದ ಮೀನಿನ ಖಾದ್ಯಗಳನ್ನು ತಲುಪಿಸಲು ಅನುವಾಗುವಂತೆ ರಾಜ್ಯಾದ್ಯಂತ ವಿಸ್ತರಿಸಲು ಹಣಕಾಸಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಸಾಧ್ಯವಾಗಿಲ್ಲ. ಈಗ ಖಾಸಗಿ ಸಹಭಾಗಿತ್ವದಡಿ ರಾಜ್ಯದ ಎಲ್ಲೆಡೆ ಮೀನು ಊಟದ ಮನೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ರೂಪುರೇಷೆ ತಿಳಿಸಲಾಗುವುದು ಎಂದರು.

ಮೊದಲ ಹಂತದಲ್ಲಿ ಬೆಂಗಳೂರಿನ ಐದು ಕಡೆ ಮೀನುಗಾರಿಕಾ ಇಲಾಖೆಯಿಂದಲೇ ಹೊಸ ಮೀನಿನ ಊಟದ ಹೋಟೆಲ್‌ಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಕೆರೆಗಳಿರುವ ಕಡೆ ಬಿಡಿಎ ಜಾಗ ಒದಗಿಸಲು ಒಪ್ಪಿದೆ ಎಂದು ಹೇಳಿದರು.

ಮೀನು ಉತ್ಪಾದನೆ ಹೆಚ್ಚಳ:

ರಾಜ್ಯದಲ್ಲಿ ಮೀನು ಉತ್ಪಾದನೆ ಹೆಚ್ಚಳಕ್ಕೂ ಹಲವು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಕೆಆರ್‌ಎಸ್‌ ಆಲಮಟ್ಟಿ,ಲಿಂಗನಮಕ್ಕಿ, ಭದ್ರಾ ಸೇರಿದಂತೆ ರಾಜ್ಯದ ಹನ್ನೆರಡು ಪ್ರಮುಖ ಜಲಾಶಯಗಳಲ್ಲಿ ಗರಿಷ್ಟಪ್ರಮಾಣದ ಮೀನು ಉತ್ಪಾದನೆ ಮಾಡಲು ತೀರ್ಮಾನಿಸಿದ್ದು, ಜತೆಗೆ ಎಲ್ಲ ಜಿಲ್ಲೆಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Health Tips: ಊಟ ಮಾಡಿದ ನಂತರ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ

ಇನ್ನು ಆಲಮಟ್ಟಿ ಜಲಾಶಯದಲ್ಲಿ ಮೀನು ಮರಿ ಸಾಕಾಣಿಕೆ ಮಾಡಲು ಇಪತ್ತೈದು ಎಕರೆ ಜಾಗವನ್ನು ನೀರಾವರಿ ಇಲಾಖೆ ಒದಗಿಸಿದ್ದು ಇದೇ ರೀತಿ ಕೆ.ಆರ್‌.ಎಸ್‌. ಲಿಂಗನಮಕ್ಕಿ, ಭದ್ರಾ ಸೇರಿದಂತೆ ಹನ್ನರಡು ಪ್ರಮುಖ ಜಲಾಶಯಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು,ಆ ಮೂಲಕ ಎಲ್ಲ ಜಲಾಶಯಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಮೀನು ಉತ್ಪಾದಿಲು ತೀರ್ಮಾನಿಸಲಾಗಿದೆ ಎಂದರು.

ಬಂದರು ಅಭಿವೃದ್ಧಿಗೆ ಕ್ರಮ:

ಮಂಗಳೂರು ಬಂದರನ್ನು ಅಭಿವೃದ್ಧಿಪಡಿಸಿ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಬಿಂದುವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಬಂದರಿನಲ್ಲಿ ಹೆಚ್ಚು ಹಡಗು,ದೋಣಿಗಳು ಬಂದು ತಂಗಲು ಅವಕಾಶ ಮಾಡಿಕೊಡಲಾಗುವುದು. ಆ ಮೂಲಕ ವಾಣಿಜ್ಯ ಚಟುವಟಿಕೆಗಳಿಗೆ, ಆಮದು-ರಪ್ತು ಕಾರ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

click me!