ಸಿರಿಧಾನ್ಯ ಇನ್ಮುಂದೆ ಶ್ರೀ ಅನ್ನ, ಬಜೆಟ್‌ನಲ್ಲಿ ಸಿರಿಧಾನ್ಯ ಉತ್ಪಾದನೆಗೆ ಹೆಚ್ಚಿನ ಮಹತ್ವ

By Vinutha PerlaFirst Published Feb 1, 2023, 4:05 PM IST
Highlights

ಭಾರತವನ್ನು ಸಿರಿಧಾನ್ಯ ತವರಾಗಿಸಲು ವಿತ್ತ ಸಚಿವರ ಪಣತೊಟ್ಟಿದ್ದಾರೆ. ಭಾರತವನ್ನು ಸಿರಿಧಾನ್ಯಗಳ ತವರನ್ನಾಗಿಸಲು ಕೇಂದ್ರ ಬಜೆಟ್ 2023-24ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ: ಭಾರತವನ್ನು ಸಿರಿಧಾನ್ಯಗಳ ತವರನ್ನಾಗಿಸಲು ಕೇಂದ್ರ ಬಜೆಟ್ 2023-24ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2023ರ ಕೇಂದ್ರ ಬಜೆಟ್‌ನ್ನು ಫೆಬ್ರವರಿ 1ರಂದು ಸಂಸತ್ತಿನಲ್ಲಿ ಮಂಡಿಸಿದರು. ಮುಂಬರುವ ವರ್ಷದ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಬಜೆಟ್‌ ಮಂಡನೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌, ಆರೋಗ್ಯ (Health) ಮತ್ತು ಪೋಷಣೆ ಮತ್ತು ಭಾರತದ ಧಾನ್ಯಗಳ (Millets) ಬಗ್ಗೆ ಮಾತನಾಡಿದರು. 

ಬಜೆಟ್‌ನಲ್ಲಿ ಸಿರಿಧಾನ್ಯ ಉತ್ಪಾದನೆಗೆ ಹೆಚ್ಚಿನ ಮಹತ್ವ
ಕೇಂದ್ರ ಬಜೆಟ್ ನಲ್ಲಿ ಈ ಬಾರಿ ನಿರ್ಮಲಾ ಸೀತಾರಾಮನ್, ಕೃಷಿ (Agriculture) ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದು, ಅದರಲ್ಲಿ ವಿಶೇಷವಾಗಿ ಸಿರಿಧಾನ್ಯ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಸಿರಿಧಾನ್ಯ ಉತ್ಪಾದನೆಗೆ ಅನೇಕ ಯೋಜನೆಗಳ ಮೂಲಕ ಸಣ್ಣ ರೈತರಿಗೆ (Farmers) ನೆರವು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಹೈದರಾಬಾದ್ ನಲ್ಲಿ ಸಿರಿಧಾನ್ಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ಸಚಿವೆ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮನ್‌ ಕಿ ಬಾತ್‌ನಲ್ಲಿ ಸಿರಿಧಾನ್ಯಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಮಾತನಾಡಿದ್ದರು. ಇದರ ಬೆನ್ನಲ್ಲೇ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್‌ನಲ್ಲಿ ಸಿರಿಧಾನ್ಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕರ್ನಾಟಕದ ಸಿರಿಧಾನ್ಯ ಕಂಪನಿಗೆ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶಹಬ್ಬಾಸಗಿರಿ!

ಭಾರತ, ಜೋಳ, ರಾಗಿ, ಬಾಜ್ರ, ಕುತ್ತು, ರಾಮದಾನ ಮತ್ತು ಸಾಮೆಯಂತಹ ಧಾನ್ಯಗಳ ಅತಿದೊಡ್ಡ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ರಫ್ತುದಾರ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಬಹಿರಂಗಪಡಿಸಿದರು. ಮಾತ್ರವಲ್ಲ ಭಾರತವು ರಾಗಿಗೆ ಜಾಗತಿಕ ಕೇಂದ್ರವಾಗಿದೆ ಎಂಬುದನ್ನು ವಿವರಿಸಿದರು.

'ಭಾರತವು ಇಡೀ ವಿಶ್ವಕ್ಕೆ ಸಿರಿಧಾನ್ಯಗಳನ್ನು ಮಹತ್ವದ ಕೊಡುಗೆಯನ್ನಾಗಿ ನೀಡಿದೆ. ಭಾರತವು ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವ ಜಗತ್ತಿನ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ. ಭಾರತದ ಪ್ರಯತ್ನದಿಂದ 2023ರ ವರ್ಷವನ್ನು ಸಿರಿಧಾನ್ಯಗಳ ವರ್ಷವೆಂದು ವಿಶ್ವಸಂಸ್ಥೆ (WHO) ಘೋಷಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರ, ಭಾರತೀಯ ರೈತರಿಗೆ ಅಪೂರ್ವವಾದ ಅವಕಾಶವನ್ನು ಕೊಟ್ಟಿದೆ. ಸಿರಿಧಾನ್ಯಗಳನ್ನು ಬೆಳೆಸಲು ಅನೇಕ ಯೋಜನೆಗಳ ಮೂಲಕ ನೆರವು ನೀಡಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಆರೋಗ್ಯ ವೃದ್ಧಿಸಲು ‘ಸಿರಿ’ಧಾನ್ಯ ಸಹಕಾರಿ

ಕೃಷಿ ವೇಗವರ್ಧನೆ ನಿಧಿಯನ್ನು ಸ್ಥಾಪಿಸಲು ನಿರ್ಧಾರ
ಅಲ್ಲದೆ, ದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಮುನ್ನಡೆಸಲು ಸಾಧ್ಯವಾಗುವಂತೆ ಕೃಷಿ ವೇಗವರ್ಧನೆ ನಿಧಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಮಾತ್ರವಲ್ಲ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇನ್ನು ಒಂದೇ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಲಭ್ಯವಾಗಲಿವೆ. ಇದಕ್ಕಾಗಿ, ಡಿಜಿಟಲ್ ಪಬ್ಲಿಕ್ ಇನ್ ಫ್ರಾಸ್ಟ್ರಕ್ಚರ್ ಸ್ಥಾಪನೆ ಮಾಡಲಾಗುತ್ತದೆ.  ಅಂತೆಯೇ ದೇಶದಲ್ಲಿರುವ 63,000 ಕೃಷಿ ಕೊಆಪರೇಟಿವ್ ಸೊಸೈಟಿಗಳನ್ನು ಕೇಂದ್ರೀಕೃತಗೊಳಿಸಲಾಗುತ್ತದೆ. ಇದಕ್ಕಾಗಿ 2,516 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗುತ್ತದೆ. ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

2024ರ ಹೊತ್ತಿಗೆ ಕೃಷಿ ಸಾಲವನ್ನು 20 ಲಕ್ಷ ಕೋಟಿ ರೂ.ಗಳಿಗೆ ಏರಿಸುವ ಸಾಧ್ಯತೆ ಇದೆ. ನ್ಯಾಷನಲ್ ಮೊನೆಸ್ಟೈಸೇಷನ್ ಪೈಪ್ ಲೈನ್ ಯೋಜನೆಗೆ 9 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ ಎಂದು ಸಚಿವೆ ಮಾಹಿತಿ ನೀಡಿದರು. 

ಸಿರಿಧಾನ್ಯಗಳು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಹೀಗಾಗಿಯೇ ಇವುಗಳನ್ನು ಪೋಷಕಾಂಶಗಳ ಪವರ್‌ಹೌಸ್ ಎಂದು ಕರೆಯಲಾಗುತ್ತದೆ. ತೂಕ ಇಳಿಕೆ, ಮಧುಮೇಹದ ಉತ್ತಮ ನಿರ್ವಹಣೆ, ಜೀರ್ಣಕ್ರಿಯೆ, ಉರಿಯೂತ, ಉತ್ತಮ ರೋಗನಿರೋಧಕ ಶಕ್ತಿಗೆ ಸಿರಿಧಾನ್ಯಗಳು ತುಂಬಾ ಒಳ್ಳೆಯದು.

click me!