
ಬೆಂಗಳೂರು: ಕಾವೇರಿ ನದಿ ನಿರ್ವಹಣೆ ಪ್ರಾಧಿಕಾರ ರಚನೆ ಬಗ್ಗೆ ತಮಿಳು ಸೂಪರ್ಸ್ಟಾರ್ ರಜನೀಕಾಂತ್ ನೀಡಿರುವ ಹೇಳಿಕೆಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಜನೀ ನಟನೆಯ 'ಕಾಲ' ಬಿಡುಗಡೆಗೆ ರಾಜ್ಯ ವಿರೋಧಿಸುತ್ತಿದೆ. ಈ ಕ್ರಮವನ್ನು ಬಹು ಭಾಷಾ ನಟ ಪ್ರಕಾಶ್ ವಿರೋಧಿಸಿದ್ದು, 'ಕಾವೇರಿಗೂ, 'ಕಾಲ'ಗೂ ಏನು ಸಂಬಂಧ?' ಎಂದು ಪ್ರಶ್ನಿಸಿದ್ದಾರೆ.
'ನದಿಗೂ ಮನುಷ್ಯನಿಗೂ ಇರುವ ಸಂಬಂಧ ತುಂಬಾ ಆಪ್ತವಾದದ್ದು, ಜೀವನ್ಮುಖಿಯಾದದ್ದು. ಕಾವೇರಿಯೊಂದಿಗೆ ಕನ್ನಡಿಗರು ಹಾಗೂ ತಮಿಳಿಗರು ಅಂಥದ್ದೊಂದು ಸಂಬಂಧವನ್ನಿಟ್ಟುಕೊಂಡಿರುವುದು ಹೌದು. ಆದರೆ, ಈ ಸಮಸ್ಯೆಯನ್ನು ಭಾವನಾತ್ಮಕವಾಗಿ ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಹೋರಾಟದಿಂದ ಕೇಂದ್ರ ಸರಕಾರವನ್ನು ಕಾರ್ಯೋನ್ಮುಖರನ್ನಾಗಿ ಮಾಡಬೇಕೇ ಹೊರತು, ನಮ್ಮ ಭಾವುಕತೆಗೆ ನಾವೇ ಬಲಿಯಾಗಬಾರದು,' ಎಂದು #JustAsking ಹ್ಯಾಷ್ ಟ್ಯಾಗ್ನಟಿ ರೈ ಟ್ವೀಟ್ ಮಾಡಿದ್ದಾರೆ.
"
'ನಟನೊಬ್ಬನ ಹೇಳಿಕೆಗೆ ಯಾವುದೇ ಸಂಬಂಧವಿಲ್ಲದ ನಿರ್ಮಾಪಕನ ಬಂಡವಾಳದ ಗತಿ ಏನಾಗಬೇಕು? ನೂರಾರು ತಂತ್ರಜ್ಞರು, ಸಹಕಲಾವಿದರು, ಸಾವಿರಾರು ಕಾರ್ಮಿಕರ ದುಡಿಮೆಯ, ಪ್ರತಿಭೆಯ ಪ್ರತಿಫಲವೇನು? ಪೋಸ್ಟರ್ ಅಂಟಿಸುವವರಿಂದ ಹಿಡಿದು, ಸೈಕಲ್ ಸ್ಟ್ಯಾಂಡ್ ನಡೆಸುವ, ಕ್ಯಾಂಟೀನ್ ನಡೆಸುವ ಮಂದಿಯ ಪರಿಸ್ಥಿತಿ ಏನು? ಥೀಯೇಟರ್ ಮಾಲೀಕರ, ಅವರನ್ನು ಅವಲಂಬಿಸಿದ ನೌಕರರ ಗತಿ ಏನಾಗಬೇಕು?' ಎಂದು ರೈ ಪ್ರಶ್ನಿಸಿದ್ದಾರೆ.
'ಇವು ನನ್ನ ಅಂತಃಕರಣದ ಪ್ರಶ್ನೆಗಳು. ಈ ಪ್ರಶ್ನೆಗಳಿಗಾಗಿ ನನ್ನನ್ನು ಕೆಲವರು ಕನ್ನಡ ದ್ರೋಹಿ,' ಎಂದು ಪಟ್ಟಕಟ್ಟಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಇತ್ತೀಚೆಗೆ ಪ್ರಶ್ನಿಸಿದ್ದಕ್ಕೆ ಹಿಂದೂ ದ್ರೋಹಿ, ದೇಶ ದ್ರೋಹಿ ಎಂದು ಪಟ್ಟಕಟ್ಟಿದವರನ್ನೂ ಕಂಡಿದ್ದೇನೆ. ಆದರೆ ಹೇಳಬೇಕಾದ್ದನ್ನು ಹೇಳಿಯೇ ತೀರಬೇಕು. ಉಳಿದಿದ್ದನ್ನು ನಿಮ್ಮ ವಿವೇಚನೆಗೆ ಬಿಟ್ಟಿದ್ದೇನೆ,' ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.