ವಿಷ್ಣುವರ್ಧನ್, ಅನಂತನಾಗ್ ನಟನೆ ಈ ಸಿನಿಮಾಗಳನ್ನ ನೋಡಿಲ್ಲ ಅಂದ್ರೆ ಮಿಸ್ ಮಾಡದೇ ನೋಡಿ

Published : Aug 07, 2024, 11:08 AM ISTUpdated : Aug 07, 2024, 11:56 AM IST
ವಿಷ್ಣುವರ್ಧನ್, ಅನಂತನಾಗ್ ನಟನೆ ಈ ಸಿನಿಮಾಗಳನ್ನ ನೋಡಿಲ್ಲ ಅಂದ್ರೆ ಮಿಸ್ ಮಾಡದೇ ನೋಡಿ

ಸಾರಾಂಶ

ಇಂದು ನಾವು ನಿಮಗೆ ಮನೆಮಂದಿಯೆಲ್ಲಾ ಜೊತೆಯಾಗಿ ಕುಳಿತು ನೋಡಬಹುದಾ ಸುಂದರ ಸಾಮಾಜಿಕ, ಕೌಟುಂಬಿಕ ಕಥಾ ಹಂದರವುಳ್ಳ ಕನ್ನಡ ಸಿನಿಮಾಗಳ ಬಗ್ಗೆ ಹೇಳುತ್ತಿದ್ದೇವೆ.

ಬೆಂಗಳೂರು: ಇಂದು ಎಲ್ಲರ ಕೈಯಲ್ಲಿ ಮೊಬೈಲ್, ಮನೆಯಲ್ಲಿ ಸ್ಮಾರ್ಟ್ ಟಿವಿ ಇದ್ದೇ ಇರುತ್ತದೆ. ಅಮೆಜಾನ್, ಜಿ5,ನೆಟ್‌ಫ್ಲಿಕ್ಸ್, ಜಿಯೋ ಟಿವಿ, ವೂಟ್, ಸೋನಿ ಲಿವ್ ಹೀಗೆ ಹಲವು ಒಟಿಟಿ ಪ್ಲಾಟ್‌ಫಾರಂಗಳಲ್ಲಿ ಸಿನಿಮಾ ಸೇರಿದಂತೆ ಮನರಂಜನೆ ಕಾರ್ಯಕ್ರಮಗಳನ್ನ ನೋಡಬಹುದು. ಯುಟ್ಯೂಬ್‌ನಲ್ಲಿಯೂ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸಿಬಹುದು. ಇಂದು ನಾವು ನಿಮಗೆ ಮನೆಮಂದಿಯೆಲ್ಲಾ ಜೊತೆಯಾಗಿ ಕುಳಿತು ನೋಡಬಹುದಾ ಸುಂದರ ಸಾಮಾಜಿಕ, ಕೌಟುಂಬಿಕ ಕಥಾ ಹಂದರವುಳ್ಳ ಕನ್ನಡ ಸಿನಿಮಾಗಳ ಬಗ್ಗೆ ಹೇಳುತ್ತಿದ್ದೇವೆ. ಈ ಸಿನಿಮಾಗಳಲ್ಲಿ ನಗು, ಹಾಸ್ಯ, ದುಃಖ ಸೇರಿದಂತೆ ಎಲ್ಲಾ ನವರಸಗಳನ್ನು ಹೊಂದಿವೆ. ಇದೆಲ್ಲದರ ಜೊತೆ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸುತ್ತದೆ. ಇಂತಹ ಸಂದೇಶಗಳು ಇಂದಿನ ಸಿನಿಮಾದಲ್ಲಿ ಇರಲ್ಲ. ಹಾಗಾದ್ರೆ ಕನ್ನಡದ ಆ ಅದ್ಭುತ ಚಿತ್ರಗಳು ಯಾವವು ಎಂಬುದನ್ನು ನೋಡೋಣ ಬನ್ನಿ.

1.ಮದುವೆ ಮಾಡು ತಮಾಷೆ ನೋಡು
ಬಡ ಕುಟುಂಬದ ಓರ್ವ ಅಣ್ಣ ಹೇಗೆ ಮನೆ ನಡೆಸುತ್ತಾನೆ ಮತ್ತು ಹೇಗೆ ತಂಗಿ ಮದುವೆ ಮಾಡುತ್ತಾನೆ ಅನ್ನೋದು ಚಿತ್ರದ ಒನ್‌ಲೈನ್ ಕಥೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ರಂಗನಾಯಕಿ ಆರತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಡೀ ಮನೆಯ ಜವಾಬ್ದಾರಿ ಹೊತ್ತಿರುವ ಅಣ್ಣನ ಹೆಗಲ್ಮೇಲೆ ತಮ್ಮಂದಿರ ಓದು, ತಂಗಿಯ ಮದುವೆಯ ಜವಾಬ್ದಾರಿ ಇರುತ್ತದೆ. ತಂಗಿ ಗೌರಿ  ಮದುವೆ ಸುತ್ತವೇ ಸಿನಿಮಾ ಸಾಗುತ್ತದೆ. ವಿಶೇಷ ಪಾತ್ರದಲ್ಲಿ ಜೈಜಗದೀಶ್, ದ್ವಾರಕೀಶ್, ಬಡ್ಡಿ ಬಂಗಾರಮ್ಮ ಖ್ಯಾತಿಯ ಉಮಾ ಶಿವಶಂಕರ್, ಶ್ರೀನಿವಾಸ ಮೂರ್ತಿ, ಮಹಾಲಕ್ಷ್ಮೀ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿತ್ತು. ಚಿ ಉದಯ್ ಶಂಕರ್ ಅವರ ಕಥೆಗೆ ಸತ್ಯ ನಿರ್ದೇಶನ ಮಾಡಿದ್ದರು. ದ್ವಾರಕೀಶ ಚಿತ್ರ ಬಂಡವಾಳ ಹೂಡಿಕೆ ಮಾಡಿತ್ತು. 1984ರಲ್ಲಿ ಈ ಚಿತ್ರ ಬಿಡುಗಡೆಗೊಂಡಿತ್ತು. ಯುಟ್ಯೂಬ್‌ನಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.

2.ನಾರದ ವಿಜಯ
ಇದೊಂದು ಸಸ್ಪೆನ್ಸ್ ವಿಥ್ ಕಾಮಿಡಿ ಸಿನಿಮಾ ಆಗಿದ್ದು, ಇದರಲ್ಲಿ ಅನಂತ್‌ನಾಗ್ ಮತ್ತು ಪ್ರಿಯದರ್ಶಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್‌ನಾಗ್ ನಾರದ ಹಾಗೂ ವಿಜಯ ಪಾತ್ರದಲ್ಲಿ ನಟಿಸಿದ್ದಾರೆ. ಭಕ್ತನ ಸಾವಿಗೆ ಮಿಡಿಯವ ವಿಷ್ಣು ಆತನ ಕೊಲೆ ಕೇಸ್ ಪತ್ತೆ ಮಾಡಲು ನಾರದನನ್ನು ಭೂಲೋಕಕ್ಕೆ ಕಳುಹಿಸುತ್ತಾನೆ. ಭೂಮಿಗೆ ಬರುವ ನಾರದ ತನ್ನಂತೆ ಇರೋ ವಿಜಯನನ್ನು ನೋಡಿ ಶಾಕ್ ಆಗುತ್ತಾನೆ. ವಿಜಯ್ ಸಿಐಡಿ ಅಧಿಕಾರಿಯಾಗಿದ್ದು, ಇದೇ ಕೇಸ್ ತನಿಖೆ ಮಾಡುತ್ತಿರುತ್ತಾನೆ. ವಿಜಯ್ ಮತ್ತು ನಾರದ ಯಾರೆಂದು ತಿಳಿದುಕೊಳ್ಳಲು ಜನರು ಮಾಡಿಕೊಳ್ಳುವ ದೃಶ್ಯಗಳು ನಗು ತರಿಸುತ್ತವೆ. ನಾರದ ಮತ್ತು ವಿಜಯ ಹೇಗೆ ಪ್ರಕರಣವನ್ನು ಬೇಧಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿ ನೋಡಿಯೇ ತಿಳಿದುಕೊಳ್ಳಬೇಕು. 1980ರಲ್ಲಿ ಬಿಡುಗಡೆಯಾದ ಈ ಚಿತ್ರ ಯುಟ್ಯೂಬ್‌ನಲ್ಲಿ ಲಭ್ಯವಿದೆ. 

3.ಯಾರಿಗೂ ಹೇಳ್ಬೇಡಿ 
ಬಾಡಿಗೆ ಮನೆಯಲ್ಲಿ ವಾಸಿಸುವ ಜನರಿಗೆ ಸ್ವಂತ ಸೂರು ಮಾಡಿಕೊಳ್ಳಬೇಕು ಅನ್ನೋದು ಮಧ್ಯಮ ವರ್ಗದವರು ಕನಸು. ಇಂತಹ ಕನಸು ಕಂಡ ಮಹಿಳೆಯರಿಗೆ ಮೋಸ ಮಾಡಲು ಬರುವ ವ್ಯಕ್ತಿಯೇ ಗೋವಿಂದಣ್ಣ. ಮನೆ ಗಂಡಸರೆಲ್ಲಾ ಕೆಲಸಕ್ಕೆ ಹೋದ್ಮೆಲೆ ವಠಾರಕ್ಕೆ ಎಂಟ್ರಿ ಕೊಡುವ ಗೋವಿಂದ ನೂರಾರು ಸುಳ್ಳುಗಳನ್ನ  ಯಾಮಾರಿಸಿ ದುಡ್ಡು ಕಿತ್ತುಕೊಳ್ಳುತ್ತಾನೆ. ಹೀಗೆ ಪಡೆದ ಹಣವನನ್ನು ಗೋವಿಂದಣ್ಣ ಏನು ಮಾಡುತ್ತಾನೆ? ಮಹಿಳೆಯರ ಮನೆ ಕನಸು ನನಸಾಗುತ್ತಾ ಅನ್ನೋದು ಚಿತ್ರದ ಕತೆ. ಗೋವಿಂದಣ್ಣನ ಪಾತ್ರದಲ್ಲಿ ಅನಂತ್ ನಾಗ್, ವಠಾರದ ಮಹಿಳೆಯರಾಗಿ ವಿನಯ ಪ್ರಸಾದ್, ವೈಶಾಲಿ ಕಾಸರವಳ್ಳಿ, ತಾರಾ, ಗಿರಿಜಾ ಲೋಕೇಶ್ ನಟಿಸಿದ್ದಾರೆ.  ಸರೋಜಮ್ಮನ ಪತಿ ರಾಮರಾಯ ( ಲೋಕೇಶ್ ), ಸುಶೀಲಮ್ಮನ ಗಂಡ ದೊಡ್ಡಣ್ಣ ಸಹ ನಟಿಸಿದ್ದಾರೆ. ಈ ಚಿತ್ರವನ್ನು ಸಹ ನೀವು ಯುಟ್ಯೂಬ್‌ನಲ್ಲಿ ನೋಡಬಹುದಾಗಿದೆ.

4.ಉಂಡು ಹೋದ ಕೊಂಡು ಹೋದ
ಊರಲ್ಲಿ ಬರಗಾಲ, ಮಕ್ಕಳಿಗೆ ಕುಡಿಯಲು ಹಾಲು ಇಲ್ಲ, ಅದೊಂದು ಮುಗ್ಧ ಜನರು ವಾಸಿಸುವ ಪುಟಾಣಿ ಗ್ರಾಮ. ಇಂತಹ ಗ್ರಾಮಕ್ಕೆ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಅನಂತ್ ನಾಗ್ ಬರುತ್ತಾರೆ. ನಿಮಗೆಲ್ಲರಿಗೂ ಸರ್ಕಾರದ ಹಣದಲ್ಲಿ ಹಸು ಕೊಡಿಸೋದಾಗಿ ಆಸೆ ಹುಟ್ಟಿಸುವ ನಾಯಕ ನಟ ಗ್ರಾಮಸ್ಥರ ವಿಶ್ವಾಸ ಗಳಿಸುತ್ತಾನೆ. ನಾನು ಕೌ ಇನ್‌ಸ್ಪೆಕ್ಟರ್ ಆಗಿದ್ದು, ಹಸುವಿನ ಬೆಲೆಯ ನಾಲ್ಕು ಭಾಗದಲ್ಲಿಯ ಒಂದು ಭಾಗದ ಹಣ ನೀಡಬೇಕು ಎಂದು ಹೇಳುತ್ತಾನೆ. ಬಡ ಗ್ರಾಮಸ್ಥರು ಹಣ ಸೇರಿಸಲು ಕಷ್ಟಪಡೋದು ನೋಡಿದ್ರೆ ಕಣ್ಣೀರು ಬರುತ್ತೆ. ಗ್ರಾಮಸ್ಥರಿಗೆ ಹಾಲು ಕೊಡುವ ಸಿಗುತ್ತಾ? ಹಣವೆಲ್ಲಾ ದೋಚಿಕೊಂಡು ಅನಂತ್‌ನಾಗ್ ಎಲ್ಲಿ ಹೋಗುತ್ತಾನೆ? ಮತ್ತೆ ಗ್ರಾಮಕ್ಕೆ ಬರುತ್ತಾನಾ ಅನ್ನೋದು ಸಿನಿಮಾ ಕತೆ. ಈ ಚಿತ್ರವನ್ನು ಸಹ ನೀವು ಯುಟ್ಯೂಬ್‌ನಲ್ಲಿ ನೋಡಬಹುದಾಗಿದೆ.

ಈ ಮೂರು ಸಿನಿಮಾಗಳು ಹಾರ್ಟ್‌ಬೀಟ್ ಹೆಚ್ಚಿಸುತ್ತೆ! ಹುಷಾರ್, ನಿಮ್ಮ ಮೈಂಡ್ ಹ್ಯಾಂಗ್ ಆಗಬಹುದು!

5.ಗುರು ಶಿಷ್ಯರು
ಇದೊಂದು ಪೌರಾಣಿಕ ಕಥಾಹಂದರವುಳ್ಳ ಸಿನಿಮಾವಾಗಿದ್ದು, ಗಂಧರ್ವ ಕನ್ಯೆಯಾಗಿ ಮಂಜುಳಾ ಮಿಂಚಿದ್ರೆ, ರಾಜಕುಮಾರನ ಪಾತ್ರದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದಾರೆ. ಗಂಧರ್ವಕನ್ಯೆಯ ಶಾಪಕ್ಕೆ ತುತ್ತಾಗುವ ಋಷಿಗಳು ಬುದ್ದಿಹೀನರಾಗಿ ರಾಜಮನೆತನದ ಧರ್ಮಗುರುಗಳ ಬಳಿ ಆಶ್ರಯ ಪಡೆದುಕೊಳ್ಳುತ್ಥಾರೆ. ಇತ್ತ ಭೂಲೋಕಕ್ಕೆ ಬಂದ ಗಂಧರ್ವಕನ್ಯೆ ರಾಜಕುಮಾರನ ಸ್ಪರ್ಶದಿಂದ ಮಾನವಕನ್ಯೆಯಾಗಿ ಬದಲಾಗುತ್ತಾಳೆ. ಋಷಿಮುನಿಗಳು ಶಾಪದಿಂದ ವಿಮೋಚನೆಗೊಳ್ಳುತ್ತಾರಾ? ಮಂಜುಳಾ ಮತ್ತೆ ಗಂಧರ್ವಲೋಕಕ್ಕೆ ಹಿಂದಿರುಗುತ್ತಾಳಾ ಎಂಬವುದು ಸಿನಿಮಾದ ಸಸ್ಪೆನ್ಸ್. ಈ ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಫೇಮಸ್. ಸಿಂಗಿಂಗ್ ಶೋ ಇರಲಿ ಅಥವಾ ಡ್ಯಾನ್ಸಿಂಗ್ ಕಾರ್ಯಕ್ರಮವಿರಲಿ ಈ ಚಿತ್ರದ ಹಾಡುಗಳು ಕೇಳಿಸುತ್ತವೆ. 

6.ದೇವರ ದುಡ್ಡು
ಕಲಾತಪಸ್ವಿ ರಾಜೇಶ್, ಪ್ರಣಯ ರಾಜ ಶ್ರೀನಾಥ್ ಈ ಸಿನಿಮಾದ ಪ್ರಮುಖ ಪಾತ್ರಧಾರಿಗಳು. ಸಿನಿಮಾದಲ್ಲಿ ನಾಯಕ ರಾಜೇಶ್ ಪತ್ನಿ ದೈವ ಭಕ್ತೆ. ಎಲ್ಲವೂ ದೇವರ ಅನುಗ್ರಹದಿಂದಲೇ ನಡೆಯುತ್ತೆ ಎಂದು ನಂಬುತ್ತಿರುತ್ತಾಳೆ. ಆದ್ರೆ ನಾಯಕ ಪತ್ನಿಗೆ ತದ್ವಿರುದ್ಧ. ಈ ಸಮಯದಲ್ಲಿ ನಾಯಕನಿಗೆ ದೇವರ ಬಗ್ಗೆ ಮನವರಿಕೆ ಮಾಡಲು ಶ್ರೀಕೃಷ್ಣ ಭೂಮಿಗೆ ಬರುತ್ತಾನೆ. ಶ್ರೀಕೃಷ್ಣನ ಪಾತ್ರದಲ್ಲಿ ಶ್ರೀನಾಥ್ ನಟಿಸಿದ್ದಾರೆ. ಈ ಚಿತ್ರದ ಏನ್ರಿ ಕೃಷ್ಣಸ್ವಾಮಿ ಡೈಲಾಗ್ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ.

ಎಲ್ಲಾ ಎಲ್ಲೆಗಳನ್ನು ಮೀರಿದ ಸಿನಿಮಾಗಳು... ಮನೆಯವರೊಂದಿಗೆ ಅಲ್ಲ ಸಂಗಾತಿ ಜೊತೆ ಏಕಾಂತದಲ್ಲಿ ನೋಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌