ಕನ್ನಡದ ಅಣ್ಣಾವ್ರ ಪಾತ್ರ, ಆ್ಯಕ್ಟಿಂಗ್ ಮುಂದೆ ಯಾವ ಆದಿಪುರುಷ್ ಸಿನಿಮಾನೂ ಇಲ್ಲ!

By Suvarna NewsFirst Published Jun 20, 2023, 10:08 AM IST
Highlights

ಆದಿಪುರುಷ ಸಿನಿಮಾ ರಿಲೀಸ್ ಆಗಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಇದೀಗ ಅಣ್ಣಾವ್ರ ಸಿನಿಮಾಗಳ ಜೊತೆ ಈ ಚಿತ್ರವನ್ನು ಹೋಲಿಸಿ ಜನ ಹಿಗ್ಗಾಮುಗ್ಗ ಝಾಡಿಸ್ತಿದ್ದಾರೆ.

ಆದಿಪುರುಷ ಸಿನಿಮಾ ರಿಲೀಸ್‌ಗೂ ಮುನ್ನ ಹಾಗೂ ರಿಲೀಸ್ ಆಗ್ತಿರೋ ಹಾಗೆ ಎಬ್ಬಿಸಿರೋ ಹವಾ ಅಷ್ಟಿಷ್ಟಲ್ಲ. ಅವರ್ಯಾರೋ ಎಷ್ಟೋ ಸಾವಿರ ಟಿಕೇಟ್ ಖರೀದಿಸಿದರಂತೆ, ಮತ್ಯಾರೋ ಥಿಯೇಟರ್‌ನಲ್ಲಿ ಹನುಮಂತನಿಗೆ ಅಂತ ಒಂದು ಸೀಟಿಟ್ಟಿದ್ದರಂತೆ, ಅದರ ಮೇಲೆ ಯಾರೋ ಬಂದು ಕೂತಾಗ ಹಿಗ್ಗಾಮಗ್ಗಾ ಥಳಿಸಿದ್ರಂತೆ, ಇದಕ್ಕೆ ಮುಟ್ಟಾಗಿರೋ ಹೆಣ್ಮಕ್ಕಳು ಬರಬಾರದಂತೆ.. ಹೀಗೆ ಏನೇನೋ ಹೈಪ್‌ಗಳು, ಬಿಲ್ಡಪ್‌ಗಳು. ಸೋ ಇದರಿಂದ ಪ್ರೇಕ್ಷಕರ ಎಕ್ಸ್‌ಪೆಕ್ಟೇಶನ್ಸೂ ಹೆಚ್ಚಾಯ್ತು ಅನ್ನಿ. ಮೊದಲ ದಿನದ ಶೋವನ್ನು ಜನ ಮುಗಿಬಿದ್ದೇ ನೋಡಿದ್ರು. ಹಾಗೆ ನೋಡಿದರೆ ನಮ್ಮ ಜನರಿಗೆ ರಾಮಾಯಣ, ಮಹಾಭಾರತದ ಕಥೆಗಳು ಹೊಸತೇನೂ ಅಲ್ಲ. ಹೆಚ್ಚಿನವರು ಬೇರೆ ಬೇರೆ ರೂಪಗಳಲ್ಲಿ ಇದನ್ನು ಕಥೆಯಾಗಿ ಕೇಳಿ, ಸಿನಿಮಾಗಳಲ್ಲಿ ನೋಡಿಯೇ ಬೆಳೆದಿರ್ತಾರೆ. ಜನರಿಗೆ ಗೊತ್ತಿರುವ ಕಥೆಯನ್ನೇ ಹೊಸತಾಗಿ ಪ್ರೆಸೆಂಟ್ ಮಾಡೋದು ಚಾಲೆಂಜಿಂಗ್. ಆದರೆ ಈ ಸಿನಿಮಾದಲ್ಲಿ ಕತೆಯನ್ನು ಪ್ರೆಸೆಂಟ್ ಮಾಡಿದ ರೀತಿಯಲ್ಲಾಗಲೀ, ಕಲಾವಿದರಿಂದ ಅಭಿನಯ ತೆಗೆಸಿದ ಬಗೆಯಲ್ಲಾಗಲೀ ಹೊಸತನ ಕಾಣೋದಿಲ್ಲ. ಬದಲಾಗಿ ಇರೋದನ್ನೇ ನೀಟಾಗಿ ಪ್ರೆಸೆಂಟ್ ಮಾಡಲಾಗದೇ ಏನೋ ಮಾಡಲು ಹೋಗಿ ನಗೆಪಾಟಲಿಗೆ ಗುರಿಯಾದದ್ದನ್ನು ನೋಡಬಹುದು.

ಮತ್ತೊಂದು ವಿಚಾರ ಅಂದ್ರೆ ತಾವು ಹುಟ್ಟಿ ಬೆಳೆದಾಗಿಂತ ಕೇಳುತ್ತ ಬಂದಿರುವ ಈ ಕತೆಗಳ ಜೊತೆಗೆ ಜನ ಎಮೋಶನಲ್‌ ಆಗಿ ಕನೆಕ್ಟ್ ಆಗಿರುತ್ತಾರೆ. ಆ ಭಾವನೆಗಳನ್ನು ಗೌರವಿಸಿ ಮುಂದುವರಿದರೆ ಉತ್ತಮ. ಆದರೆ ಈ ಸಿನಿಮಾದಲ್ಲಿ ಜನರ ಎಮೋಶನ್‌ಗಳಿಗೆ ಹರ್ಟ್ ಆಗುವ ಕೆಲವು ವಿವರಗಳೂ ಇವೆ. ರಾವಣನ ಬ್ರಾಹ್ಮಣ್ಯದ ಬಗ್ಗೆ, ಅದನ್ನು ಸಿನಿಮಾದಲ್ಲಿ ಹೀನಯಾವಾಗಿ ಚಿತ್ರಿಸಿರೋದರ ಬಗ್ಗೆಯೂ ಚರ್ಚೆ ಆಗ್ತಿದೆ.

Latest Videos

ವಿವಾದದ ಮಧ್ಯೆಯೂ 3 ದಿನದಲ್ಲಿ 340 ಕೋಟಿ ರು. ಗಳಿಕೆ: ಆದಿಪುರುಷ ಸಂಭಾಷಣೆಕಾರನಿಗೆ ಭಾರಿ ಭದ್ರತೆ

ಆದರೆ ಇನ್ನೊಂದು ಆಸಕ್ತಿಕರ ಬೆಳವಣಿಗೆ ಅಂದರೆ ನಮ್ಮ ಕನ್ನಡದ ಜನ ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತ ಬೆಳೆದವರು. ಅಣ್ಣಾವ್ರು ಮಾಡಿರುವ ರಾಮ, ರಾವಣ ಪಾತ್ರಗಳು ಜನರಲ್ಲಿ ರಾಮಾಯಣದ ಬಗೆಗಿನ ಪ್ರೀತಿಯನ್ನು ಹೆಚ್ಚಿಸುತ್ತಲೇ ಹೋಯಿತು. ಎಲ್ಲಾ ಪಾತ್ರಗಳನ್ನೂ ಅದರಲ್ಲೂ ಪೌರಾಣಿಕ ಪಾತ್ರಗಳನ್ನು ಅದ್ಭುತವಾಗಿ ಅಭಿನಯಿಸುವ ಅಣ್ಣಾವ್ರು ರಾಮ, ರಾವಣರ ಪಾತ್ರಗಳಿಗೂ ಅದ್ಭುತವಾಗಿ ಜೀವ ತುಂಬಿದ್ದಾರೆ. ನಮ್ಮ ಕನ್ನಡಿಗರು ಅಂಥಾ ಸಂವೇದನಾಶೀಲ ನಟನೆಯನ್ನು, ಆ ಮೂಲಕ ತಾವು ರಾಮಾಯಣ, ಮಹಾಭಾರತಗಳನ್ನು ಆರಾಧನಾ ಭಾವದಿಂದ ನೋಡುತ್ತಾರೆ. ಈ ನಡುವೆ ಆದಿಪುರುಷದಂಥಾ ಚಿತ್ರ ಬಂದಿದೆ.

ಅಣ್ಣಾವ್ರ ಪಾತ್ರಗಳನ್ನು ನೋಡ್ಕೊಂಡು ಬೆಳೆದ ಜನರಿಗೆ ಪ್ರಭಾಸ್ ನಟನೆ ಅದರ ಮುಂದೆ ಏನೇನೂ ಅಲ್ಲ ಅನಿಸ್ತಿದೆ. ಅದ್ಭುತವಾದ ಅಣ್ಣಾವ್ರ ಅಭಿನಯ ಎಲ್ಲ, ಪೇಲವವಾದ, ಸರಿಯಾಗಿ ಯಾವ ಭಾವವನ್ನೂ ಪ್ರೇಕ್ಷಕರ ಜೊತೆಗೆ ಕನೆಕ್ಟ್(Connect) ಮಾಡಲಾಗದ ಪ್ರಭಾಸ್ ನಟನೆ ಎಲ್ಲಿ ಅಂತ ಜನ ಸೋಷಿಯಲ್ ಮೀಡಿಯಾಗಳಲ್ಲಿ ಕಮೆಂಟ್(Comment) ಮಾಡ್ತಿದ್ದಾರೆ. ಅಣ್ಣಾವ್ರ ರಾವಣ ಪಾತ್ರವನ್ನು ಆದಿಪುರುಷದಲ್ಲಿ ಸೈಫ್ ಮಾಡಿರುವ ರಾವಣ ಪಾತ್ರವನ್ನೂ ಜನ ಹೋಲಿಕೆ ಮಾಡಿ ನೋಡ್ತಿದ್ದಾರೆ.

ರಾಮಾಯಣಕ್ಕೆ 'ಆದಿಪುರುಷ'ಗಿಂತ ದೊಡ್ಡ ಅಗೌರವ ಇನ್ನೊಂದಿಲ್ಲ: ಮುಖೇಶ್ ಖನ್ನಾ ಆಕ್ರೋಶ

ಅಲ್ಲಿಗೆ ಹಿಂದಿನ ಅಣ್ಣಾವ್ರ ಸಿನಿಮಾಗಳಲ್ಲಿನ ಮೌಲ್ಯ, ಅಭಿನಯ, ಕಥೆಯನ್ನು ನಿರೂಪಿಸುವ ರೀತಿ ಎಲ್ಲವೂ ಈಗ ಬದಲಾಗಿದೆ. ಅಫ್‌ಕೋರ್ಸ್ ಕಾಲಕ್ಕೆ ತಕ್ಕಂತೆ ಬದಲಾಗಲೇಬೇಕು. ಆದರೆ ಆ ಬದಲಾವಣೆ ಕೇವಲ ಟೆಕ್ನಾಲಜಿಯಲ್ಲಿ ತಂದರೆ ಸಾಕೇ, ನಟನೆ, ಕಂಟೆಂಟ್‌ನಲ್ಲಿ ಆ ಗಟ್ಟಿತನ ತರೋದು ಸಾಧ್ಯವಿಲ್ಲವೇ? ಅಣ್ಣಾವ್ರ ಲೆವೆಲ್‌ನ(Level) ನಟನೆ ಯಾರಿಂದಲೂ ನಿರೀಕ್ಷೆ ಮಾಡಲಾಗದು. ಅದು ಸಾಧ್ಯವಾಗದ ಮಾತು ಕೂಡ. ಆದರೆ ರಾಮಾಯಣದಂಥಾ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡುವಾಗ ಒಂದು ಲೆವೆಲ್‌ಗಾದರೂ ಸ್ಟಾಂಡರ್ಡ್, ಸಹಜತೆ ಇರಬೇಕಲ್ವಾ? ವಿಎಫ್‌ಎಕ್ಸ್‌ ತಂದು ಏನೇನೋ ಮಾಡಲು ಹೊರಟು ರಾಮಾಯಣದಂಥಾ ಕಲಾಕೃತಿಯನ್ನು ಹಾಳು ಮಾಡೋದು ಎಷ್ಟು ಸರಿ ಅನ್ನೋದು ಜನರ ಮಾತು. ಅಣ್ಣಾವ್ರ ಸಿನಿಮಾ ಲೆವೆಲ್‌ಗೆ ಬರಲಾಗದಿದ್ದರೆ ಪರ್ವಾಗಿಲ್ಲ, ಒಂದು ಹಂತಕ್ಕಾದರೂ ಈ ಸಿನಿಮಾ ಇರಬೇಕಲ್ವಾ ಅಂತ ಜನ ಮಾತಾಡಿಕೊಳ್ತಿದ್ದಾರೆ.

ಶ್ರೀ ರಾಮಾಂಜನೇಯಯುದ್ಧ, ಮಹಾಸತಿ ಅನಸೂಯ, ಸತ್ಯ ಹರಿಶ್ಛಂದ್ರ, ಶ್ರೀ ಕೃಷ್ಣ ಗಾರುಡಿ, ಭಕ್ತ ಪ್ರಹ್ಲಾದ, ಶ್ರೀನಿವಾಸ ಕಲ್ಯಾಣ, ಭಕ್ತ ಚೇತ, ಭೂ ಕೈಲಾಸ, ಓಹಿಲೇಶ್ವರ, ಸತಿ ಸುಕನ್ಯ, ಬಭ್ರುವಾಹನ, ನವಕೋಟಿ ನಾರಾಯಣಿ, ಸ್ವರ್ಣ ಗೌರಿ, ನಾಗ ಪೂಜೆ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ ಸೇರಿ ನೂರಾರು ಭಕ್ತಿ ಪ್ರಧಾನ ಚಿತ್ರಗಳ ಮೂಲಕ ಡಾ. ರಾಜ್‌ಕುಮಾರ್ ಕನ್ನಡಿಗರಿಗೆ ಮನೋರಂಜನೆಯ ರಸದೌತಣ ನೀಡಿದವರು.

 

click me!