ಯಶ್ ಅಭಿಮಾನಿಗಳಿಗೆ ಹಬ್ಬ, ಯಶ್ ಅಭಿನಯದ ಟಾಕ್ಸಿಕ್ ಬಿಡುಗಡೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಇದರ ಜೊತೆಗೆ ಬಾಲಿವುಡ್ ಸಿನಿಮಾ ರಾಮಾಯಣ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಎರಡು ಸಿನಿಮಾ ಬಿಡುಗಡೆ ಯಾವಾಗ?
ಬೆಂಗಳೂರು(ಮಾ.29) ಕೆಜಿಎಫ್, ಕಾಂತಾರ ಬಳಿಕ ಇದೀಗ ಸ್ಯಾಂಡಲ್ವುಡ್ ಮತ್ತೆ ದೇಶ ವಿದೇಶದಲ್ಲಿ ಅಬ್ಬರಿಸಲು ಸಜ್ಜಾಗಿದೆ. 2026 ಏನಿದ್ದರು ಯಶ್ ವರ್ಷ. ಕಾರಣ ಯಶ್ ಅಭಿನಯದ ಬಹುನಿರೀಕ್ಷಿತ ಎರಡು ಸಿನಿಮಾ 2026ರಲ್ಲಿ ಬಿಡುಡೆಯಾಗುತ್ತಿದೆ. ಟಾಕ್ಸಿಕ್ ಸಿನಿಮಾ 2026ರ ಮಾರ್ಚ್ 19 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಸ್ವತಃ ಯಶ್ ಪೋಸ್ಟ್ ಹಾಕಿ ಸಿಹಿ ಸುದ್ದಿ ನೀಡಿದ್ದರು. ಇದೀಗ ಯಶ್ ಅಭಿನಯದ ಬಾಲಿವುಡ್ ಸಿನಿಮಾ ರಾಮಾಯಣ ಕೂಡ 2026ರಲ್ಲೇ ಬಿಡುಗಡೆಯಾಗುತ್ತಿದೆ. ಅಧಿಕೃತ ಘೋಷಣೆ ಹೊರಬಿದ್ದಿದ್ದು, ಮುಂದಿನ ವರ್ಷ ಸಂಪೂರ್ಣ ಯಶ್ದ್ದೇ ಹವಾ.
ರಾಮಾಯಣ ಸಿನಿಮಾ
ರಣಬೀರ್ ಕಪೂರ್ ಸೇರಿದಂತೆ ಬಹು ತಾರಾಗಣದ ಬಾಲಿವುಡ್ ಸಿನಿಮಾ ರಾಮಾಯಣ ಅತೀ ದೊಡ್ಡ ಬಜೆಟ್ ಸಿನಿಮಾ. ಈ ಸಿನಿಮಾದಲ್ಲಿ ಯಶ್ ರಾವಣ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಶೂಟಿಂಗ್ ಸೇರಿದಂತೆ ನಿರ್ಮಾಣ ಕೆಲಸಗಳು ನಡೆಯುತ್ತಿದೆ. ಇದೀಗ ಚಿತ್ರತಂಡ ರಾಮಾಯಾಣ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. 2026ರ ದೀಪಾವಳಿ ಹಬ್ಬಕ್ಕೆ ರಾಮಾಯಣ ಸಿನಿಮಾ ಬಿಡುಗಡೆಯಾಗುತ್ತದಿದೆ.
2026ರಲ್ಲಿ ದೀಪಾವಳಿ ಹಬ್ಬ ನವೆಂಬರ್ 8 ರಿಂದ 10ರ ವರೆಗೆ ನಡೆಯಲಿದೆ. ಹೀಗಾಗಿ ನವೆಂಬರ್ 8 ಭಾನುವಾರವಾಗಿದ್ದು ಇದೇ ದಿನ ರಾಮಾಯಣ ಸಿನಿಮಾ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ರಾಮಾಯಣ ಸಿನಿಮಾ ಎರಡು ಭಾಗವಾಗಿ ಬಿಡುಗಡೆಯಾಗುತ್ತಿದೆ. ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾದರೆ, ಎರಡನೇ ಭಾಗ 2027ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಘೋಷಿಸಿದೆ.
ಟಾಕ್ಸಿಕ್
ಕೆಜಿಎಫ್ ಸಿನಿಮಾ ಬಳಿಕ ಯಶ್ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಸರಿಸುಮಾರು 3 ವರ್ಷಗಳು ಉರುಳಿದೆ. ಯಶ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.ಈ ಟ್ರೇಲರ್ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಇತ್ತೀಚೆಗೆ ಯಶ್ ತಮ್ಮ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕ ಕುರಿತು ಪೋಸ್ಟ್ ಮಾಡಿದ್ದರು. ಮಾರ್ಚ್ 19, 2026ರಂದು ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಯಶ್ ಅಭಿನಯದ ಎರಡು ಸಿನಿಮಾಗಳು 2026ರಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ 2026ರಲ್ಲಿ ಯಶ್ದ್ದೇ ಹವಾ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೆಜಿಎಫ್ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ಯಶ್ ಚಿತ್ರ ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲ ಇತರ ಸಿನಿ ರಂಗದಲ್ಲೂ, ಸಿನಿ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ. ಹೀಗಾಗಿ ಯಶ್ ಮೇಲೆ ನಿರೀಕ್ಷೆಗಳು ಹೆಚ್ಚಿದೆ. ಆದರೆ ಕೆಜಿಎಫ್ ಹೀರೋಯಿಸಂ ತೋರಿಸುವ ಸಿನಿಮಾ. ಟಾಕ್ಸಿಕ್ ಸಿನಿಮಾ ಕೂಡ ಒಂದು ರೀತಿಯಲ್ಲಿ ಕೆಜಿಎಫ್ ಸಿನಿಮಾದ ಶೈಲಿ ಹೋಲುತ್ತಿದೆ. ಆದರೆ ರಾಮಾಯಣ ಸಂಪೂರ್ಣ ವಿಭಿನ್ನ. ಪುರಾಣದ ಪಾತ್ರ ಹಲವು ನಟರಿಗೆ ಮುಳ್ಳಾಗಿದೆ. ಡಾ.ರಾಜ್ಕುಮಾರ್ ಹೊರತು ಪಡಿಸಿದರೆ ಇನ್ಯಾರು ಪುರಾಣ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ ಹಾಗೂ ಭರ್ಜರಿ ಯಶಸ್ಸು ಕಂಡ ನಾಯಕರಿಲ್ಲ. ಇದೀಗ ಯಶ್ ಭಿನ್ನವಾದ ಕಥೆ, ಪಾತ್ರವನ್ನು ಮಾಡುತ್ತಿದ್ದಾರೆ. ಹೀಗಾಗಿ ಯಶ್ ನಡೆ ರಿಸ್ಕಿ ಆಗಿದ್ದರೂ ಭಾರತೀಯ ಸಿನಿಮಾದಲ್ಲಿ ಹೊಸ ಅಲೆ ಸೃಷ್ಟಿ ಮಾಡುವ ಸಾಧ್ಯತೆ ಇದೆ.