ಶಿವಣ್ಣ ಜತೆಗಿನ ಸಿನಿಮಾ ನನಗೆ ಸಿಕ್ಕ ಗಾಡ್‌ ಗಿಫ್ಟ್‌: ಎ ಹರ್ಷ

By Kannadaprabha NewsFirst Published Oct 29, 2021, 9:23 AM IST
Highlights

ಇಂದು ‘ಭಜರಂಗಿ 2’ ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಶಿವರಾಜ್‌ಕುಮಾರ್‌ ನಾಯಕನಾಗಿ ನಟಿಸಿರುವ, ಜಯಣ್ಣ- ಭೋಗೇಂದ್ರ ನಿರ್ಮಾಣದ ಈ ಚಿತ್ರವನ್ನು ನಿರ್ದೇಶಿಸಿರುವ ಎ. ಹರ್ಷ ಅವರು ಇಲ್ಲಿ ಮಾತನಾಡಿದ್ದಾರೆ.
 

ಆರ್‌. ಕೇಶವಮೂರ್ತಿ

ನಿಮ್ಮ ಮತ್ತು ಶಿವಣ್ಣ ಅವರ ಕಾಂಬಿನೇಶನ್‌ನ ಗುಟ್ಟೇನು?

ನನಗೂ ಸರಿಯಾಗಿ ಗೊತ್ತಿಲ್ಲ. ಆದರೆ, ಪರಸ್ಪರ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ನಿರ್ದೇಶಕನ ಕನಸಿಗೆ ಶಿವಣ್ಣ ಸಾಥ್‌ ಕೊಡುತ್ತಾರೆ, ಒಬ್ಬ ಸ್ಟಾರ್‌ ನಟನಿಗೆ ನಾನು ಆಯ್ಕೆ ಮಾಡಿಕೊಳ್ಳುವ ಕತೆ ಬೆನ್ನೆಲುಬಾಗಿ ನಿಲ್ಲುತ್ತದೆ. ನಮ್ಮಿಬ್ಬರಿಂದ ಮೂರು ಚಿತ್ರಗಳು ಬಂದಿವೆ. ನಾಲ್ಕನೇ ಚಿತ್ರವಾಗಿ ‘ವೇದ’ ಕೂಡ ಸೆಟ್ಟೇರಿದೆ.

ಶಿವರಾಜ್‌ಕುಮಾರ್‌ ಜತೆಗಿನ ಸಿನಿಮಾವನ್ನು ಹೇಗೆ ನೋಡುತ್ತೀರಿ?

ಗಾಡ್‌ ಗ್ರೇಸ್‌, ಗಾಡ್‌ ಗಿಫ್ಟ್‌ ಅಂತಾರಲ್ಲ ಹಾಗೆ. ಅವರ ಜತೆಗೆ ಸಿನಿಮಾ ಮಾಡುವುದು ನನಗೆ ಸಿಕ್ಕಿರುವ ದೊಡ್ಡ ಗಿಫ್ಟ್‌.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಭಿಮಾನಿ ಯಶ್: ಪ್ರಸಂಗ ವಿವರಿಸಿದ ರಾಖಿ ಬಾಯ್

ಭಜರಂಗಿ 2 ಚಿತ್ರದ ಹೊಸತನಗಳೇನು?

ಫ್ಯಾಂಟಸಿ ಹಾಗೂ ಭಕ್ತಿ ಪ್ರಧಾನ. ಈ ಎರಡೂ ಅಂಶಗಳನ್ನು ಯಾವ ರೀತಿ ಬ್ಲೆಂಡ್‌ ಮಾಡಿದ್ದೇವೆ ಎಂಬುದೇ ಈ ಚಿತ್ರದ ಹೊಸತನ. ಚಿತ್ರದ ನಾಯಕನ ಜತೆಗೆ ಬೇರೆ ಪಾತ್ರಗಳನ್ನೂ ಅಷ್ಟೇ ಪರಿಣಾಮಕಾರಿಯಾಗಿ ರೂಪಿಸಿರುವುದು ಈ ಚಿತ್ರದ ಮತ್ತೊಂದು ವಿಶೇಷತೆ.

ಈ ಚಿತ್ರದ ಮುಖ್ಯ ಕಥಾ ಪಿಲ್ಲರ್‌ಗಳೇನು?

ದೇವರು, ಮನುಷ್ಯರು ಮತ್ತು ರಾಕ್ಷಸರು. ಇವರೇ ‘ಭಜರಂಗಿ 2’ ಚಿತ್ರದ ಮುಖ್ಯ ಆಧಾರಗಳು. ಇವರ ಮೂಲಕ ಒಂದು ಹೊಸ ಫ್ಯಾಂಟಸಿ ಕತೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ನನ್ನ ಕಲ್ಪನೆಯ ಕತೆಗೆ ನಿರ್ಮಾಪಕರಾದ ಜಯಣ್ಣ- ಭೋಗೇಂದ್ರ ಸಾಥ್‌ ಕೊಟ್ಟಿದ್ದರಿಂದ ಅದ್ದೂರಿಯಾಗಿ ಮೇಕಿಂಗ್‌ ಮಾಡಲು ಸಾಧ್ಯವಾಗಿದೆ.

ಚಿತ್ರದ ನಾಯಕ ಭಜರಂಗಿ ಏನು ಮಾಡುತ್ತಾರೆ?

ಜನರಿಗೋಸ್ಕರ ಭಜರಂಗಿ ಹುಟ್ಟಿಕೊಳ್ಳುತ್ತಾನೆ. ಅವನ ಹುಟ್ಟು, ಅವನ ಬದುಕು ಯಾರಿಗಾಗಿ ಎಂಬುದೇ ಭಜರಂಗಿ ಪಾತ್ರದ ಹಿನ್ನೆಲೆ. ಜನರಿಗಾಗಿ ಬದುಕುವ ಭಜರಂಗಿಯ ಕತೆ ಇಲ್ಲಿದೆ. ಆದರೆ, ಇದು ಹಿಂದಿನ ಭಾಗದ ಕತೆಗೆ ಲಿಂಕ್‌ ಇಲ್ಲ. ಹೆಸರು ಮಾತ್ರ ಮುಂದುವರಿದಿದೆ ಅಷ್ಟೆ.

"

ನಿರ್ದೇಶಕರಾಗಿ ನಿಮಗೇ ಸವಾಲು ಅನಿಸಿದ್ದೇನು?

ಫ್ಯಾಂಟಸಿ ಕತೆ ಹೇಳುವುದೇ ದೊಡ್ಡ ಸವಾಲು. ಯಾಕೆಂದರೆ ಇಲ್ಲಿ ಯಾವುದನ್ನೂ ಹೀಗೇ ಇರುತ್ತದೆ ಎಂದುಕೊಳ್ಳಲಾಗದು. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಕತೆಯನ್ನು ನಿರೂಪಿಸಬೇಕಾಗುತ್ತದೆ. ಆದರೆ, ತುಂಬಾ ಎಂಜಾಯ್‌ ಮಾಡಿಕೊಂಡೇ ಇಡೀ ಚಿತ್ರವನ್ನು ರೂಪಿಸಿದ್ದೇವೆ.

ನಿಮ್ಮ ಪ್ರಕಾರ ಹೀರೋಗಾಗಿ ಕತೆನಾ, ಕತೆಗಾಗಿ ಹೀರೋನಾ?

ಒಂದು ಕತೆ ಅಂತ ಹುಟ್ಟಿಕೊಂಡು ಬರೆಯುತ್ತಾ ಹೋಗುವಾಗಲೇ ಇದು ಇಂಥ ಹೀರೋಗೆ ಸೂಕ್ತ ಅನಿಸಿ, ಅವರನ್ನೇ ಗಮನದಲ್ಲಿಟ್ಟುಕೊಂಡು ಬರೆಯುತ್ತೇವೆ. ಹೀಗಾಗಿ ನನ್ನ ಪ್ರಕಾರ ಹೀರೋ ಮತ್ತು ಕತೆ ಎರಡೂ ಒಟ್ಟಿಗೆ ಹುಟ್ಟಿಕೊಳ್ಳುತ್ತವೆ.

ನಿಮ್ಮ ಕಥನ ಶಕ್ತಿ ಏನು? ಆಂಜನೇಯ ಸ್ವಾಮಿ ಇಲ್ಲೂ ಮುಂದುವರಿದ್ದಾರಲ್ಲ?

ಇಮ್ಯಾಜಿನರಿ ಜಗತ್ತು ನನ್ನ ಕತೆಯ ಶಕ್ತಿ. ಕಲ್ಪನೆ ಮಾಡಿಕೊಂಡು ಹೊಸ ಲೋಕವನ್ನು ಸೃಷ್ಟಿಸುವ, ಆ ಲೋಕದ ಕತೆ ಹೇಳುವುದು ನನಗೆ ತುಂಬಾ ಇಷ್ಟ. ಇನ್ನೂ ಆಂಜನೇಯ ನಾನು ಇಷ್ಟಪಟ್ಟದೇವರು. ನನ್ನ ಪ್ರತಿ ಹೆಜ್ಜೆಯಲ್ಲೂ ಅವರು ಇರುತ್ತಾರೆ. ಇಬ್ಬರೂ ಜತೆಗೆ ಟ್ರಾವಲ್‌ ಮಾಡುತ್ತಿದ್ದೇವೆ ಅನ್ನುವಷ್ಟುಭಕ್ತಿ ಇದೆ.

ಭಜರಂಗಿಯ 'ವೈದ್ಯೋ ನಾರಾಯಣ ಹರಿಃ' ಹಾಡು ರಿಲೀಸ್

ಸ್ಟಾರ್‌ ಚಿತ್ರದಲ್ಲೂ ಸಣ್ಣ ಪಾತ್ರಗಳಿಗೆ ಸ್ಪೇಸ್‌ ಸಿಗೋದು ಕಷ್ಟಅನ್ನೋ ಮಾತು ಇಲ್ಲೂ ಸುಳ್ಳು ಮಾಡಿದ್ದೀರಲ್ಲ?

ನನ್ನ ಚಿತ್ರಗಳವರೆಗೂ ಹೇಳುವುದಾರೆ ನಾನು ಇದನ್ನು ಬ್ರೇಕ್‌ ಮಾಡಿದ್ದು ಭಜರಂಗಿ ಚಿತ್ರದಲ್ಲೇ. ಹೀರೋ ಪಾತ್ರದಷ್ಟೇ ಬೇರೆ ಪಾತ್ರಗಳಿಗೂ ಜಾಗ ಇರಬೇಕು ಎಂಬುದು ನನ್ನ ಆಸೆ. ಇದಕ್ಕೆ ಕಾರಣ ಕತೆಗೆ ಪೂರಕವಾಗಿರುತ್ತದೆ. ಇಲ್ಲಿ ದೊಡ್ಡವರು, ಚಿಕ್ಕವರು ಎನ್ನುವುದು ಇರಲ್ಲ. ನಾನು ಆರ್ಟಿಸ್ಟ್‌ಗಳನ್ನು ನಂಬುತ್ತೇನೆ. ಅವರ ನಟನೆಯನ್ನು ಪ್ರೀತಿಸುತ್ತೇನೆ. ಅವರ ಪ್ರತಿಭೆ ಮೇಲೆ ನಂಬಿಕೆ ಇಡುತ್ತೇನೆ. ಹಾಗೆ ನಂಬಿಕೆ ಇಟ್ಟಿದ್ದಕ್ಕೆ ‘ಭಜರಂಗಿ’ ಹಾಗೂ ‘ಭಜರಂಗಿ 2’ ಚಿತ್ರದಲ್ಲಿ ಹೀರೋ ಸುತ್ತಲಿನ ಪಾತ್ರಗಳಲ್ಲೂ ನೀವು ಹೊಸತನ ನೋಡಲು ಸಾಧ್ಯವಾಗುತ್ತಿದೆ.

click me!