ಪುನೀತ್‌ ಸರ್‌ ಫೋನ್‌ ಮಾಡಿದ್ರು ಅಣ್ಣಾವ್ರೇ ಬೆನ್ನು ತಟ್ಟಿದಂತಾಯಿತು: ಪ್ರಮೋದ್

By Kannadaprabha NewsFirst Published Oct 23, 2021, 10:00 AM IST
Highlights

ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿರುವ ‘ರತ್ನನ್‌ ಪ್ರಪಂಚ’ ಚಿತ್ರಕ್ಕೆ ಜನ ಮೆಚ್ಚುಗೆ ಸಿಕ್ಕಿದೆ. ರೋಹಿತ್‌ ಪದಕಿ ನಿರ್ದೇಶನದ, ಧನಂಜಯ್‌ ನಟನೆಯ, ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ. ರಾಜ್‌ ನಿರ್ಮಾಣದ ಈ ಚಿತ್ರದಲ್ಲಿ ಉಡಾಳ್‌ ಬಾಬು ರಾವ್‌ ಪಾತ್ರ ಮಾಡಿರುವ ಪ್ರಮೋದ್‌ ನಟನೆಯಂತೂ ಮನೆ ಮಾತಾಗಿದೆ. ಈ ಪ್ರತಿಭಾವಂತ ಯುವ ನಟನ ಜೊತೆ ಮಾತುಕತೆ.

ರಾಜೇಶ್‌ ಶೆಟ್ಟಿ

ಜಗತ್ತಿನ ಗಮನ ನಿಮ್ಮ ಮೇಲೆ ಬಿದ್ದಿದೆ. ಈ ಸಿನಿಮಾ ನಿಮಗೆ ಎಷ್ಟುಮುಖ್ಯ?

ಒಳ್ಳೆ ಪಾತ್ರ ಸಿಗುತ್ತದೆ ಎಂದರೆ ನಾನೇ ಹಿಂದೆ ಬಿದ್ದುಬಿಡುತ್ತೇನೆ. ಪ್ರೀಮಿಯರ್‌ ಪದ್ಮಿನಿಯಲ್ಲಿ ಕೆಲಸ ನೋಡಿದ್ದ ರೋಹಿತ್‌ ಪದಕಿಯವರು ಅವತ್ತು ನನ್ನನ್ನು ಹೊಗಳಿರಲಿಲ್ಲ. ಮೆಚ್ಚಿರಲಿಲ್ಲ. ಆದರೆ ಮಾತೇ ಆಡದೆ ನನಗೆ ಒಂದು ಒಳ್ಳೆಯ ಪಾತ್ರ ಕೊಟ್ಟರು. ಅವರ ನಂಬಿಕೆ ಉಳಿಸಿಕೊಳ್ಳಬೇಕಾಗಿತ್ತು ನಾನು. ಧನಂಜಯ್‌ ಎಷ್ಟುಒಳ್ಳೆಯ ವ್ಯಕ್ತಿ ಎಂದರೆ ನನಗೆ ತುಂಬಾ ಸ್ಪೇಸ್‌ ಕೊಟ್ಟರು. ಧನು ಬಿಟ್ಟಿದ್ದಕ್ಕೆ ನನಗೆ ಅಷ್ಟುಜಾಗ ಸಿಕ್ಕಿತು. ಕಾರ್ತಿಕ್‌, ಯೋಗಿ ಅವರಿಗೆ ನಾನು ಯಾವಾಗಲೂ ಋುಣಿ. ಈ ಸಿನಿಮಾ ನೋಡಿ ಪುನೀತ್‌ ಸರ್‌ ಫೋನ್‌ ಮಾಡಿದ್ದರು. ನನ್ನ ಆರಾಧ್ಯ ದೈವ ಅಣ್ಣಾವ್ರೇ ಬಂದು ಬೆನ್ನು ತಟ್ಟಿದಂತಾಯಿತು. ಇಷ್ಟುದಿನ ನಾನು ಇಂಡಸ್ಟ್ರಿ ಮಂದಿಯ ಬಳಿ ಪ್ರಮೋದ್‌ ಅಂತ ಪರಿಚಯ ಹೇಳಿಕೊಳ್ಳುತ್ತಿದ್ದೆ. ಬಹುಶಃ ಇನ್ನು ಮುಂದೆ ಎಲ್ಲರೂ ನನ್ನನ್ನು ಪ್ರಮೋದ್‌ ಅಂತ ಗುರುತಿಸಿ ಮಾತನಾಡುತ್ತಾರೆ ಎಂದುಕೊಂಡಿದ್ದೇನೆ. ಈ ಸಂತೋಷವನ್ನು ಹೇಳಿಕೊಳ್ಳಲು ಪದಗಳಿಲ್ಲ.

ಉತ್ತರ ಕರ್ನಾಟಕ ಭಾಷೆ ಒಲಿಸಿಕೊಂಡಿದ್ದು, ಅಲ್ಲಿನ ಪಾತ್ರವೇ ಆಗಿದ್ದು ಹೇಗೆ?

ಮಂಡ್ಯದ ಹುಡುಗ ಅನ್ನುವ ಇಮೇಜ್‌ನಿಂದ ಆಚೆ ಬರಬೇಕಿತ್ತು. ಅಲ್ಲದೇ ನಾನು ರಂಗಭೂಮಿ ಹುಡುಗ. ಬೆನಕದಲ್ಲಿ ಕೆಲಸ ಮಾಡುತ್ತಿದ್ದಾಗ ಉತ್ತರ ಕನ್ನಡ ಭಾಷೆ ಚೂರು ಚೂರು ಮಾತನಾಡುತ್ತಿದ್ದೆ. ಸ್ಕಿ್ರಪ್ಟುಎರಡು, ಮೂರು ಸಲ ಓದಿಕೊಂಡಿದ್ದೆ. ಶೂಟಿಂಗಿಗೆ ಹೋದಾಗ ನಾನು ಅಲ್ಲಿ ಒಂದು ವಾರ ಕಾಲ ಉಡಾಳ್‌ ಬಾಬು ರಾವ್‌ ಪಾತ್ರವಾಗಿಯೇ ಇದ್ದೆ. ನನ್ನನ್ನು ನೋಡಿ ಅಲ್ಲಿನವರು ನಮ್ಮೂರೇನ್ರೀ ಅಂತ ಕೇಳುತ್ತಿದ್ದರು. ಈ ಹುಡುಗ ಏನು ಕೊಟ್ಟರು ಮಾಡುತ್ತಾನೆ ಅಂತ ನಾನು ಎಲ್ಲರಿಗೂ ತೋರಿಸಬೇಕಿತ್ತು. ಉಡಾಳ್‌ ಬಾಬು ರಾವ್‌ ನನ್ನ ಬದುಕಿನ ಪಥ ಬದಲಿಸಿದ.

ನಿರೀಕ್ಷೆಗಿಂತ ಹೆಚ್ಚು ಅವಕಾಶಗಳು ಸಿಗುತ್ತಿವೆ: ಪ್ರಮೋದ್‌

ಗೆದ್ರಿ ಅನ್ನಿಸ್ತಿದೆಯಾ?

ರತ್ನನ್‌ ಪ್ರಪಂಚದಲ್ಲಿ ನಾನೊಂದು ಪಾತ್ರ ಅಷ್ಟೇ. ಶ್ರುತಿ ಮೇಡಂ, ಧನಂಜಯ್‌ ಸೇರಿ ಎಲ್ಲರೂ ನನ್ನ ವಿಶ್ವಾಸ ಹೆಚ್ಚಿಸಿದರು. ನಾನು ಇಷ್ಟಪಟ್ಟು ನಟಿಸಿದೆ. ಇಷ್ಟಪಟ್ಟು ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ ಅನ್ನುವುದು ನನ್ನ ನಂಬಿಕೆ. ಈಗ ಬದುಕು ಬೇರೆಯಾಗಿರುವ ಫೀಲ್‌ ಆಗುತ್ತಿದೆ. ದೊಡ್ಡ ದೊಡ್ಡೋರೆಲ್ಲಾ ಫೋನ್‌ ಮಾಡಿ ಮೆಚ್ಚಿಕೊಂಡಿದ್ದಾರೆ. ವಿಶೇಷ ಸಿನಿಮಾಗಳು ಸಿಗುವ ನಿರೀಕ್ಷೆ ಇದೆ. ಲೈಫ್‌ ಈಗ ಮೊದಲಿಗಿಂತ ಚೆನ್ನಾಗಿ ಕಾಣಿಸುತ್ತಿದೆ. ಇಷ್ಟುದಿನ ನಾನಾ ಕಾರಣಗಳಿಂದ ಕೆಲಸ ಮಾಡಿದರೆ ಮಾತ್ರ ಸಾಲದು ಅಂದುಕೊಂಡಿದ್ದೆ. ಆದರೆ ಈಗ ನನ್ನ ಕೆಲಸ ಮಾತನಾಡುತ್ತಿದೆ. ನನ್ನ ಹತ್ರ ಇನ್ನೂ ತುಂಬಾ ಇದೆ. ಮಯೂರದಂಥ ಒಂದು ಸಿನಿಮಾ ನನ್ನ ಬದುಕಲ್ಲಿ ಮಾಡಬೇಕು ಅನ್ನುವ ಆಸೆ ಇದೆ. ಅದು ನೆರವೇರಬೇಕಿದೆ. ಒಳ್ಳೆಯ ಪಾತ್ರಗಳ ಹುಡುಕಾಟ ಜಾರಿಯಲ್ಲಿರುತ್ತದೆ.

'ಬ್ಯಾಡ್‌ಮ್ಯಾನರ್ಸ್‌'ಗೆ ಪ್ರೀಮಿಯರ್‌ ಪದ್ಮಿನಿ ಪ್ರಮೋದ್‌ ವಿಲನ್‌!

ರತ್ನನ್‌ ಪ್ರಪಂಚ ನಿಮಗೆ ಎಷ್ಟುಇಷ್ಟವಾಯಿತು?

ನನ್ನ ಅಪ್ಪ-ಅಮ್ಮ ಬೆಂಗಳೂರಿನಲ್ಲಿದ್ದರು. ನಾನು ಏಳು ತಿಂಗಳಿದ್ದಾಗ ನನ್ನ ಅಜ್ಜಿ ನನ್ನನ್ನು ಹಳ್ಳಿಗೆ ಕರೆದುಕೊಂಡು ಹೋದರು. ಅಲ್ಲಿಂದ 15 ವರ್ಷ ನನ್ನನ್ನು ಸಾಕಿದ್ದು ಮಾವ ಮತ್ತು ಅತ್ತೆ. ಹೀಗೆ ಬದುಕಿದ ನನಗೆ ಈ ಸಿನಿಮಾ ಎಷ್ಟುತಾಕಿರಬಹುದು ಅನ್ನುವುದನ್ನು ನೋಡುಗರೇ ನಿರ್ಧರಿಸಬೇಕು.

click me!