Salman Khan Balochistan controversy: ಸೌದಿ ಅರೇಬಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಸಲ್ಮಾನ್ ಖಾನ್, ಬಲೂಚಿಸ್ತಾನವನ್ನು ಪ್ರತ್ಯೇಕ ದೇಶ ಎಂದು ಉಲ್ಲೇಖಿಸಿದ್ದಾರೆ. ಈ ಹೇಳಿಕೆಯಿಂದ ಕೆರಳಿದ ಪಾಕಿಸ್ತಾನದ ಶಹಬಾಜ್ ಸರ್ಕಾರ, ಸಲ್ಮಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಪ್ರತ್ಯೇಕ ದೇಶ ಎಂದು ಬಣ್ಣಿಸಿದ್ದು, ನೆರೆಯ ದೇಶವನ್ನು ಕೆರಳಿಸಿದೆ. ಶಹಬಾಜ್ ಸರ್ಕಾರ ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಪಾಕಿಸ್ತಾನದ ಗೃಹ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಸಲ್ಮಾನ್ ಖಾನ್ ಹೇಳಿದ್ದೇನು?
ಸೌದಿ ಅರೇಬಿಯಾದಲ್ಲಿ ನಡೆದ ಜಾಯ್ ಫೋರಮ್ 2025 ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಮಾತನಾಡುತ್ತಾ ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಪ್ರತ್ಯೇಕ ದೇಶ ಎಂದು ಉಲ್ಲೇಖಿಸಿದ್ದರು. 'ಇವರು ಬಲೂಚಿಸ್ತಾನದ ಜನರು, ಅಫ್ಘಾನಿಸ್ತಾನದ ಜನರು, ಪಾಕಿಸ್ತಾನದ ಜನರು... ಎಲ್ಲರೂ ಸೌದಿ ಅರೇಬಿಯಾದಲ್ಲಿ ಶ್ರಮಿಸುತ್ತಿದ್ದಾರೆ ಎಂದಿದ್ದರುರ. ಸಲ್ಮಾನ್ ಖಾನ್ ಅವರ ಈ ಹೇಳಿಕೆ ಪಾಕಿಸ್ತಾನವನ್ನು ಕೆರಳಿಸಿ, ಬೃಹತ್ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕಿಸ್ತಾನ ಪ್ರವೇಶಿಸಿದರೆ ಸಲ್ಮಾನ್ ಖಾನ್ ಬಂಧನ:
ಬಲೂಚಿ ಪರ ಸಲ್ಮಾನ್ ಹೇಳಿಕೆ ಶಹಬಾಜ್ ಶರೀಫ್ ಸರ್ಕಾರವನ್ನು ಕೆರಳಿಸಿದ್ದು, ಪಾಕಿಸ್ತಾನದ ಆಂತರಿಕ ಸಚಿವಾಲಯ ಅಧಿಸೂಚನೆ ಹೊರಡಿಸಿ ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ನಾಲ್ಕನೇ ವೇಳಾಪಟ್ಟಿಯಲ್ಲಿ ಸೇರಿಸಿದೆ. ಇದರರ್ಥ ಪಾಕಿಸ್ತಾನದಲ್ಲಿ ಪ್ರವೇಶಿಸಿದರೆ ಅವರಿಗೆ ತಕ್ಷಣ ಬಂಧನ ಮತ್ತು ಕಾನೂನು ಕ್ರಮ ಎದುರಾಗಲಿದೆ.
ಸಲ್ಮಾನ್ ಖಾನ್ ಅಥವಾ ಅವರ ತಂಡದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಇದೇ ವೇಳೆ ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಗಾರ ಮೀರ್ ಯಾರ್ ಬಲೂಚ್ ಸಂತೋಷ ವ್ಯಕ್ತಪಡಿಸಿದ್ದಾರೆ. 'ಸಲ್ಮಾನ್ ಖಾನ್ ಅವರ ಹೇಳಿಕೆ 60 ಮಿಲಿಯನ್ ಬಲೂಚಿ ಜನರಿಗೆ ಸಂತೋಷ ತಂದಿದೆ. ಇದು ಮೃದು ರಾಜತಾಂತ್ರಿಕತೆಯ ಪ್ರಬಲ ಸಾಧನವಾಗಿದ್ದು, ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವೆಂದು ಗುರುತಿಸಲು ಜಗತ್ತನ್ನು ಪ್ರೋತ್ಸಾಹಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ದಂಗೆಯ ಹಿನ್ನೆಲೆಯಲ್ಲಿ ಈ ಘಟನೆ ಮತ್ತಷ್ಟು ಗಮನ ಸೆಳೆಯುತ್ತಿದೆ. ಖನಿಜ ಸಂಪನ್ಮೂಲಗಳಿಂದ ತುಂಬಿದ್ದರೂ ಆರ್ಥಿಕವಾಗಿ ಹಿಂದುಳಿದಿರುವ ಈ ಪ್ರದೇಶದಲ್ಲಿ ತಾರತಮ್ಯ, ಬಡತನ ಮತ್ತು ಚೀನಾ-ಪಾಕ್ ಯೋಜನೆಗಳ ವಿರುದ್ಧ ಆಕ್ರೋಶ ತಾರಕಕ್ಕೇರಿದೆ. ಇತ್ತೀಚಿನ ತಿಂಗಳುಗಳಲ್ಲಿ ಬಿಎಲ್ಎ ನಡೆಸಿದ ದಾಳಿಗಳಲ್ಲಿ ನೂರಾರು ಪಾಕ್ ಸೈನಿಕರು ಹತರಾಗಿದ್ದಾರೆ. ಸಲ್ಮಾನ್ ಖಾನ್ ಉದ್ದೇಶಪೂರ್ವಕವಾಗಿ ಹೀಗೆ ಹೇಳಿದ್ದಾರೋ ಅಥವಾ ಅಜಾಗರೂಕತೆಯಿಂದಲೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಒಂದು ಹೇಳಿಕೆಯೇ ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
