ಬೆಂಗಳೂರಿನ ಲಿಂಗರಾಜಪುರ ಫ್ಲೈಓವರ್ ಬಳಿ ಗೂಡ್ಸ್ ಆಟೋವೊಂದು ತನಗೆ ಸೈಡ್ ಕೊಡಲಿಲ್ಲ ಎಂಬ ವಿಚಾರವಾಗಿ ಲಾಂಗ್ ಬೀಸಿ ಪುಂಡಾಟ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಣ್ಣ ಟ್ರಾಫಿಕ್ ಸಮಸ್ಯೆಯಿಂದ ನಡೆದ ಘಟನೆಯು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ಮುಂದೆ ಆತನ ಪರಿಸ್ಥಿತಿ ಏನಾಗಿದೆ ಒಮ್ಮೆ ನೋಡಿ.

ಬೆಂಗಳೂರು (ಸೆ.06): ಟ್ರಾಫಿಕ್ ಕಿರಿಕ್ ವಿಚಾರವಾಗಿ ರಸ್ತೆಯಲ್ಲಿ ಲಾಂಗ್ ಹಿಡಿದು ಪುಂಡಾಟ ನಡೆಸಿದ ಆರೋಪದ ಮೇಲೆ ಶರತ್ (33) ಎಂಬ ವ್ಯಕ್ತಿಯನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಶುಕ್ರವಾರ ಸಂಜೆ ಲಿಂಗರಾಜಪುರ ಫ್ಲೈಓವರ್ ಕೆಳಗೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.

ಘಟನೆ ನಡೆದಿದ್ದು ಹೇಗೆ?

ಘಟನೆಗೆ ಕಾರಣವಾದದ್ದು ಒಂದು ಸಣ್ಣ ಟ್ರಾಫಿಕ್ ಸಮಸ್ಯೆ. ಎದುರಿಗೆ ಬರುತ್ತಿದ್ದ ಗೂಡ್ಸ್ ವಾಹನ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಬೈಕ್ ಸವಾರನೊಬ್ಬ ಗಲಾಟೆ ಶುರುಮಾಡಿದ್ದಾನೆ. ಈ ಗಲಾಟೆಯಲ್ಲಿ ಆತ ತನ್ನ ಬೈಕ್‌ನಿಂದ ಇಳಿದು, ಕೈಯಲ್ಲಿದ್ದ ಲಾಂಗ್ ಅನ್ನು ಗೂಡ್ಸ್ ವಾಹನದ ಮೇಲೆ ಬೀಸಿ ಅದರ ಗ್ಲಾಸ್‌ಗಳನ್ನು ಒಡೆದು ಹಾಕಿದ್ದಾನೆ. ಇದರಿಂದ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಪುಂಡಾಟ

ಗಲಾಟೆ ಬಿಡಿಸಲು ಹೋಗಿದ್ದ ಸಾರ್ವಜನಿಕರ ಮೇಲೆಯೂ ಆತ ಲಾಂಗ್ ಬೀಸಿ, ದಾಂಧಲೆ ನಡೆಸಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ಲಾಂಗ್ ಹಿಡಿದು ಸುತ್ತಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ್ದಾನೆ. ಘಟನೆ ನಡೆದಾಗ, 'AP03 CA 3739' ನೊಂದಣಿಯ ಪಲ್ಸರ್ ಬೈಕ್ ಮೇಲೆ ಬಂದಿದ್ದ ಈ ವ್ಯಕ್ತಿ, ಹಿಂಬದಿ ಸವಾರನಾಗಿದ್ದ ಎಂದು ತಿಳಿದುಬಂದಿದೆ.

View post on Instagram

ಪೊಲೀಸ್ ಕಾರ್ಯಾಚರಣೆ:

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪುಲಿಕೇಶಿನಗರ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪುಂಡಾಟ ನಡೆಸುತ್ತಿದ್ದ ಶರತ್‌ನನ್ನು ಪೊಲೀಸರು ಬಂಧಿಸಿ, ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಇಂತಹ ಘಟನೆಗಳು ಸಾರ್ವಜನಿಕ ಸುರಕ್ಷತೆಗೆ ಸವಾಲಾಗಿರುವುದರಿಂದ, ಪೊಲೀಸರು ದೃಢ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಸಂಬಂಧಪಟ್ಟ ವಿಡಿಯೋವನ್ನು ಬೆಂಗಳೂರು ಸಿಟಿ ಪೊಲೀಸರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಅದರಲ್ಲಿ 'ರಸ್ತೆಯ ಮೇಲೆ ಕೋಪಗೊಂಡು ಜಗಳವಾಡುವುದರಿಂದ ನೀವು ತ್ವರಿತವಾಗಿ ಎಲ್ಲಿಯೂ ತಲುಪಲಾರಿರಿ - ಆದರೆ ಅದು ನಿಮ್ಮನ್ನು ಕಾನೂನು ಸಮಸ್ಯೆಗೆ ಸಿಲುಕಿಸಬಹುದು.

ರಸ್ತೆಯ ಮೇಲಿನ ಜಗಳ, ಆಯುಧಗಳ ಪ್ರದರ್ಶನ, ಅಥವಾ ವಾಹನಗಳಿಗೆ ಹಾನಿಮಾಡುವುದು ಅಪರಾಧವಾಗಿದೆ, ಬೆಂಗಳೂರು ನಗರ ಪೊಲೀಸರು ಇಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ. ರಸ್ತೆಯ ಮೇಲಿನ ಜಗಳದ ಬದಲಿಗೆ ತಾಳ್ಮೆಯನ್ನು ಆಯ್ಕೆ ಮಾಡಿ ಮತ್ತು ನಮ್ಮ ರಸ್ತೆಗಳನ್ನು ಎಲ್ಲರಿಗೂ ಸುರಕ್ಷಿತವಾಗಿಡೋಣ. ತಾಳ್ಮೆಯಿಂದಿರಿ. ಸುರಕ್ಷಿತವಾಗಿರಿ. ಈ ತರಹದ ಘಟನೆಗಳು ಕಂಡು ಬಂದಲ್ಲಿ 112 ಗೆ ವರದಿ ಮಾಡಿ' ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.