Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಬರುತ್ತಾರೆ ಎಂಬ ಕುತೂಹಲ ಜಾಸ್ತಿ ಇದೆ. ಮೊದಲ ಬಾರಿಗೆ ಶೋ ಆರಂಭವಾಗುವ ಮುನ್ನ ಮಾಸ್ಕ್‌ ಮ್ಯಾನ್‌ ಆಗಿ ಸ್ಪರ್ಧಿಯೋರ್ವರು ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರು? 

ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪರ್ಧಿಯೋರ್ವರು ಶೋ ಶುರುವಾಗುವ ಮುನ್ನ ಪ್ರೇಕ್ಷಕರ ಬಳಿ ಹೋಗಿ, “ನಾನು ಬಿಗ್‌ ಬಾಸ್‌ ಶೋಗೆ ಹೋಗ್ತಿದೀನಿ” ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಕಲರ್ಸ್‌ ಕನ್ನಡ ವಾಹಿನಿಯು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಪಬ್ಲಿಕ್‌ನಲ್ಲಿ ಮಾಸ್ಕ್‌ ಮ್ಯಾನ್

ಮುಖಕ್ಕೆ ಮಾಸ್ಕ್‌ ಹಾಕಿಕೊಂಡು “ನಾನು ಬಿಗ್‌ ಬಾಸ್‌ಗೆ ಹೋಗ್ತಿದೀನಿ” ಎಂದು ಅವರು ಪ್ರೇಕ್ಷಕರ ಬಳಿ ಹೇಳಿದ್ದಾರೆ. ಆಗ ಹೇಗೆ ಬಿಗ್‌ ಬಾಸ್‌ ಆಡಬೇಕು? ಹೇಗೆ ಶೋ ಗೆಲ್ಲಬೇಕು ಎಂದು ಟಿಪ್ಸ್‌ ನೀಡಿದ್ದಾರೆ. “ನಾನು ಟಾಟಾ ಎಸಿ ಗಾಡಿ ಓಡಸ್ತೀನಿ, ನನ್ನ ಹೆಸರು ಗೋಪಾಲ್‌ ಕುಮಾರ್”‌ ಎಂದು ಅವರು ಹೇಳಿಕೊಂಡು ಓಡಾಡಿದ್ದಾರೆ. ತಂತ್ರಗಳನ್ನು ಮಾಡಿ, ಟಾಸ್ಕ್‌ ಆಡಿ ಅಂತ ಒಬ್ಬರು ಗೆಲ್ಲಿ ಅಂತ ಹೇಳಿದ್ದಾರೆ. ಇನ್ನೊಬ್ಬರು. “ಅಕ್ಕ-ಪಕ್ಕದಲ್ಲಿ ಒಂದು ಹುಡುಗಿ ಹಾಕ್ಕೊಳ್ಳಿ” ಎಂದು ಹೇಳಿದ್ದಾರೆ. ಇನ್ನೊಬ್ಬರು “ಬಿಗ್‌ ಬಾಸ್‌ಗೆ ಹೋಗೋದಿದ್ರೆ ಇಂದು ಏನು ಮಾಡುತ್ತಿದ್ದೀರಿ”? ಎಂದು ಕೇಳಿದ್ದಾರೆ. ಮತ್ತೊಬ್ಬರು ಮಾಸ್ಕ್‌ ತೆಗೆಯಲು ನೋಡಿದ್ದಾರೆ. ಆದರೂ ಕೂಡ ಅನೇಕರಿಗೆ ಮಾಸ್ಕ್‌ ಮ್ಯಾನ್‌ ಯಾರು ಅಂತ ಗೊತ್ತಾಗಲಿಲ್ಲ.

ಆ ಮಾಸ್ಕ್‌ ಮ್ಯಾನ್‌ ಯಾರು?

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಾಗ, ಅನೇಕರು ಕಾಕ್ರೋಚ್‌ ಸುಧಿ ಎಂದು ಹೇಳಿದ್ದಾರೆ. ಸುಧಿ ಅವರು ಕಿವಿಗೆ ಓಲೆ ಹಾಕಿಕೊಂಡಿದ್ದು, ಅವರು ಉದ್ದದ ಹೇರ್‌ಸ್ಟೈಲ್‌ ಕೂಡ ಈ ವಿಡಿಯೋದಲ್ಲಿ ರಿವೀಲ್‌ ಆಗಿದೆ. ಆಗಲೇ ಎಲ್ಲರಿಗೂ ಇವರೇ ಕಾಕ್ರೋಚ್‌ ಸುಧಿ ಎಂದು ಅನೇಕರು ಹೇಳಿದ್ದಾರೆ.

ಪುನೀತ್‌ ಸಿನಿಮಾದಲ್ಲಿ ಹೀರೋ ಆಗಬೇಕಿತ್ತು

ಎರಡು ವರ್ಷಗಳ ಹಿಂದೆಯೇ ಸುಧಿ ಅವರು Asianet Suvarna News ಯುಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಆ ವೇಳೆ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“ಟಗರು ಸಿನಿಮಾ ಟೈಮ್‌ನಲ್ಲಿ ನಾವು ಮಾತನಾಡಿದ್ದು ಸ್ವಲ್ಪ ಸಮಸ್ಯೆ ಆಗಿತ್ತು. ಹೀಗಾಗಿ ನಾನು ಹದಿನೈದು ದಿನ ಎಲ್ಲರಿಂದ ದೂರ ಆಗಿದ್ದೆ. ನಮ್ಮನ್ನು ಶಿವರಾಜ್‌ಕುಮಾರ್‌ ಅವರೇ ಕಾಪಾಡಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರು ಇದ್ದಿದ್ದರೆ ಅವರು ನಿರ್ಮಾಪಕರಾಗಿರುತ್ತಿದ್ದರು, ನಾನು ಹೀರೋ ಆಗಿರುತ್ತಿದ್ದೆ. ಅಪ್ಪು ಸರ್‌ ಎಲ್ಲಿ? ನಾನು ಎಲ್ಲಿ? ಅವರ ಮನೆಯಲ್ಲಿ ಹೀರೋಗಳು ಇದ್ದಾಗ, ಬೀದಿಯಲ್ಲಿ ಪೇಂಟ್‌ ಬಳಿಯುವ ನನ್ನನ್ನು ಹೀರೋ ಮಾಡ್ತೀನಿ ಎಂದಿದ್ದರು. ಇದಕ್ಕಿಂಥ ಬೇರೆ ಏನು ಬೇಕು? ಎಂದು ಹೇಳಿದ್ದರು.

‘ಸಲಗ’, ‘ಭೀಮ’, ‘ಟಗರುʼ, ‘ಮಾದೇವ’ ಮುಂತಾದ ಸಿನಿಮಾಗಳಲ್ಲಿ ಕಾಕ್ರೋಚ್‌ ಸುಧಿ ಅವರು ನಟಿಸಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಲನ್‌ ಆಗಿ ಬೇಡಿಕೆಯಲ್ಲಿರುವ ಸುಧಿ ಅವರು ಈಗ ಕಿರುತೆರೆ ಮಂದಿಗೆ ಹತ್ತಿರ ಆಗಲು, ಬಿಗ್‌ ಬಾಸ್‌ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬಡತನದ ಜೀವನ…

“ನಾನು ಬೀದಿಯಲ್ಲಿ ಬೆಳೆದಿದ್ದು. ನಾನು ತುಂಬ ಕಷ್ಟಪಟ್ಟಿದ್ದೇನೆ. ನಾನು ಹಳಸಿದ ಅನ್ನವನ್ನು ತಿನ್ನುತ್ತಿದ್ದೆ, ಆ ವಾಸನೆಯನ್ನು ತಡೆದುಕೊಳ್ಳಲಾಗದೆ ನೀರು ಕುಡಿಯುತ್ತಿದ್ದೆ. ನಾನು ಸೇಬು ಹಣ್ಣನ್ನು ತಗೊಳೋವರೆಗೆ ಬೆಳೆದಿರಲಿಲ್ಲ. ಆದರೆ ಈಗ ಸಿನಿಮಾ ಸೆಟ್‌ನಲ್ಲಿ ಭರ್ಜರಿ ನಾನ್‌ವೆಜ್‌ ಊಟ ಹಾಕ್ತಾರೆ. ಇಲ್ಲಿಯವರೆಗೆ ನಾನು 25 ಸೇಬು ಹಣ್ಣು ತಿಂದಿರಬಹುದು ಅಷ್ಟೇ” ಎಂದು ಅವರು ಬಡತನದ ದಿನಗಳನ್ನು ನೆನಪಿಸಿಕೊಂಡಿದ್ದರು.

ಅಂದಹಾಗೆ ಸೆಪ್ಟೆಂಬರ್‌ 28ರಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಪ್ರಸಾರ ಆಗಲಿದೆ. ಯಾರು ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.

YouTube video player