Chandana Ananthakrishna In His Name Video Song: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಚಂದನಾ ಅನಂತಕೃಷ್ಣ ಅವರು ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದು, ವಿಡಿಯೋ ಆಲ್ಬಮ್‌ ಸಾಂಗ್‌ಗೆ ಹಣ ಹೂಡಿದ್ದಾರೆ. 

ಅದೊಂದು ಸುಂದರ ದೃಶ್ಯಕಾವ್ಯ. ಮದುವೆಯಾಗುವ ಆಸೆ ಇಟ್ಟುಕೊಂಡು ಮುದ್ದಾದ ಹೆಣ್ಣು ಮಗಳನ್ನು ನೋಡಲು ಬರೋ ಹುಡುಗ, ಹೊಸ ಜೀವನಕ್ಕೆ ಕಾಲಿಡಲು ತುದಿಗಾಲಿನಲ್ಲಿ ನಿಂತ ಹುಡುಗಿ. ಮದುವೆ ಮನೆ ಸಂಭ್ರಮವು ಈಗ ತಾನೇ ಮುಗಿದು, ಸುಂದರ ಕ್ಷಣಗಳಿಂದಲೇ ತುಂಬಿದ್ದ ಮಧುಚಂದ್ರ ಮಸಣವಾಗುವುದು. ಹೌದು, ಕೇವಲ ಐದು ನಿಮಿಷದಲ್ಲಿ ಪ್ರೀತಿ, ಒಲವು, ಮದುವೆ, ದಾಂಪತ್ಯ, ಆಮೇಲೆ ಸ್ಮಶಾನವನ್ನು ಕಣ್ಣುಮುಂದೆ ತಂದಿಟ್ಟು, ಮನಸ್ಸಿಗೆ ಮುದಕೊಟ್ಟು ಅಳಿಸಿದ್ದಾರೆ ಚಂದನಾ ಅನಂತಕೃಷ್ಣ.

ಬಹುಮುಖ ಪ್ರತಿಭೆ ಚಂದನಾ ಅನಂತಕೃಷ್ಣ! 

'ರಾಜ ರಾಣಿ' ಧಾರಾವಾಹಿ ಎಡವಟ್ಟು ಚುಕ್ಕಿ, 'ಬಿಗ್‌ ಬಾಸ್‌ ಕನ್ನಡ ಸೀಸನ್‌ 7' ಶೋನಲ್ಲಿ ಚಂದನಾ ಅನಂತಕೃಷ್ಣ ಆಗಿ ವೀಕ್ಷಕರ ಮನಸ್ಸು ಗೆದ್ದರು. ಆಮೇಲೆ 'ಹಾಡು ಕರ್ನಾಟಕ' ಶೋನಲ್ಲಿ ನನಗೆ ನಿರೂಪಣೆಯೂ ಗೊತ್ತು ಎಂದು ತೋರಿಸಿದ್ದರು. 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿಯೂ ಕೂಡ ನಾನು ಹಾಡಬಲ್ಲೆ, ಭಾವನಾತ್ಮಕ ದೃಶ್ಯಗಳಿಗೆ ಜೀವ ತುಂಬಬಲ್ಲೆ ಎಂದು ತೋರಿಸಿಕೊಟ್ಟಿದ್ದ ಚಂದನಾ ಈಗ ನಿರ್ಮಾಣ ಮಾಡಿದ್ದೇನೆ ಎಂದು ಹೇಳಿದ್ದಾರೆ.

ವಿಡಿಯೋ ಆಲ್ಬಮ್‌ನಲ್ಲಿ ಚಂದನಾ! 

ಅಂದಹಾಗೆ ಚಂದನಾ ಅನಂತಕೃಷ್ಣ ಅವರು ಹೊಸದಾಗಿ ವಿಡಿಯೋ ಆಲ್ಬಮ್‌ಗೆ ಹಣ ಹೂಡಿದ್ದಾರೆ. In His Name ಎನ್ನುವ ಹಾಡಿನಲ್ಲಿ ( Chandana Ananthakrishna In His Name Video Song ) ಅವರು ಲೀಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಹಾಡು ಕೂಡ ಹಾಡಿದ್ದಾರೆ, ಹಣ ಕೂಡ ಹಾಕಿದ್ದಾರೆ. ನಿರ್ಮಾಪಕಿಯಾಗಿ ಇದು ಅವರ ಮೊದಲ ಪ್ರಯತ್ನ. ಪಹಲ್ಗಾಮ್‌ ಅಟ್ಯಾಕ್‌ನಲ್ಲಿ ಕರ್ನಾಟಕದವರು ಕೂಡ ಜೀವ ಕಳೆದುಕೊಂಡಿದ್ದಾರೆ. ಮದುವೆಯಾಗಿ ಗಂಡನ ಜೊತೆಗೆ ಹನಿಮೂನ್‌ಗೆ ಬಂದಿದ್ದ ಮಹಿಳೆ, ಮನೆಗೆ ಹೋಗುವಾಗ ವಿಧವೆಯಾಗಿ ಹೋಗಿದ್ದನ್ನು ಇಡೀ ವಿಶ್ವ ನೋಡಿದೆ. ಇದೇ ಕಥೆಯನ್ನು ಚಂದನಾ ತೆರೆ ಮೇಲೆ ತಂದಿದ್ದಾರೆ.

ಈ ಹಾಡಿನಲ್ಲಿ ಇರೋದೇನು?

ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಜನರ ದುಃಖವನ್ನು ಇಲ್ಲಿ ಚಿತ್ರಿಸಲಾಗಿದೆ. ಆರಂಭದಲ್ಲಿ ಇದೊಂದು ರೊಮ್ಯಾಂಟಿಕ್‌ ಸಿನಿಮಾ ಎಂಬಂತೆ ಭಾಸವಾಗಿ, ಆಮೇಲೆ ಕಣ್ಣೀರು ಹಾಕಿಸುವುದಂತೂ ಪಕ್ಕಾ. ಅತ್ಯುತ್ತಮವಾದ ಸಾಹಿತ್ಯ, ಉತ್ತಮ ಹಾಡುಗಾರಿಕೆ, ಜಿದ್ದಾಜಿದ್ದಿಗೆ ಬಿದ್ದವರಂತೆ ನಟಿಸಿರುವ ಕಲಾವಿದರು, ಬೇರೆ ಲೋಕಕ್ಕೆ ಕರೆದೊಯ್ಯುವ ಕ್ಯಾಮರಾ ಕೆಲಸ. ಒಂದೇ ಲೈನ್‌ನಲ್ಲಿ ಹೇಳೋದಾದರೆ ಅದ್ಭುತ.

ನಿಜಘಟನೆಯಿಂದ ಪ್ರೇರಿತವಾದ In His Name ಪ್ರೀತಿ, ತ್ಯಾಗ ಮತ್ತು ಮಾನವ ಮನೋಬಲದ ಶಕ್ತಿಯನ್ನು ಒಟ್ಟುಗೂಡಿಸುವ ಕನ್ನಡ ಮ್ಯೂಸಿಕ್ ವೀಡಿಯೋ. ಮದುವೆಯ ಸಂತೋಷದಿಂದ ಆರಂಭವಾಗಿ ಪಹಲ್ಗಾಂ ಉಗ್ರ ದಾಳಿಯ ಹೃದಯವಿದ್ರಾವಕ ಘಟನೆಯವರೆಗಿನ ಈ ಹೃದಯಸ್ಪರ್ಶಿ ಗೌರವ ನಮನ, ಮುಗ್ಧರ ನೆನಪನ್ನು ಜೀವಂತವಾಗಿರಿಸಿ ಪ್ರತಿಯೊಂದು ಕ್ಷಣವನ್ನೂ ಕೃತಜ್ಞತೆಯಿಂದ ಬದುಕಬೇಕೆಂದು ನಮಗೆ ನೆನಪಿಸುತ್ತದೆ ಎಂದು ವಿಡಿಯೋ ಆಲ್ಬಮ್‌ ತಂಡ ಹೇಳಿಕೊಂಡಿದೆ.

ಮಯೂರ್‌ ಅಂಬೆಕಲ್ಲು ಸಂಗೀತ, ತೇಜಸ್‌ ಕಿರಣ್‌ ನಿರ್ದೇಶನ ಈ ಹಾಡಿಗಿದೆ. ಶಿವಶಂಕರ್‌ ನೂರಂಬದ ಕ್ಯಾಮರಾ ಕೆಲಸ ಈ ಹಾಡಿಗಿದೆ. ನಿದರ್ಶನ್‌, ಸಂದೀಪ್‌ ರಾಜ್‌ಗೋಪಾಲ್‌ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

YouTube video player