ಭೀಮಾತೀರದಲ್ಲಿ ಸಂಚಲನ ಸೃಷ್ಟಿಸಿದ್ದ ಚಡಚಣ ಎಸ್‌ಬಿಐ ದರೋಡೆ ಪ್ರಕರಣದಲ್ಲಿ, ಪೊಲೀಸರು ಬಿಹಾರ ಮೂಲದ ಮೂವರು ಯುವಕರನ್ನು ಬಂಧಿಸಿದ್ದಾರೆ. ಅವರಿಂದ 9 ಕೆ.ಜಿ. ಚಿನ್ನಾಭರಣ ಮತ್ತು ₹86.31 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ದರೋಡೆಗೆ ಬಿಹಾರದಿಂದ ತಂದಿದ್ದ ಕಂಟ್ರಿ ಪಿಸ್ತೂಲ್‌ಗಳನ್ನು ಬಳಸಲಾಗಿತ್ತು.

ವಿಜಯಪುರ (ಅ.09): ಭೀಮಾತೀರದಲ್ಲಿ ಸಂಚಲನ ಮೂಡಿಸಿದ್ದ ಚಡಚಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ 22 ವರ್ಷದೊಳಗಿನ (ಜೆನ್‌ಜೀ ಕಿಡ್ಸ್) ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ದರೋಡೆಕೋರರ ಸೆರೆ ಮತ್ತು ವಶಪಡಿಸಿಕೊಂಡ ವಸ್ತುಗಳು

ಬಂಧಿತ ಆರೋಪಿಗಳನ್ನು ಬಿಹಾರ ಮೂಲದವರಾದ ರಾಕೇಶ್‌ಕುಮಾರ್ ಸಹಾನಿ (22), ರಾಜಕುಮಾರ್ ಪಾಸ್ವಾನ್ (21), ಮತ್ತು ರಕ್ಷಕಕುಮಾರ್ ಮಾತೊ (21) ಎಂದು ಗುರುತಿಸಲಾಗಿದೆ. ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 9 ಕೆ.ಜಿ. ಚಿನ್ನಾಭರಣ ಮತ್ತು ₹86.31 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಕಳೆದ ಸೆಪ್ಟೆಂಬರ್ 19 ರಂದು ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿತ್ತು. ದರೋಡೆಕೋರರು ಒಟ್ಟು 20 ಕೆ.ಜಿ. ಚಿನ್ನ ಮತ್ತು ₹1.04 ಕೋಟಿ ನಗದನ್ನು ದೋಚಿದ್ದರು. ಈ ಪ್ರಕರಣದಲ್ಲಿ ಈ ಮೊದಲು ಒಬ್ಬ ದರೋಡೆಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಯ ದೃಷ್ಟಿಯಿಂದ ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಈಗ ವಶಕ್ಕೆ ಪಡೆದ ಚಿನ್ನಾಭರಣ ಮತ್ತು ನಗದನ್ನು ಸೇರಿಸಿದರೆ, ಇನ್ನೂ 11 ಕೆ.ಜಿ. ಚಿನ್ನಾಭರಣ ಮತ್ತು ಸುಮಾರು ₹14 ಲಕ್ಷ ನಗದು ಪತ್ತೆ ಮಾಡುವುದು ಬಾಕಿ ಇದೆ.

ಕಂಟ್ರಿ ಪಿಸ್ತೂಲ್‌ ತಂದು ದರೋಡೆ:

ಬಂಧಿತ ಆರೋಪಿಗಳು ಕೇವಲ ದರೋಡೆಕೋರರಾಗಿರದೆ, ಈ ಪ್ರಕರಣದ ಪ್ರಮುಖ ಕೊಂಡಿಗಳಾಗಿದ್ದರು. ದರೋಡೆಗೆಂದೇ ಬಿಹಾರದಿಂದ ಕಂಟ್ರಿ ಪಿಸ್ತೂಲ್‌ಗಳನ್ನು ತರಿಸಿಕೊಂಡಿದ್ದಾಗಿ ತಿಳಿದುಬಂದಿದೆ. ವಾಸ್ತವವಾಗಿ, ಗನ್ ತಂದ ಬಳಿಕವೇ ಈ ಮೂವರು ದರೋಡೆಕೋರರು ದೊಡ್ಡಮಟ್ಟದ ದರೋಡೆಗೆ ಮುಂದಾಗಿದ್ದರು. ಈ ದರೋಡೆಕೋರರು ಕಂಟ್ರಿ ಪಿಸ್ತೂಲ್‌ಗಳನ್ನು ಚಡಚಣದ ಇತರ ದರೋಡೆಕೋರರಿಗೂ ಪೂರೈಸಿದ್ದರು ಎನ್ನಲಾಗಿದೆ.

ವಾಹನದಲ್ಲಿ ಸಿಕ್ಕಿದ್ದ ಮತ್ತಷ್ಟು ಸಂಪತ್ತು

ದರೋಡೆ ನಡೆದ ದಿನ ದರೋಡೆಕೋರರು ತಾವು ಬಳಸಿದ್ದ ಮಾರುತಿ ಇಕೋ ಕಾರನ್ನು ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಬಿಟ್ಟು ಪರಾರಿಯಾಗಿದ್ದರು. ಪೊಲೀಸರು ಈ ಕಾರನ್ನು ಪರಿಶೀಲಿಸಿದಾಗ, ಅದರಲ್ಲಿ ಸುಮಾರು 21 ಪ್ಯಾಕೇಟ್‌ಗಳಲ್ಲಿದ್ದ 888.33 ಗ್ರಾಂ ಚಿನ್ನ ಹಾಗೂ ₹1.03 ಲಕ್ಷ ನಗದು ಪತ್ತೆಯಾಗಿತ್ತು. ಅಲ್ಲದೆ, ದರೋಡೆಕೋರರು ಬಿಟ್ಟುಹೋಗಿದ್ದ ಮತ್ತೊಂದು ಬ್ಯಾಗಿನಲ್ಲಿ 6.54 ಕೆ.ಜಿ. ಚಿನ್ನ ಮತ್ತು ₹41 ಲಕ್ಷ ನಗದು ಸಿಕ್ಕಿತ್ತು.

ಈ ಮೂವರು ಆರೋಪಿಗಳ ಬಂಧನದಿಂದ ಬ್ಯಾಂಕ್ ದರೋಡೆ ಜಾಲದ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭೀಮಾತೀರದಲ್ಲಿ ನಡೆದ ಈ ದೊಡ್ಡ ದರೋಡೆ ಪ್ರಕರಣದ ಉಳಿದ ಆರೋಪಿಗಳ ಪತ್ತೆಗೆ ತೀವ್ರ ತನಿಖೆ ಮುಂದುವರೆದಿದೆ.