ಸರ್ಕಾರಗಳು ಮಾಡಲಾಗದ ಸಾಧನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರ ಗೊಳಿಸಲಾಗುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಠಿತ್ವ ದೇಶಕ್ಕೆ ಮಾದರಿ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರು (ಅ.12): ಸರ್ಕಾರಗಳು ಮಾಡಲಾಗದ ಸಾಧನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರ ಗೊಳಿಸಲಾಗುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಠಿತ್ವ ದೇಶಕ್ಕೆ ಮಾದರಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ನವಜೀವನ ಸಮಿತಿ, ಚಿಕ್ಕಮಗಳೂರು ತಾಲೂಕು ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಹಯೋಗದೊಂದಿಗೆ ಮಲ್ಲೇನಹಳ್ಳಿ ಗ್ರಾ.ಪಂ.ಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಳ್ಳುತ್ತಿರುವ ಮದ್ಯವರ್ಜನ ಶಿಬಿರಗಳ ಮೂಲಕ ಕತ್ತಲೆ ತುಂಬಿದ್ದ ನೂರಾರು ಕುಟುಂಬಗಳಲ್ಲಿ ಬೆಳಕು ಚೆಲ್ಲಿ, ನೆಮ್ಮದಿಯ ಜೀವನ ನಡೆಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಕ್ಷೇತ್ರದಿಂದ ನೀಡುವ ಅನುದಾನದ ಬಗ್ಗೆ ಮತ್ತು ಸಮಾಜಮುಖಿ ಯೋಜನೆಗಳ ಮೂಲಕ ತರಬೇತಿ ಕುರಿತು ಸವಿಸ್ತಾರ ಮಾಹಿತಿ ನೀಡಿದರು.
ಹೆಗ್ಗಡೆಯವರ ಕಾರ್ಯ ಶ್ಲಾಘನೀಯ
ಮಲ್ಲೇನಹಳ್ಳಿ ಸಮೀಪದ ಕೊಂಬುಗತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಪ್ರಕಾಶ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಗ್ರಾಮೀಣ ಪ್ರದೇಶದ ಗ್ರಾಮಗಳು ರಾಮ ರಾಜ್ಯಗಳಾಗಬೇಕು ಎಂದು ಕನಸು ಕಂಡಿದ್ದ ಗಾಂಧೀಜಿಯವರ ಕನಸನ್ನು ಡಾ. ವೀರೇಂದ್ರ ಹೆಗ್ಗಡೆ ತಮ್ಮ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನನಸು ಮಾಡಿದ್ದಾರೆ. ಹೆಗ್ಗಡೆಯವರ ಈ ಕಾರ್ಯ ಅತ್ಯಂತ ಶ್ಲಾಘನೀಯ. ಅವರ ಈ ಗ್ರಾಮಾಭಿವೃದ್ಧಿ ಯೋಜನೆ ದೇಶದೆಲ್ಲೆಡೆ ಮಾದರಿಯಾಗಿದೆ ಎಂದರು.
ಚಿಕ್ಕಮಗಳೂರು ತಾಲೂಕಿನ ನವಜೀವನ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ತಮ್ಮ ಹಕ್ಕೊತ್ತಾ ಯದ ಮನವಿ ಪತ್ರವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರಿಗೆ ಸಲ್ಲಿಸಿದರು. ಗ್ರಾಪಂ ಉಪಾಧ್ಯಕ್ಷೆ ಕಾವ್ಯ, ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್, ವಲಯ ಮೇಲ್ವಿಚಾರಕ ಚಂದ್ರಶೇಖರ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಮಗಳೂರು ತಾಲೂಕು ಯೋಜನಾಧಿಕಾರಿ ರೂಪ ಜಿ. ಜೈನ್ , ಹೇಮಲತ, ಕೃಷಿ ಅಧಿಕಾರಿ ಡಿ. ಉಮೇಶ್, ಜನಜಾಗೃತಿ ವೇದಿಕೆ ಸದಸ್ಯರಾದ ನಾಗೇಶ್ಕುಮಾರ್, ಧರ್ಮರಾಜ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಶ್ಮಿತಗೌಡ, ಚಿಕ್ಕಮಗಳೂರು ತಾಲೂಕು ಶೌರ್ಯ ವಿಪತ್ತು ಮಾಸ್ಟರ್ ಶಶಿಕುಮಾರ್ ಉಪಸ್ಥಿತರಿದ್ದರು.
