ಕಾಂಗ್ರೆಸ್ ಹೈಕಮಾಂಡ್ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದ್ದಾರೆ. ರಮೇಶ್ ಜಾರಕಿಹೊಳಿ, ನಾಗೇಂದ್ರ ನಂತರ ಈಗ ಕೆ.ಎನ್. ರಾಜಣ್ಣ, ಮುಂದೆ ಸತೀಶ್ ಜಾರಕಿಹೊಳಿ ಸರದಿ ಎಂದು ಅವರು ಎಚ್ಚರಿಸಿದ್ದಾರೆ.

ಯಾದಗಿರಿ (ಆ.12): ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸುತ್ತಿದೆ. ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರ ನಂತರ ಈಗ ಕೆ.ಎನ್. ರಾಜಣ್ಣ ಅವರನ್ನು ರಾಜಕೀಯವಾಗಿ ಮುಗಿಸಿದೆ. ಮುಂದಿನ ಸರದಿ ಸತೀಶ್ ಜಾರಕಿಹೊಳಿ ಅವರನ್ನು ಮುಗಿಸಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುರಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸುತ್ತಿದೆ ಎಂದು ನೇರವಾಗಿ ಆರೋಪಿಸಿದರು. ರಮೇಶ್ ಜಾರಕಿಹೊಳಿ ಮತ್ತು ನಾಗೇಂದ್ರ ಅವರ ನಂತರ ರಾಜಣ್ಣ ಮತ್ತು ಮುಂದಿನ ಸರದಿ ಸತೀಶ್ ಜಾರಕಿಹೊಳಿ ಅವರದ್ದು ಎಂದು ರಾಜುಗೌಡ ಭವಿಷ್ಯ ನುಡಿದರು.

ರಾಜಣ್ಣ ವಜಾ: ರಾಜಕೀಯ ಬಲಿಪಶು?

ರಾಜಣ್ಣ ಅವರು ಮತದಾರರ ಪಟ್ಟಿ ಕುರಿತು ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. 'ಮತದಾರರ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸುತ್ತಾರೆ. ನಮ್ಮದೇ ಪಕ್ಷ ಅಧಿಕಾರದಲ್ಲಿತ್ತು, ಅಂತ ರಾಜಣ್ಣ ಹೇಳಿದ್ರಲ್ಲಿ ಏನು ತಪ್ಪು? ಎಂದು ಪ್ರಶ್ನಿಸಿದರು. ಅಲ್ಲದೆ, ಕಾಂಗ್ರೆಸ್ ಹೈಕಮಾಂಡ್‌ನ ಕ್ರಮವನ್ನು ಟೀಕಿಸಿದ ಅವರು, 'ನಿಮ್ಮ ವಿರುದ್ಧ ಮಾತನಾಡಿದ್ರೆ ವಜಾನಾ? ನೀವೇನು ಸುಪ್ರೀಂನಾ? ಎಂದು ಖಾರವಾಗಿ ಪ್ರಶ್ನಿಸಿದರು. ರಾಹುಲ್ ಗಾಂಧಿ ಒಂದು ರೀತಿ ಪಂಜರದಲ್ಲಿ ಬೆಳೆದವರು, ಅವರಿಗೆ ರಾಜಕೀಯ ಜ್ಞಾನ ಅಷ್ಟೊಂದು ಇಲ್ಲ ಅನಿಸುತ್ತೆ' ಎಂದು ವ್ಯಂಗ್ಯವಾಡಿದರು.

ವಾಲ್ಮೀಕಿ ನಾಯಕರನ್ನು ಗುರಿ ಮಾಡಿರುವುದು ಏಕೆ?

ವಾಲ್ಮೀಕಿ ಸಮುದಾಯದಲ್ಲಿ ಒಗ್ಗಟ್ಟಿಲ್ಲದೇ ಇರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ರಾಜುಗೌಡ ಹೇಳಿದರು. ನಮ್ಮ ಸಮುದಾಯದಲ್ಲಿ ನಾವು ಹುಟ್ಟುವಾಗಲೇ ನಾಯಕರು. ಆದರೆ, ಒಬ್ಬರೇ ನಾಯಕರಾಗಬೇಕೆಂಬ ಮನೋಭಾವ ಇಲ್ಲ. ಇದರಿಂದ ನಮ್ಮ ಸಮುದಾಯದ ಮೇಲೆ ದಾಳಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಿದೆ. ಮಂತ್ರಿ ಸ್ಥಾನ ಕೊಡುವ ಆಸೆಯನ್ನು ತೋರಿಸಿ ನಮ್ಮನ್ನು ಒಡೆಯುವ ಕೆಲಸ ಮಾಡುತ್ತಾರೆ' ಎಂದು ವಿವರಿಸಿದರು.

ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರ ಪ್ರಕರಣಗಳನ್ನೂ ಉಲ್ಲೇಖಿಸಿದ ಅವರು, 'ನಾಗೇಂದ್ರ ಅವರು ನಿಗಮದ ಹಣವನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ. ತೆಲಂಗಾಣ, ರಾಯಚೂರು, ಬಳ್ಳಾರಿ ಚುನಾವಣೆಗಳಿಗೆ ಬಳಕೆ ಮಾಡಿದ್ದರು. ಆದರೂ ಅವರನ್ನು ಬಲಿಪಶು ಮಾಡಿದರು. ಇದೀಗ ರಾಜಣ್ಣ, ಮುಂದೆ ಸತೀಶ್ ಜಾರಕಿಹೊಳಿ ಸರದಿ' ಎಂದು ಎಚ್ಚರಿಕೆ ನೀಡಿದರು.

ರಾಜಕೀಯ ಭವಿಷ್ಯ ಮುಕ್ತಾಯ?

ರಾಜಣ್ಣ ಅವರಿಗೆ ಆದ ಅನ್ಯಾಯದ ವಿರುದ್ಧ ವಾಲ್ಮೀಕಿ ಸಮುದಾಯದ 15 ಜನ ಶಾಸಕರು ದೆಹಲಿ ಹೈಕಮಾಂಡ್ ಮುಂದೆ ಪ್ರತಿಭಟಿಸಬೇಕು. ಏಕೆಂದರೆ, ಹೈಕಮಾಂಡ್ ರಾಜಣ್ಣ ಅವರನ್ನು ಸಮಾಧಾನ ಮಾಡಿ ಸ್ವಲ್ಪ ದಿನ ಹೋಗಲಿ ಅಂತ ಸುಮ್ಮನೆ ಇರಲು ಹೇಳಬಹುದು. ಹಾಗೆ ರಾಜಣ್ಣ ಸಮಾಧಾನವಾದರೆ, ಅವರ ರಾಜಕೀಯ ಭವಿಷ್ಯವೇ ಮುಗಿದ ಅಧ್ಯಾಯ ಎಂದು ವಜಾಗೊಂಡ ಸಚಿವ ರಾಜಣ್ಣ ಅವರಿಗೆ ಸಲಹೆ ನೀಡಿದರು.

ನಿನ್ನೆ ಅವರಿಗೆ ಸ್ವಲ್ಪ ಮಾತನಾಡುವುದಕ್ಕೆ ಅಥವಾ ಯಾವುದೇ ಸ್ಪಷ್ಟೀಕರಣ ಹೇಳಿಕೆಗಳಿಗೂ ಅವಕಾಶವನ್ನು ನೀಡಲಿಲ್ಲ. ನೀವು ರಾಜೀನಾಮೆಯನ್ನು ಕೊಟ್ಟರೂ ಕೂಡ ಅದನ್ನು ಅಂಗೀಕಾರ ಮಾಡದೇ ನಿಮ್ಮನ್ನು ವಜಾ ಮಾಡಲಾಗಿದೆ. ನೀವು ದಿಟ್ಟ ನಿರ್ಧಾರ ತೆಗೆದುಕೊಂಡು ಪ್ರತಿಭಟಿಸದಿದ್ದರೆ, ಈ ಸಮಾಜದವರನ್ನು ಹೆಂಗೆ ಬೇಕಾದರೂ ಬಲಿ ಮಾಡಬಹುದು ಅಂತ ಸಮಾಜವನ್ನೇ ಮುಗಿಸಿಬಿಡುತ್ತಾರೆ' ಎಂದು ರಾಜುಗೌಡ ಆತಂಕ ವ್ಯಕ್ತಪಡಿಸಿದರು. ರಾಜನಹಳ್ಳಿ ಗುರುಗಳು ಕೂಡ ಈ ವಿಚಾರದ ಬಗ್ಗೆ ಧ್ವನಿ ಎತ್ತಬೇಕು ಎಂದು ಮನವಿ ಮಾಡಿಕೊಂಡರು.