ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಟೆಂಪಲ್ ರನ್ ಅನ್ನು ಲೇವಡಿ ಮಾಡಿದ್ದಾರೆ. ಸಿಎಂ ಆಗಲು ದೇವಸ್ಥಾನಗಳ ಬದಲು 'ಇಟಲಿ ಮಾತೆ'ಯ ಟೆಂಪಲ್ ಸುತ್ತಬೇಕು, ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ದಾವಣಗೆರೆ (ಅ.23): ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯಾದ್ಯಂತ ನಡೆಸುತ್ತಿರುವ ದೇವಸ್ಥಾನಗಳ ಭೇಟಿ (ಟೆಂಪಲ್ ರನ್) ಬಿಟ್ಟು, ಇಟಲಿ ಮಾತೆಯ ಟೆಂಪಲ್ ಸುತ್ತಿದರೆ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ದಾರಿ ತಪ್ಪಿದ ಮಗ. ಅವರು ಚಾಮುಂಡಿ, ಮಾರಮ್ಮ, ಗೌರಮ್ಮ, ರಾಘವೇಂದ್ರ ಸ್ವಾಮಿ ಎಂದು ಟೆಂಪಲ್ ರನ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಈ ಟೆಂಪಲ್‌ಗಳಿಗಿಂತ ದೊಡ್ಡ ಟೆಂಪಲ್ ಇಟಲಿ ಟೆಂಪಲ್ ಇದೆ. ಆ ಟೆಂಪಲ್ ಸುತ್ತಬೇಕು. ಅಲ್ಲಿ ಸರಿಯಾದ ಕಪ್ಪ ಕಾಣಿಕೆ ಕೊಟ್ಟು, ದೇವರನ್ನು ಪ್ರದಕ್ಷಿಣೆ ಹಾಕಿದರೆ ಮಾತ್ರ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರದ ಎಲ್ಲಾ ರಂಗಗಳಲ್ಲಿ ವಿಫಲ:

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದ ಅಶೋಕ್, 'ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗದಲ್ಲೂ ಸಂಪೂರ್ಣ ಫೇಲೂರ್ ಆಗಿದೆ. ಸರ್ಕಾರದ ಯಾವುದೇ ಇಲಾಖೆಯಲ್ಲಿ ಹಣ ಇಲ್ಲ. ಬಿಜೆಪಿ ಅವಧಿಯ ಕಾಮಗಾರಿಗಳನ್ನೇ ಉದ್ಘಾಟನೆ ಮಾಡುತ್ತಿದ್ದಾರೆ. ಹಣ ಇಲ್ಲದಿದ್ದರೂ, ಸಿಎಂ ಮತ್ತು ಡಿಸಿಎಂ ಮನೆ ರಿಪೇರಿ ಹಾಗೂ ಬಳ್ಳಾರಿ ಸಾಧನಾ ಸಮಾವೇಶಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣ ಇಲ್ಲ. ಕೇವಲ ಹೆಣಗಳೇ ಬೀಳುತ್ತಿವೆ. ನೌಕರರಿಗೆ ಸರಿಯಾಗಿ ಸಂಬಳ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಧಿಕಾರಿಗಳ ಸಾವು, ಅನಾಹುತಗಳು ಹೆಚ್ಚಾಗುತ್ತಿವೆ. ಇವೆಲ್ಲವನ್ನೂ ಮರೆಮಾಚಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್‌.ಎಸ್) ವಿಚಾರವನ್ನು ಮುಂದೆ ತಂದಿದ್ದಾರೆ ಎಂದರು.

ಯತೀಂದ್ರ ಹೇಳಿಕೆ ಸಿದ್ದರಾಮಯ್ಯನವರದೇ ಕೈವಾಡ:

ಇತ್ತೀಚೆಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ್ದ ನವೆಂಬರ್ ಕ್ರಾಂತಿ ಹೇಳಿಕೆ ಕುರಿತು ಮಾತನಾಡಿದ ಅಶೋಕ್, 'ಯತೀಂದ್ರ ಈ ವಿಚಾರ ಹೇಳಿದಾಗ ಕಾಂಗ್ರೆಸ್‌ನವರಿಗೆ ಸರಿ ಇರುತ್ತದೆ. ಆದರೆ, ರಾಜಣ್ಣ ಹೇಳಿದಾಗ ಅವರನ್ನು ಓಡಿಸಿಬಿಟ್ಟರು. ಈ ಹೇಳಿಕೆ ಸಿದ್ದರಾಮಯ್ಯನವರೇ ಹೇಳಿ ಮಾಡಿಸಿರುವುದು. ಬೆಳಗಾವಿಗೆ ಹೋಗಿ ಯತೀಂದ್ರ ಅವರ ಮನೆಯಲ್ಲೇ ಹೇಳಿದ್ದಾರೆ ಎಂದರೆ, ಡಿ.ಕೆ. ಶಿವಕುಮಾರ್ ಅವರಿಗೆ 'ಪಂಗನಾಮ' (ವಂಚನೆ) ಪಕ್ಕಾ. ಕಾಂಗ್ರೆಸ್ ಒಂದು ಒಡೆದ ಮನೆಯಾಗಿದೆ ಎಂದು ಹೇಳಿದರು.

ಮಂತ್ರಿ ಪದವಿ ಮಾನದಂಡವೇ ಕಪ್ಪಕಾಣಿಕೆ:

ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ ಆರ್. ಅಶೋಕ್, 'ಗುತ್ತಿಗೆದಾರರ ₹35 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಆದರೆ, ಈ ಸರ್ಕಾರ ಬಿಹಾರ ಚುನಾವಣೆಗಾಗಿ 400 ಕೋಟಿ ರೂ. ಟಾರ್ಗೆಟ್ ಕೊಟ್ಟಿದೆ. ಯಾರು ಮಂತ್ರಿಗಳಾಗಿ ಮುಂದುವರಿಯಬೇಕು ಅವರು ₹50 ಕೋಟಿ, ₹100 ಕೋಟಿ ರೂ. ಕಪ್ಪ ಕಾಣಿಕೆ ಕೊಡಬೇಕು. ದುಡ್ಡು ಕೊಟ್ಟರೆ ಮಂತ್ರಿಯಾಗಿ ಇರುತ್ತಾರೆ, ಇಲ್ಲದಿದ್ದರೆ ಗೇಟ್ ಪಾಸ್. ಯಾರು ಮಂತ್ರಿ ಪದವಿ ಕಳೆದುಕೊಳ್ಳುತ್ತಾರೋ ಅವರು ದುಡ್ಡು ಕೊಟ್ಟಿಲ್ಲ ಎಂದರ್ಥ. ಇದು ಕಾಂಗ್ರೆಸ್‌ನ ಮಾನದಂಡ' ಎಂದು ಆಕ್ರೋಶ ವ್ಯಕ್ತಪಡಿಸಿದರು.