ಹಿಂದೂ ಯುವಕ ಗವಿಸಿದ್ದಪ್ಪ ಹತ್ಯೆ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಇದರ ಹಿನ್ನಲೆಯಲ್ಲಿ ಕೊಪ್ಪಳ ನಗರದ ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ.
ಕೊಪ್ಪಳ (ಆ.10) ಮುಸ್ಲಿಂ ಯುವತಿ ಪ್ರೀತಿಸಿದ ಕಾರಣಕ್ಕೆ ಕೊಪ್ಪಳದ ಹಿಂದೂ ಯುವಕ ಗವಿಸಿದ್ದಪ್ಪ ಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ನಾಳೆ (ಆಗಸ್ಟ್ 11) ಗವಿಸಿದ್ದಪ್ಪ ಹತ್ಯೆ ಖಂಡಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈಗಾಗಲೇ ಗವಿಸಿದ್ದಪ್ಪ ಹತ್ಯೆ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಭಾರಿ ಪ್ರತಿಭಟನೆಗೆ ಸಮುದಾಯ ಸಜ್ಜಾಗಿದೆ. ಇದರ ಹಿನ್ನಲೆಯಲ್ಲಿ ಕೊಪ್ಪಳ ನಗರದ ಖಾಸಗಿ ಶಾಲೆಗಳಿಗೆ ನಾಳೆ (ಆ.11) ರಜೆ ಘೋಷಿಸಲಾಗಿದೆ.
ವಾಲ್ಮೀಕಿ ಸಮುದಾಯ ನಾಳೆ ಕೊಪ್ಪಳದ ಗಡಿಯಾರ ಕಂಬದಿಂದ,ಅಶೋಕ ವೃತ್ತದವರೆಗೂ ಬೃಹತ್ ಪ್ರತಿಭಟನೆ ನಡೆಸಲಿದೆ.ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭಗೊಳ್ಳಲಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ನಾಳೆ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇತ್ತ ಪೊಲೀಸರು ಭದ್ರತೆಗೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚುವರಿ ಪೊಲೀಸರ ನಿಯೋಜನೆಗೆ ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚೆರಿಕೆ ವಹಿಸಲು ಸೂಚಿಸಲಾಗಿದೆ.
ಪ್ರತಿಭಟನೆಗೆ ಸಹಕರಿಸುವಂತೆ ಬಸನಗೌಡ ಪಾಟೀಲ್ ಯತ್ನಾಳ್ ಮನವಿ
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಪ್ಪಳದ ಮೃತ ಗವಿಸಿದ್ದಪ್ಪ ಮನೆಗೆ ಬೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಪೋಷಕರು ಹಾಗೂ ಸಮುದಾಯ ನಡೆಸುತ್ತಿರುವ ನ್ಯಾಯದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಮಾಧ್ಯಮದ ಜೊತೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾಳಿನ ಪ್ರತಿಭಟನೆಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಗವಿಸಿದ್ದಪ್ಪ ಕುಟುಂಬಸ್ಥರಿಗೆ ಕೇವಲ ಸಾಂತ್ವನ ನೀಡಿದರೆ ಸಾಲದು. ಅವರ ನೆರವಿಗೆ ಬರಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದರೆ. ಮುಸ್ಲಿಮರ ಕ್ರೌರ್ಯದ ಮನಸ್ಥಿತಿಯಿಂದ ಈ ಹತ್ಯೆಯಾಗಿದೆ. ಮಸೀದಿ ಮುಂದೆ ಗವಿಸಿದ್ದಪ್ಪನ ಕೊಲೆಯಾಗಿದೆ. ಇದನ್ನು ತಡೆಯುವ ಪ್ರಯತ್ನ ಯಾರೂ ಮಾಡಲಿಲ್ಲ ಎಂದು ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ವಾಲ್ಮೀಕಿ ಸ್ವಾಮೀಜಿ ಭೇಟಿ
ನಾಳೆ ವಾಲ್ಮೀಕಿ ಸಮುದಾಯದ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೂ ಮುನ್ನ ಮೃತ ಗವಿಸಿದ್ದಪ್ಪನ ಮನೆಗೆ ವಾಲ್ಮೀಕಿ ಸಮುದಾಯದ ಪ್ರಸನ್ನನಂದಪುರಿ ಸ್ವಾಮೀಜಿ ಭೇಟಿ ನೀಡಿದ್ದಾರೆ. ಗವಿಸಿದ್ದಪ್ಪ ಪೋಷಕರಿಗೆ ಸಾಂತ್ವನ ಹೇಳಿದ ಸ್ವಾಮೀಜಿ, ಸಮುದಾಯ ನಿಮ್ಮ ಜೊತೆಗಿದೆ ಎಂಬ ಭರವಸೆ ನೀಡಿದ್ದಾರೆ.
