ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಯಚೂರಿನ ಜವಳಗೇರಾದಲ್ಲಿ ಕೃಷಿ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ತೊಗರಿ, ಕಡಲೆಯಂತಹ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಬದಲು ಸಂಸ್ಕರಿಸಿ ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗಲಿದೆ ಎಂದು ರೈತರಿಗೆ ಸಲಹೆ ನೀಡಿದರು. 

ರಾಯಚೂರು (ಅ.16): ಕೃಷಿ ಸಂಸ್ಕರಣಾ ಘಟಕಗಳನ್ನು (ಅಗ್ರೋ ಪ್ರೊಸೆಸಿಂಗ್ ಸೆಂಟರ್) ಬಳಸಿಕೊಂಡಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ. ರೈತರಿಗೆ ಮಾರುಕಟ್ಟೆ ಮತ್ತು ಸಂಪರ್ಕ ಸರಳವಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ರೈತರಿಗೆ ಸಲಹೆ ನೀಡಿದರು.

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಭಾರತ ಸರ್ಕಾರ ಮತ್ತು ನಬಾರ್ಡ್ ಇವರ ಸಹಯೋಗದಲ್ಲಿ ನಡೆದ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇಡೀ ರಾಯಚೂರು ಜಿಲ್ಲೆಯಾದ್ಯಂತ ಅಂದಾಜು 40 ಕೃಷಿ ಸಂಸ್ಕರಣ ಘಟಕಗಳ ಸ್ಥಾಪನೆ ಮಾಡಿ ಸಂಸ್ಕರಣೆಗೊಳಪಡಿಸುವಷ್ಟು ರಾಯಚೂರು ಜಿಲ್ಲೆಯೊಂದರಲ್ಲಿಯೇ ಪ್ರತಿ ವರ್ಷ ಅಂದಾಜು ಸಾವಿರಾರು ಮೆಟ್ರಿಕ್ ಟನ್ ದಷ್ಟು ತೊಗರಿ ಉತ್ಪನ್ನ ಸಿಗುತ್ತೆ. ರೈತರು ತೊಗರಿ ಮತ್ತು ಕಡಲೆ ಬೆಳೆಯುತ್ತಾರೆ. ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಮಧ್ಯೆದ ಈ ಭೂಮಿಯು ಅತ್ಯಂತ ಸಂಪದ್ಭರಿತವಾಗಿದೆ. ಈ ಪ್ರದೇಶದಲ್ಲಿ ಪ್ರತಿ ವರ್ಷ ಅಂದಾಜು 80,000 ಮೆಟ್ರಿಕ್ ಟನ್ ತೊಗರಿ ಉತ್ಪನ್ನ ಹಾಗೂ ಅಂದಾಜು 34,000 ಮೆಟ್ರಿಕ್ ಟನ್ ಕಡಲೆ ಉತ್ಪನ್ನ ಬರುತ್ತಿದ್ದು, ಯಾವುದೇ ಉತ್ಪನ್ನ ಇರಲಿ ರೈತರು ಆಯಾ ಉತ್ಪನ್ನವನ್ನು ನೇರವಾಗಿ ಮಾರುಕಟ್ಟೆಗೆ ಸಾಗಿಸದೇ ಸಂಸ್ಕರಣೆಗೊಳಪಡಿಸಿ ಪ್ಯಾಕೇಟ್ ಅಥವಾ ಬೇರೆ ಬೇರೆ ರೂಪದಲ್ಲಿ ಮಾರಾಟ ಮಾಡಿದಲ್ಲಿ ಉತ್ತಮ ಬೆಲೆ ಸಿಗಲಿದೆ ಎಂದರು. ಈ ದಿಶೆಯಲ್ಲಿ ಯೋಚಿಸಿ ಕೇಂದ್ರ ಸರ್ಕಾರವು ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಭಾಗವಾಗಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಕ್ಕೆ ಹಸಿರುನಿಸಾನೆ ತೋರಲಾಗಿದೆ. ರೈತರು ಈ ಕೃಷಿ ಸಂಸ್ಕರಣಾ ಘಟಕಗಳ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ರಾಜೀವ್ ಗಾಂಧಿ ವಿವಿ-ಜಿಟೆಕ್ ಸಹಭಾಗಿತ್ವ: ಆರೋಗ್ಯ-ಶಿಕ್ಷಣಕ್ಕೆ ಬೂಸ್ಟ್!

ರಾಯಚೂರು: ಕೃಷಿ ಸಂಸ್ಕಾರಣಾ ಘಟಕಗಳಿಗೆ ನಬಾರ್ಡ್ ಸಾಥ್:

ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಮ್ಮೊಂದಿಗೆ ಕೈಜೋಡಿಸಿರುವುದು ಉತ್ತಮ ಬೆಳೆವಣಿಗೆಯಾಗಿದೆ. ರಾಜ್ಯ ಕೇಂದ್ರದಲ್ಲಿನ ಉನ್ನತ ಮಟ್ಟದ ಅಧಿಕಾರಿಗಳು, ಜಿಲ್ಲಾ ಕೇಂದ್ರದಲ್ಲಿನ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೃಷಿ ಅಧಿಕಾರಿಗಳು ಇಂತಹ ಕೃಷಿ ಸಂಸ್ಕರಣಾ ಘಟಕಗಳ ಬಲವರ್ಧನೆಯ ಬಗ್ಗೆ ಗಮನ ಹರಿಸಬೇಕು ಎಂದರು.

ಕೇಂದ್ರ ಸರ್ಕಾರದಿಂದ ರೈತರಿಗಾಗಿ ಹಲವು ಯೋಜನೆ:

ಕೇಂದ್ರ ಸರ್ಕಾರವು ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ ನೀಡುವುದಕ್ಕೆ ಆದ್ಯತೆ ನೀಡಿದ್ದೇವೆ. 24.74 ಕೋಟಿ ರೈತರಿಗೆ ಕಿಸಾನ್ ಕಾರ್ಡ್ ನೀಡಿದ್ದೇವೆ. 8000 ಕೋಟಿಯಷ್ಟು ಮಣ್ಣಿನ ಪರೀಕ್ಷೆ ನಡೆಸಿದ್ದೇವೆ. ಕೃಷಿ ಸಿಂಚಾಯಿ ಯೋಜನೆಯಡಿ 93,000 ಕೋಟಿ ರೂ.ನಷ್ಟು ಅನುದಾನವನ್ನು ನೀರಾವರಿ ಯೋಜನೆಗಳಿಗೆ ನೀಡಿದ್ದೇವೆ. ಪ್ರಧಾನಮಂತ್ರಿ ಫಸಲ ಭಿಮಾ ಯೋಜನೆಯಡಿ 1.74 ಲಕ್ಷ ಕೋಟಿ ರೂ. ಪರಿಹಾರವನ್ನು ಅನ್ನದಾತರಿಗೆ ನೀಡಿದ್ದೇವೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತಲಾ ಒಬ್ಬ ರೈತರಿಗೆ ವಾರ್ಷಿಕ 6 ಸಾವಿರ ರೂ.ನಂತೆ ಇದುವರೆಗೆ 3.69 ಲಕ್ಷ ಕೋಟಿ ರೂ.ನಷ್ಟು ಮೊತ್ತವನ್ನು ಕಿಸಾನ್ ಸಮ್ಮಾನ್ ನಿಧಿಗೆ ಬಳಸಿದ್ದೇವೆ ಎಂದರು.

ರೈತರ ನೆರವಿಗೆ ಕೇಂದ್ರ ಸರ್ಕಾರವಿದೆ: ನಿರ್ಮಲಾ ಸೀತಾರಾಮನ್

ರೈತರ ಬೆಳೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಬೆಂಬಲ ಬೆಲೆ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ಬೆಳೆಹಾನಿ ಆದ್ರೂ ರೈತರ ನೆರವಿಗೆ ಕೇಂದ್ರ ಸರ್ಕಾರ ಇದೆ. ಪ್ರತಿ ಹೆಕ್ಟೇರ್

ತೊಗರಿ ಬೆಳೆಗೆ 2013-14ರಲ್ಲಿ ಸಾಲಿನಲ್ಲಿ 4,300 ರೂ‌. ಬೆಲೆ ನಷ್ಟ ಪರಿಹಾರ ನೀಡಿದ್ದು, 2025-26ನೇ ಸಾಲಿನಲ್ಲಿ ಪರಿಹಾರ ಮೊತ್ತವನ್ನು ಶೇ.84ರಷ್ಟು ಹೆಚ್ಚಿಸಿ 7500 ರೂ. ನಿಗದಿ ಮಾಡಿದ್ದೇವೆ. ಹೆಸರು ಬೆಳೆಗೆ ಬೆಂಬಲ ಬೆಲೆಯ ಮೊತ್ತವನ್ನು ಶೇ.81ರಷ್ಟು ಹೆಚ್ಚಿಸಿ ಪ್ರತಿ ಹೆಕ್ಟೇರ್ ಗೆ 8800 ರೂ.ನಿಗದಿ ಮಾಡಿದ್ದೇವೆ. ಈ ಬೆಳೆಗೆ ಈ ಹಿಂದೆ ಪ್ರತಿ ಹೆಕ್ಟರ್ ಗೆ 4,500 ನಿಗದಿಪಡಿಸಲಾಗಿತ್ತು. ಇನ್ನೂ ನೀತಿ ಆಯೋಗದಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷಿ ಜಿಲ್ಲಾ ಕಾರ್ಯಕ್ರಮಗಳು ಜಾರಿಯಲ್ಲಿವೆ. ಈ ಭಾಗದಲ್ಲಿನ ಮಹತ್ವಾಕಾಂಕ್ಷಿ ಯೋಜನೆಗಳು ಮತ್ತು ಇತರೆ ವಿಷಯಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯವು ಅಚ್ಚುಕಟ್ಟಾಗಿ ಆಗಬೇಕಿದೆ. ನೀತಿ ಆಯೋಗ ನಡೆಸಿದ ಆ್ಯಸ್ಪೈರೇಷನಲ್ ಜಿಲ್ಲಾ ರ‍್ಯಾಂಕಿಂಗ್‌ನಲ್ಲಿ 2020-23ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಗೆ ಟಾಪ್ ಒನ್ ಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ ಮಸ್ಕಿ ತಾಲೂಕಿಗೆ ಟಾಪ್ 8ನೇ ಸ್ಥಾನ ಲಭಿಸಿದೆ ಎಂದರು.

ಈ ವೇಳೆ ಐಟಿಸಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ್ ಪೂರಿ ಮಾತನಾಡಿ, ಪ್ರತಿ ಆಯವ್ಯದಲ್ಲಿ ಕೇಂದ್ರ ಸರ್ಕಾರವು ರೈತರು ಮತ್ತು ಕೃಷಿ ಹಾಗೂ ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳಿಗೆ ಸೂಕ್ತ ಅನುದಾನ ಮೀಸಲಿರಿಸುತ್ತಿದೆ ಎಂದು ತಿಳಿಸಿದರು. ಕೃಷಿ ಹಾಗೂ ಕೃಷಿ ಕ್ಷೇತ್ರಗಳ ಬೆಳವಣಿಗೆಗಾಗಿ ಐಟಿಸಿ ಜೊತೆಗೆ ನಬಾರ್ಡ ಕೈಜೋಡಿಸಿದ್ದಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಇದು ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಕಾರ್ಯಗಳನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕೌಶಲ್ಯ, ಉದ್ಯೋಗ ಸೃಷ್ಟಿಗೆ ಪ್ರಧಾನಿ ಇಂಟರ್ನ್‌ಶಿಪ್‌ ಯೋಜನೆ ಸಹಕಾರಿ: ನಿರ್ಮಲಾ ಸೀತಾರಾಮನ್‌

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ ನಾಗರಾಜ್ ಅವರು ಮಾತನಾಡಿ, ಕೇಂದ್ರ ಹಣಕಾಸು ಸಚಿವರ ಸಂಸದರ ನಿಧಿಯ ಮೊತ್ತವನ್ನು ಬಳಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ತಲಾ 2.54 ಕೋಟಿ ರೂ ವೆಚ್ಚದಲ್ಲಿ, ನಬಾರ್ಡ್ ಜೊತೆಗೆ ಜಂಟಿಯಾಗಿ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಯಡಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ನಬಾರ್ಡ ಅಧ್ಯಕ್ಷರಾದ ಶಾಜಿ ಕೆ.ವಿ., ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮುಖಂಡರಾದ ವೆಂಕಟರಾವ್ ನಾಡಗೌಡ, ಕೆ.ವಿರುಪಾಕ್ಷಪ್ಪ, ಜವಳಗೇರಾ ಗ್ರಾಪಂ ಅಧ್ಯಕ್ಷರಾದ ನಾಗಲಿಂಗ ಯಮನೂರಪ್ಪ ಹಾಗೂ ಗ್ರಾಪಂನ ಇನ್ನೀತರ ಸದಸ್ಯರು ಮತ್ತು ಇತರರು ಇದ್ದರು.