ಸಿಎಂ ಸಿದ್ದರಾಮಯ್ಯ ವಿರುದ್ಧ 24 ಕೊಲೆಗಳ ಆರೋಪ ಮಾಡಿದ ಮಹೇಶ್ ಶೆಟ್ಟಿ ತಿಮ್ಮರೋಡಿ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಗೃಹ ಸಚಿವ ಪರಮೇಶ್ವರ್ ಎಫ್ಐಆರ್ ದಾಖಲಿಸಿ ಬಂಧಿಸಲು ಸೂಚಿಸಿದ್ದಾರೆ. ಬಿಎನ್ಎಸ್ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವ ಸಾಧ್ಯತೆ ಇದೆ. ಹಳೆ ಕೇಸ್ ಕೂಡ ತನಿಖೆ.
ಬೆಂಗಳೂರು (ಆ.18): ಸಿಎಂ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆ ಎಂದಿದ್ದ ಮಹೇಶ್ ಶೆಟ್ಟಿ ತಿಮ್ಮರೋಡಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಆತನ ವಿರುದ್ಧ ಒಂದೇ ದಿನದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಕೂಡಲೇ ಮಹೇಶ್ ಶೆಟ್ಟಿ ತಿಮ್ಮರೋಡಿಯ ಮೇಲೆ ಎಫ್ಐಆರ್ ದಾಖಲಿಸಿಮ ಬಂಧನ ಮಾಡುವಂತೆ ಸದನದಲ್ಲಿಯೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ '24 ಕೊಲೆಗಳನ್ನು ಮಾಡಿದ್ದಾರೆ' ಎಂದು ಹೇಳಿಕೆ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಬಿಎನ್ಎಸ್ ಕಾಯ್ದೆಯಡಿ ಅವಹೇಳನೆ ಮಾಡಿದ ಆರೋಪದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ತಿಮರೋಡಿ ಹೇಳಿಕೆ ಮತ್ತು ಸರ್ಕಾರದ ಕ್ರಮ:
ಇತ್ತೀಚೆಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತಿಮರೋಡಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಗೃಹ ಸಚಿವರು ನೀಡಿರುವ ಸೂಚನೆಯ ಮೇರೆಗೆ, ಪೊಲೀಸರು ತಿಮರೋಡಿ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಬಂಧನವಾಗುವ ಸಾಧ್ಯತೆಯಿದೆ.
ಹಳೇ ಪ್ರಕರಣಗಳ ಪರಿಶೀಲನೆ:
ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರ ಸೂಚನೆ ಹೊರಬೀಳುತ್ತಿದ್ದಂತೆಯೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ತಿಮರೋಡಿ ವಿರುದ್ಧದ ಹಳೆಯ ಪ್ರಕರಣಗಳನ್ನು ಕೆದಕುತ್ತಿದ್ದಾರೆ. ಅವರ ಹಿಂದಿನ ಹೇಳಿಕೆಗಳು ಮತ್ತು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಕಾನೂನು ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಬಿಎನ್ಎಸ್ ಕಾಯ್ದೆಯಡಿ (ಭಾರತೀಯ ನ್ಯಾಯ ಸಂಹಿತೆ) ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತಿಮರೋಡಿ ಬಿಜೆಪಿ ಕಾರ್ಯಕರ್ತನೇ ಎಂದ ಡಿಕೆಶಿ:
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ತಿಮರೋಡಿ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತೆ, ಸುಮ್ಮನಿರಲು ಸಾಧ್ಯವಿಲ್ಲ. 'ಇದು ಹೊಸದೇನಲ್ಲ, ಬಹಳ ಹಿಂದಿನಿಂದಲೂ ಮುಖ್ಯಮಂತ್ರಿಗಳ ವಿರುದ್ಧ ತಿಮ್ಮರೋಡಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ನಮ್ಮ ಪಕ್ಷದ ಮುಖ್ಯಸ್ಥರ ಮೇಲೂ ಇದೇ ರೀತಿ ಆರೋಪ ಮಾಡಿದ್ದರು. ಈಗ ಅವರ ಪಕ್ಷದ ನಾಯಕರ ಮೇಲೆ ಹೇಳಿದ್ದಾರೆ. 'ಬಿಜೆಪಿಯವರು ಏಕೆ ಈ ಬಗ್ಗೆ ಮಾತಾಡುತ್ತಿದ್ದಾರೆ? ಅವನು ಆ ಪಕ್ಷದ ಕಾರ್ಯಕರ್ತ, ಬಿಜೆಪಿ ಕಾರ್ಯಕರ್ತನೇ' ಎಂದು ತಿರುಗೇಟು ನೀಡಿದರು. 'ಅವನ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ. ಎಲ್ಲವನ್ನೂ ತೆಗೆದು ನೋಡಿ' ಎಂದು ಪೊಲೀಸರಿಗೆ ಸೂಚನೆ ನೀಡಿದರು.
