Survey work pressure on teachers?: ಕೋಲಾರದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ ಅಕ್ತರ್ ಬೇಗಂ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಸಮೀಕ್ಷೆಯ ಒತ್ತಡದಿಂದ ನಡೆದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದು, ಅವರು ಮನೆಯಿಂದ ಸಮೀಕ್ಷೆಯ ಬ್ಯಾಗ್ ತೆಗೆದುಕೊಂಡು ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.

ಕೋಲಾರ (ಅ.15): ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿ ಅಕ್ತರ್ ಬೇಗಂ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ. ಅವರ ಮೃತದೇಹವನ್ನು ಕೋಲಾರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪೋಸ್ಟ್‌ಮಾರ್ಟಂ ವರದಿಗಾಗಿ ಕಾಯಲಾಗಿದೆ.

ಘಟನೆ ಬಳಿಕ ಕೋಲಾರ ಪ್ರಭಾರ ಜಿಲ್ಲಾಧಿಕಾರಿ ಮಂಗಳ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಅಕ್ತರ್ ಬೇಗಂ ಪ್ರಕರಣ ಸಮೀಕ್ಷೆಯ ಒತ್ತಡಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿರು.

ಅಕ್ತರ್ ಬೇಗಂ ತಮ್ಮ ಪುತ್ರನಿಂದಲೇ ಬಸ್ ನಿಲ್ದಾಣಕ್ಕೆ ಡ್ರಾಪ್ ಪಡೆದಿದ್ದಾರೆ. ಭಾನುವಾರ ಕೂಡ ಅವರು ಸಮೀಕ್ಷೆಗೆ ಬಂದಿಲ್ಲ. ಎನಿಮರೇಷನ್ ಬ್ಯಾಗ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಕಾಣದಿದ್ದಾಗ ಮನೆಯವರಿಂದ ಕಾಣೆಯಾಗಿರುವ ಕುರಿತು ದೂರು ನೀಡಿದ್ದಾರೆ. ಆದರೆ ಕರ್ತವ್ಯದ ಕುರಿತು ಯಾವುದೇ ಮಾಹಿತಿಯಿಲ್ಲ ಎಂದರು.

ಯಾರಿಗೂ ಒತ್ತಡ ಹಾಕಿಲ್ಲ:

ಸಮೀಕ್ಷೆ ವಿಚಾರ ಸಂಬಂಧ ಇದುವರೆಗೂ ಯಾವುದೇ ಶಿಕ್ಷಕರು ಒತ್ತಡ ಹಾಕಿದ ಕುರಿತು ಹೇಳಿಕೊಂಡಿಲ್ಲ. ಅಕ್ತರ ಬೇಗಂ ಕೂಡ ಕರ್ತವ್ಯ ಒತ್ತಡ ಕುರಿತು ಹೇಳಿಕೊಂಡಿಲ್ಲ. ಅಕ್ತರ್ ಬೇಗಂ ಸಮೀಕ್ಷೆ ಸಮರ್ಪಕವಾಗಿಯೇ ನಿರ್ವಹಿಸಿದ್ದಾರೆ. ಈ ಬಗ್ಗೆ ಸಮೀಕ್ಷೆ ನಡೆದಿರುವ ಮನೆಗಳಲ್ಲಿ ವಿಚಾರಣೆ ಮಾಡಿದ್ದೇವೆ. ಸಮೀಕ್ಷೆಯ ಟಾರ್ಗೆಟ್ ರೀಚ್ ಆಗಿಲ್ಲ ಎಂಬ ಕುರಿತು ಯಾವುದೇ ಒತ್ತಡವಿರಲಿಲ್ಲ. ಕೆಲವರಿಗೆ ಎಪ್ಪತ್ತು ಮನೆ ಕೆಲವರಿಗೆ ಎಂಬತ್ತು ಮನೆ ಕೊಡಲಾಗಿದೆ. ಆದರೆ ಯಾವುದೇ ಒತ್ತಡ ಹಾಕಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಒತ್ತಡ ಸಮೀಕ್ಷೆ ಯಲ್ಲಿ ಇಲ್ಲ. ಸೂಪರ್‌ವೈಸರ್‌ಗಳಿಗೆ ಸಮೀಕ್ಷೆಯ ಪ್ರಗತಿ ಕುರಿತು ಕೇಳಲಾಗುತ್ತಿದೆ. ಆದರೆ ಯಾವುದೇ ಶಿಕ್ಷಕರಿಗೆ ಪ್ರತ್ಯೇಕವಾಗಿ ಕರೆದು ಒತ್ತಡ ಹಾಕಿಲ್ಲ ಎಂದು ಎಂದು ಜಿಲ್ಲಾಧಿಕಾರಿ ಸ್ಫಷ್ಟಪಡಿಸಿದರು