ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಮಾತನಾಡಲು ಎದ್ದಾಗಲೂ ತಮ್ಮನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದ,
ಬೆಂಗಳೂರು: ಪ್ರತಿ ಸಲ ಮಾತನಾಡುವಾಗ ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತೀರಿ ಎಂದು ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಅಸಮಾಧಾನ ಹೊರಹಾಕಿದ್ದಾರೆ. ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ವಿಧೇಯಕ ಬಗ್ಗೆ ಮಾತನಾಡಲು ಮುಂದಾದರು. ಈ ವೇಳೆ ಸ್ಪೀಕರ್ ತಡೆಯುವ ಕೆಲಸವನ್ನು ಮಾಡಿದರು. ಇದರಿಂದ ಅಸಮಾಧಾಗೊಂಡ ಶಾಸಕ ಕಂದಕೂರು, ಪ್ರತಿ ಸಲ ನಾನು ಮಾತನಾಡಲು ಎದ್ದಾಗ ಹೀಗೇ ಮಾಡ್ತೀರಿ. ನಾವೂ ಜನರಿಂದ ಆಯ್ಕೆ ಆಗಿ ಬಂದವರು. ಪ್ರತಿ ಸಲ ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡ್ತೀರಿ. ಸದನದ ಸದಸ್ಯ ನಾನು, ಈ ರೀತಿಯ ಅಗೌರವ ತೋರಬೇಡಿ ಎಂದು ಜೋರು ಧ್ವನಿಯಲ್ಲಿಯೇ ಬೇಸರ ಹೊರಹಾಕಿದರು.
ನಿಮಗೆ ಬಿಲ್ ಬೇಕಾ ಅಥವಾ ಬೇಡವಾ ಎಂಬುದನ್ನು ಮಾತ್ರ ಹೇಳಿ. ಹಿಂದಿನದ್ದೆನ್ನಲಾ ಹೇಳ ಬೇಡಿ. ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಇದಕ್ಕೆ ಗರಂ ಆದ ಶಾಸಕ, ಇಲ್ಲಿ ನನ್ನ ಮನೆಯ ವಿಷಯ ಮಾತನಾಡುತ್ತಿಲ್ಲ. ಬಿಲ್ ಬಗ್ಗೆಯೇ ಹೇಳುತ್ತಿದ್ದೇನೆ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಹಿರಿಯ ಸಚಿವ ಎಚ್ ಕೆ ಪಾಟೀಲ್, ನೀವು ಮೊದಲ ಸಲ ಆಯ್ಕೆ ಆಗಿ ಬಂದಿದ್ದೀರಿ. ಈ ರೀತಿಯ ವರ್ತನೆ ಬೇಡ, ಉತ್ತಮ ಸಂಸದೀಯಪಟು ಆಗಬೇಕಾಗಿರುವವರು ನೀವು ಎಂದು ಶರಣಗೌಡ ಕಂದಕೂರ್ ಅವರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ
ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ) ವಿಧೇಯಕ ವಿಧಾನಸಭೆಯಲ್ಲಿ ಮಂಡನೆ ಮಾಡಲಾಯ್ತು. ಜನಸಂದಣಿ ಹೆಚ್ಚಾಗುವ ಸಂಧರ್ಭಗಳಲ್ಲಿ ಉಂಟಾಗುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಕಾಯಿದೆ ಇದಾಗಿದೆ. ಹೆಚ್ಚು ಜನ ಸೇರುವ ಸಂದರ್ಭಗಳಲ್ಲಿ ಅನುಮತಿ ಪಡೆಯಬೇಕು. ಏಳು ಸಾವಿರ ಅಥವಾ ಅದಕ್ಕೂ ಹೆಚ್ಚು ಜನ ಸೇರುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಆಯಾ ವ್ಯಾಪ್ತಿಯ ಪೋಲೀಸ್ ಠಾಣೆಯ ಅನುಮತಿ ಪಡೆಯಬೇಕು. ಕ್ರಿಕೆಟ್ ಸ್ಟೇಡಿಯಂ ನಲ್ಲಿ ಆದ ಘಟನೆ ಬಗ್ಗೆ ನಮಗೆ ಪರಸ್ಪರ ಸಂಬಂಧ ಇಲ್ಲ ಎಂದು ಹೇಳುತ್ತಿದ್ದೇವೆ ಎಂದು ಜಿ.ಪರಮೇಶ್ವರ್ ಹೇಳಿದರು.
ಹೆಚ್ಚು ಜನ ಸೇರಿದಾಗ ಒಂದು ವೇಳೆ ಅವಘಡಗಳು ಆದ್ರೆ ಅದಕ್ಕೆ ಸೂಕ್ತ ಶಿಕ್ಷೆ ಕೂಡ ಆಗಬೇಕು. ಸುಳ್ಳು ವದಂತಿಗಳನ್ನು ಹರಡಬಾರದು. RCB ಅವರು ವಿಜಯೋತ್ಸವ ಕಾರ್ಯಕ್ರಮಕ್ಕೆ ಬನ್ನಿ ಅಂತಾ ಪೋಸ್ಟ್ ಮಾಡಿದ್ದರು. ಈ ರೀತಿ ಮಾಡುವುದರಿಂದ ಹೆಚ್ಚು ಜನ ಸೇರಿ ಅವಘಡಗಳು ಆಗುತ್ತವೆ. ಈ ರೀತಿ ಪೂರ್ವ ತಯಾರಿ ಇಲ್ಲದೇ ವದಂತಿಗಳು ಹಬ್ಬಿಸಿದರೆ ಈ ವಿಧೇಯಕದ ಅಡಿ ಶಿಕ್ಷೆ ನೀಡಲು ಅವಕಾಶ ಇದೆ ಎಂದು ಪರಮೇಶ್ವರ್ ಉಲ್ಲೇಖಿಸಿದರು.
ರಾಜಕೀಯ ಸಭೆಗಳು, ಪ್ರತಿಭಟನೆಗಳು, ಸಭೆ ಸಮಾರಂಭಗಳು ನಡೆಯುವಾಗ ಹೆಚ್ಚುವರಿ ಜನ ಸೇರುತ್ತಾರೆ. ಅಂತಹ ಸಂಧರ್ಭದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಆಗಬೇಕು. ಒಂದು ವೇಳೆ ಅವಘಡಗಳು ನಡೆದರೆ ಯಾರು ಹೊಣೆ ಹೊರಬೇಕು ಎಂಬ ಬಗ್ಗೆಯೂ ಈ ವಿಧೇಯಕದಲ್ಲಿ ಅವಕಾಶಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಕೆಟ್ಟ ಮೇಲೆ ಬುದ್ಧಿ ಬಂತೆಂದ ಸುರೇಶ್ ಕುಮಾರ್
ಈ ವಿಧೇಯಕದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಇದು ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಆಗಿದೆ ಅಥವಾ ಕೆಡಿಸಿದ ಮೇಲೆ ಬುದ್ದಿ ಬಂತು ಎನ್ನಬಹುದು ಎಂದು ವ್ಯಂಗ್ಯ ಮಾಡಿದರು. ನಮ್ಮ ದೇಶದಲ್ಲಿ ಹೆಚ್ಚು ಜನ ಸೇರುವುದು ಸಾಮಾನ್ಯ. ಪುರಿ ಜಗನ್ನಾಥ ಯಾತ್ರೆ ಸಂಧರ್ಭದಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಅಲ್ಲಿ ಅಷ್ಟು ಚೆನ್ನಾಗಿ ವ್ಯವಸ್ಥೆ ಆಗುತ್ತೆ ಅನ್ನೋದಾದರೆ, ಇಲ್ಲಿ ಯಾಕೆ ಆಗಲ್ಲ ಎಂದು ಸುರೇಶ್ ಕುಮಾರ್ ಪ್ರಶ್ನಿಸಿದರು.
ಮುಂಬೈ ತಂಡ ಗೆದ್ದಾಗ ವಿಜಯೋತ್ಸವ ಮಾಡಿದ್ರು. ಆಗಲೂ ಏನೂ ಅವಘಡ ಆಗಿಲ್ಲ. ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸರ್ಕಾರದ ಅವಸರದಿಂದ ಅಯ್ತು. ಈ ಬಿಲ್ ತರದೇ ಎಲ್ಲಾ ಕಂಟ್ರೋಲ್ ಮಾಡಬಹುದಿತ್ತು ಎಂದು ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರಕ್ಕೆ ಆರ್ ಅಶೋಕ್ ಆಗ್ರಹ
ರಾಜಕೀಯ ಸಮಾವೇಶಗಳಿಗೂ ಇದು ಅನ್ವಯ. ಚುನಾವಣೆ ವೇಳೆ ಕಾರ್ಯಕ್ರಮ ಮಾಡ್ತೀವಿ, ಆಗ ಯಾರಿಗೋ ಏನೋ ಆಗಿ ಸತ್ರೆ ಕಾರ್ಯಕ್ರಮ ಆಯೋಜಕರು ಕಾರಣ ಆಗ್ತಾರೆ. ನೀವೂ ಕಾಂಗ್ರೆಸ್ನವರು ಬಳ್ಳಾರಿಯಲ್ಲಿ ಸಾಧನಾ ಸಮಾವೇಶ ಮಾಡಿದ್ದೀರಿ. ಆಗ ಯಾರಿಗಾದ್ರೂ ಏನಾದ್ರೂ ಆಗಿರ್ತಿದ್ರೆ ಯಾರು ಹೊಣೆ ಹೊರಬೇಕು? ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಕಾನೂನು ಮಾಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಂದು ಆಗ್ರಹಿಸಿದರು.
