ಬೆಂಗಳೂರಿನ ಮೂಲಭೂತ ಸೌಕರ್ಯ ಸಮಸ್ಯೆಗಳ ಕುರಿತು ಉದ್ಯಮಿಗಳ ಆಕ್ಷೇಪದ ನಂತರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ದಾಸ್ ಪೈ ಸೇರಿ ಪ್ರಮುಖರೊಂದಿಗೆ ಸಭೆ ನಡೆಸಿದರು. ರಸ್ತೆ ಗುಂಡಿ, ಕಸ ವಿಲೇವಾರಿ, ಮತ್ತು ಸಂಚಾರ ದಟ್ಟಣೆ ನಿವಾರಣೆಗೆ ಕ್ರಿಯಾ ಯೋಜನೆ ರೂಪಿಸಲಾಯಿತು.
ಬೆಂಗಳೂರು (ಅ.26): ಬೆಂಗಳೂರಿನ ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆ ಗುಂಡಿಗಳು ಮತ್ತು ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಸರಣಿ ಪೋಸ್ಟ್ಗಳನ್ನು ಮಾಡಿ ಗಮನ ಸೆಳೆದಿದ್ದ ನಗರದ ಪ್ರಮುಖ ಉದ್ಯಮಿಗಳೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಸಭೆ ನಡೆಸಿದರು.
ನಗರದ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳ ಪರಿಹಾರಕ್ಕೆ ಕ್ರಿಯಾ ಯೋಜನೆ ರೂಪಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಈ ಸಭೆಯನ್ನು ಆಯೋಜಿಸಿದ್ದರು. ಸಭೆಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್ದಾಸ್ ಪೈ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳು ಭಾಗವಹಿಸಿದ್ದರು. ಜಿಬಿಎ (ಗವರ್ನೆನ್ಸ್ ಆಫ್ ಬೆಂಗಳೂರು ಆಕ್ಟ್) ಮುಖ್ಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ಸಭೆಯ ಪ್ರಮುಖ ನಿರ್ಧಾರಗಳು ಮತ್ತು ಸಲಹೆಗಳು:
ಉದ್ಯಮಿಗಳ ಮನೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಮೂಲಸೌಕರ್ಯ, ಔಟರ್ ರಿಂಗ್ ರಸ್ತೆ (ಓಆರ್ಆರ್), ಪೆರಿಫೆರಲ್ ರಿಂಗ್ ರಸ್ತೆ (ಪಿಆರ್ಆರ್) ಸುಸ್ಥಿತಿಯಲ್ಲಿಡುವುದು, ಒಳಚರಂಡಿ, ಸಂಚಾರ ದಟ್ಟಣೆ ಮತ್ತು ಕಸ ವಿಲೇವಾರಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಿಯಾ ಯೋಜನೆ ರೂಪಿಸಲು ಒಪ್ಪಿಗೆ ನೀಡಲಾಯಿತು.
- ಔಟರ್ ರಿಂಗ್ ರಸ್ತೆ ಅಭಿವೃದ್ಧಿ: ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಪ್ರತಿನಿತ್ಯ ಓಡಾಡುವ ಔಟರ್ ರಿಂಗ್ ರಸ್ತೆಯ ಸಮಗ್ರ ಅಭಿವೃದ್ಧಿಗೆ ಡಿಸಿಎಂ ಅವರು ಸೂಚನೆ ನೀಡಿದರು. ಈ ಕಾಮಗಾರಿಗೆ ಸುಮಾರು 500 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ.
- ಗುಂಡಿ ಮುಕ್ತ ರಸ್ತೆ: ರಸ್ತೆಗಳಲ್ಲಿನ ಗುಂಡಿಗಳಿಂದಾಗುತ್ತಿರುವ ಸಮಸ್ಯೆಗಳ ಕುರಿತು ಉದ್ಯಮಿಗಳು ಮನವಿ ಮಾಡಿದ್ದು, ತಕ್ಷಣವೇ ಗುಂಡಿಗಳಿಗೆ ಮುಕ್ತಿ ನೀಡುವಂತೆ ಕ್ರಮ ಕೈಗೊಳ್ಳಲು ಡಿಸಿಎಂ ಸೂಚಿಸಿದರು.
- ಈಜಿಪುರ ಮೇಲ್ಸೇತುವೆ: ನನೆಗುದಿಗೆ ಬಿದ್ದಿರುವ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಉದ್ಯಮಿಗಳು ಸಲಹೆ ನೀಡಿದರು.
- ಮೆಟ್ರೋ ಸೇವೆಯಲ್ಲಿ ಹೆಚ್ಚಳ: ನಗರದ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ರೈಲುಗಳ ಸಂಖ್ಯೆಯನ್ನು ಮತ್ತು ಸಂಚಾರ ಆವರ್ತನವನ್ನು ಹೆಚ್ಚಿಸುವಂತೆ ಮನವಿ ಮಾಡಲಾಯಿತು.
ಉದ್ಯಮಿಗಳಿಂದ ಡಿಸಿಎಂಗೆ ಪ್ರಶಂಸೆ:
ಇನ್ನು ಸಭೆಯ ನಂತರ ಉದ್ಯಮಿಗಳು ಟ್ವೀಟ್ಗಳ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಕ್ರಮವನ್ನು ಶ್ಲಾಘಿಸಿದರು.
ಉದ್ಯಮಿ ಮೋಹನ್ದಾಸ್ ಪೈ ಅವರು ಟ್ವೀಟ್ ಮಾಡಿ: 'ಈ ಅದ್ಭುತ ಉಪಕ್ರಮಕ್ಕಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ನಾಗರಿಕರನ್ನು ಭೇಟಿ ಮಾಡುವುದು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವುದು ಉತ್ತಮ ರಾಜಕೀಯ ನಾಯಕರ ಕೆಲಸ. ನಿಮ್ಮ ಸಂವಾದಗಳು ಮತದಾರರು ಮತ್ತು ಅವರ ಪ್ರತಿನಿಧಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿವೆ. ಜಿಬಿಎ ರಚಿಸುವ ಮೂಲಕ ನೀವು ದಶಕಗಳಲ್ಲಿ ಯಾವುದೇ ಭಾರತೀಯ ನಗರದಲ್ಲಿ ಆಗದ ಅತಿದೊಡ್ಡ ಸುಧಾರಣೆಯನ್ನು ಪೂರ್ಣಗೊಳಿಸಿದ್ದೀರಿ. ಭರವಸೆಯಿಂದ ಭವಿಷ್ಯದತ್ತ ನೋಡುತ್ತಿದ್ದೇವೆ' ಎಂದಿದ್ದಾರೆ.
ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು, 'ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಸ್ತೆಗಳು, ಓಆರ್ಆರ್, ಪಿಆರ್ಆರ್, ಒಳಚರಂಡಿ, ಸಂಚಾರ ಮತ್ತು ಕಸ ವಿಲೇವಾರಿ ಸೇರಿದಂತೆ ಪ್ರಮುಖ ಮೂಲಸೌಕರ್ಯ ಅಡಚಣೆಗಳನ್ನು ಸರಿಪಡಿಸಲು ಕ್ರಿಯಾ ಯೋಜನೆ ರೂಪಿಸಲು ಅತ್ಯಂತ ರಚನಾತ್ಮಕ ಸಭೆ ನಡೆಸಿದೆವು ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ, ಉದ್ಯಮಿಗಳ ಸರಣಿ ಪೋಸ್ಟ್ಗಳ ನಂತರ ಎಚ್ಚೆತ್ತ ಸರ್ಕಾರ, ನಗರದ ಅಭಿವೃದ್ಧಿಗೆ ಪಾರದರ್ಶಕ ಮತ್ತು ಸಹಯೋಗದ ಹೆಜ್ಜೆ ಇಡಲು ಮುಂದಾಗಿದೆ.
