ಯೂಟ್ಯೂಬರ್ ಸಮೀರ್ ಧರ್ಮಸ್ಥಳದ ಬಗ್ಗೆ ಸುಳ್ಳು ವಿಡಿಯೋಗಳನ್ನು ಹರಿಬಿಟ್ಟು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ತೇಜಸ್ ಗೌಡ ಡಿಜಿ-ಐಜಿಪಿಗೆ ದೂರು ನೀಡಿದ್ದಾರೆ. ಧರ್ಮದ್ವೇಷ ಹುಟ್ಟಿಸುವ, ಸಮಾಜದಲ್ಲಿ ಅಶಾಂತಿ ಮೂಡಿಸುವ ಈ ವಿಡಿಯೋಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರು (ಆ.20): ಯೂಟ್ಯೂಬರ್ ಸಮೀರ್ ಎಂಬುವವರು ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಅಪ್ರಾಮಾಣಿಕ ವಿಡಿಯೋಗಳನ್ನು ಪ್ರಸಾರ ಮಾಡುವ ಮೂಲಕ ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಹಿಂದೂಪರ ಹೋರಾಟಗಾರ ತೇಜಸ್ ಗೌಡ ಅವರು ಡಿಜಿ-ಐಜಿಪಿಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ತಿಳಿಸಿರುವಂತೆ, ಯೂಟ್ಯೂಬರ್ ಸಮೀರ್ ಧರ್ಮಸ್ಥಳದ ವಿರುದ್ಧ ಅವಮಾನಕರ ಮತ್ತು ಕೃತಕ ಪ್ರಚಾರ ನಡೆಸಿದ್ದಾರೆ. ಈ ವಿಡಿಯೋಗಳು ಧರ್ಮ ಮತ್ತು ಧರ್ಮಗಳ ನಡುವೆ ದ್ವೇಷವನ್ನು ಬಿತ್ತುವ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿವೆ. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವುದರಿಂದ ಕೇವಲ ಧಾರ್ಮಿಕ ಕೇಂದ್ರಕ್ಕೆ ಮಾತ್ರವಲ್ಲದೆ, ಅಲ್ಲಿನ ಲಕ್ಷಾಂತರ ಭಕ್ತರ ನಂಬಿಕೆಗೂ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ತೇಜಸ್ ಗೌಡ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮೀರ್ನನ್ನು ತಕ್ಷಣವೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ನಡೆಯುತ್ತಿರುವುದು ಹೆಚ್ಚಾಗಿದ್ದು, ಈ ರೀತಿಯ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮಗಳು ಅಗತ್ಯವೆಂದು ಅವರು ಒತ್ತಿ ಹೇಳಿದ್ದಾರೆ. ದೂರು ಸ್ವೀಕರಿಸಿದ ಪೊಲೀಸ್ ಇಲಾಖೆ, ಈ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಪತ್ರದಲ್ಲಿ ಉಲ್ಲೇಖಿಸಿರುವ ಪ್ರಮುಖ ಸೆಕ್ಷನ್ಗಳು:
- ಭಾರತೀಯ ನ್ಯಾಯ ಸಂಹಿತೆ 2023
- ಸುಳ್ಳು ಮಾಹಿತಿ ನೀಡುವುದು - ಸೆಕ್ಷನ್ 192
- ಧರ್ಮ ಹಾಗೂ ಭಾಷೆಗಳ ನಡುವೆ ದ್ವೇಷ ಬಿತ್ತುವುದು - ಸೆಕ್ಷನ್ 194
- ಮೋಸ ಮತ್ತಿ ತಪ್ಪು ವಿಷಯಗಳ ಪ್ರಸಾರ - ಸೆಕ್ಷನ್ 240
- ಧಾರ್ಮಿಕ ಭಾವನೆಗಳಿಗೆ ಅವಮಾನ - ಸೆಕ್ಷನ್ 298
- ದ್ವೇಷ ಹುಟ್ಟಿಸುವ ಸುಳ್ಳು ಪ್ರಕಟಣೆ - ಸೆಕ್ಷನ್ 353(1/ಬಿ)
- ಮಾನಹಾನಿ - ಸೆಕ್ಷನ್ 356
- ಅಪರಾಧ ಮಾಡಲು ಷಡ್ಯಂತ್ರ - ಸೆಕ್ಷನ್ 61
- ಮೋಸದಿಂದ ಮಾಹಿತಿ ಪ್ರಸಾರ - ಸೆಕ್ಷನ್ 66ಡಿ
- ಸಾರ್ವಜನಿಕ ಶಾಂತಿಗೆ ಹಾನಿ ಮಾಡುವ ವಿಷಯ ತಡೆಯುವ ಅಧಿಕಾರ - ಸೆಕ್ಷನ್ 66ಎ
ಸಮೀರ್ ಎಂ.ಡಿ. ವಿರುದ್ಧ ಎಫ್ಐಆರ್ ದಾಖಲಿಸಿ ಸಮಾಜದಲ್ಲಿ ದ್ವೇಷ, ಅಶಾಂತಿ ಮತ್ತು ಅಶ್ರದ್ಧೆ ಉಂಟುಮಾಡುವ ಅವನ ಕೃತ್ಯಗಳಿಗೆ ತಕ್ಕ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
