ಧರ್ಮಸ್ಥಳ ಗ್ರಾಮ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿ ಮಧ್ಯಂತರ ವರದಿ ನೀಡಬೇಕೆಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಒತ್ತಾಯಿಸಿದ್ದಾರೆ. 

ಮೈಸೂರು (ಆ.16): ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್‌ಐಟಿ, ಮಧ್ಯಂತರ ವರದಿ ನೀಡಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಒತ್ತಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ಧರ್ಮದ ಮೇಲೆ ಅಪಪ್ರಚಾರ ಆದಾಗ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿದೆ. ಆದರೆ, ಹಿಂದೂ ಧರ್ಮದ ಮೇಲೆ ಅಪಪ್ರಚಾರ ಆದಾಗ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡಿರುವುದು ಗೊತ್ತಾಗುತ್ತಿದೆ. ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ನಮ್ಮ ಮನಸ್ಸಿಗೆ ನೋವುಂಟು ಮಾಡಿದೆ. 

ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಉಹಾಪೋಹಗಳಿಗೆ ತೆರೆ ಬೀಳಬೇಕಾದರೆ ಎಸ್ಐಟಿ ಮಧ್ಯಂತರ ವರದಿ ನೀಡಬೇಕು ಎಂದು ಹೇಳಿದರು.

ಜೈನ ಧರ್ಮ ನಿಂದಿಸಿದ್ದಕ್ಕೆ ಮಟ್ಟೆಣ್ಣವರ ವಿರುದ್ಧ ಕೇಸ್‌

ಧಾರವಾಡ: ಜೈನ್‌ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಗಿರೀಶ್‌ ಮಟ್ಟೆಣ್ಣವರ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಮುಗದ ಗ್ರಾಮದ ಜೈನ್‌ ಮುಖಂಡ ಮಂಜುನಾಥ ಜಕ್ಕಣ್ಣವರ ದೂರು ದಾಖಲಿಸಿದ್ದು, ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಮಟ್ಟೆಣ್ಣವರ, ಜೈನ್ ಧರ್ಮೀಯರ ಭಾವನೆಗಳಿಗೆ ಅವಮಾನ ಮಾಡುವ ಉದ್ದೇಶದಿಂದ ಯೂಟ್ಯೂಬ್‌ ಚಾನಲ್‌ವೊಂದರಲ್ಲಿ ಜೈನರು ಕ್ರೂರಿಗಳು, ದಬ್ಬಾಳಿಕೆ ಮಾಡುವವರು ಎಂದೆಲ್ಲ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಗಿರೀಶ ಮಟ್ಟೆಣ್ಣವರ, ಪ್ರಸಾರ ಮಾಡಿದ ಯೂಟ್ಯೂಬ್‌ ಚಾನಲ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮೀಣ ಪೊಲೀಸರು ಮಟ್ಟೆಣ್ಣವರ ಅವರನ್ನು ಎ1 ಮಾಡಿದ್ದು, ಪ್ರಸಾರ ಮಾಡಿದ ಯೂಟ್ಯೂಬ್‌ ಚಾನಲ್‌ನ್ನು ಎ2 ಮಾಡಿದ್ದಾರೆ.