ಧರ್ಮಸ್ಥಳ ಪ್ರಕರಣದಲ್ಲಿ ಸತತವಾಗಿ ಕೇಳಿ ಬಂದ ಆರೋಪ, ದೂರುಗಳ ಮುಖವಾಡ ಕಳಚುತ್ತಿದೆ. ಇತ್ತ ಎಸ್ಐಟಿ ಉತ್ಖನನ ಸ್ಥಗಿತಗೊಳಿಸಿದ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಅನನ್ಯಾ ಭಟ್ ಪ್ರಕರಣ ಎಸ್ಐಟಿಗೆ ವರ್ಗಾವಣೆ ಗೊಳಿಸಿ ಡಿಜಿಪಿ ಆದೇಶ ನೀಡಿದ್ದಾರೆ.
ಧರ್ಮಸ್ಥಳ (ಆ.20) ಧರ್ಮಸ್ಥಳ ಪ್ರಕರಣ ದೇಶಾದ್ಯಂದ ಸದ್ದು ಮಾಡುತ್ತಿದೆ. ಹಲವು ಆರೋಪ, ದೂರುಗಳ ಅಸಲಿಯತ್ತು ಒಂದೊಂದಾಗಿ ಕಳಚುತ್ತಿದೆ. 16ಕ್ಕೂ ಹೆಚ್ಚು ಕಡೆ ಅಗೆದರೂ ಕಳೇಬರ ಸಿಗುತ್ತಿಲ್ಲ. ಹೀಗಾಗಿ ಎಸ್ಐಟಿ ಉತ್ಖನನ ಕಾರ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇತ್ತ ಬುರುಡೆ ಪ್ರಕರಣದ ತನಿಖೆ, ವಿಚಾರಣೆಗಳು ತೀವ್ರಗೊಳ್ಳುತ್ತಿದ್ದಂತೆ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದ್ದ ಅನನ್ಯಾ ಭಟ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಾಯಿ ಸುಜಾತ್ ಭಟ್ ಆರೋಪ ಹಾಗೂ ದೂರು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಅನನ್ಯಾ ಭಟ್ ಪ್ರಕರಣವನ್ನು ಎಸ್ಐಟಿ (ವಿಶೇಷ ತನಿಖಾ ತಂಡ)ಗೆ ವರ್ಗಾವಣೆ ಮಾಡಿ ಡಿಜಿಪಿ ಆದೇಶ ನೀಡಿದ್ದಾರೆ.
ಎಸಐಟಿ ಕೈಸೇರಿತು ಅನನ್ಯಾ ಭಟ್ ಪ್ರಕರಣ
ಅನನ್ಯಾ ಭಟ್ ಹೆಸರಿನ ಎಂಬಿಬಿಎಸ್ ವಿದ್ಯಾರ್ಥಿನಿ 2003ರಲ್ಲಿ ಧರ್ಮಸ್ಥಳ ಆವರಣದಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಅಂದು ದೂರು ದಾಖಲಿಸಲು ಪೊಲೀಸರು ಹಿಂದೇ ಹಾಕಿದ್ದರು. ಧರ್ಮಸ್ಥಳಧ ದೇವಸ್ಥಾನದ ಸಿಬ್ಬಂದಿಗಳು ಈಕೆಯನ್ನು ಅಪಹರಿಸಿದ್ದರು ಎಂದು ತಾಯಿ ಸುಜಾತ್ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಏಷ್ಯಾನೆಟ್ ಸುವರ್ಣನ್ಯೂಸ್ ಸುಜಾತ್ ಭಟ್ ದೂರು ಹಾಗೂ ಅನನ್ಯಾ ಭಟ್ ಪ್ರಕರಣದ ಕುರಿತು ಹಲವು ಸ್ಫೋಟಕ ವರದಿ ಪ್ರಕಟಿಸಿದೆ. ಅನನ್ಯಾ ಭಟ್ ನಾಪತ್ತೆ ಪ್ರಕರಣ, ಸುಜಾತ್ ಭಟ್ ಹೇಳುತ್ತಿರುವ ಹೇಳಿಕೆ, ತೋರಿಸಿದ ಮಗಳ ಫೋಟೋದ ಅಸಲಿಯತ್ತು ಏಷ್ಯಾನೆಟ್ ಸುವರ್ಣನ್ಯೂಸ್ ಬಹಿರಂಗಪಡಿಸಿದೆ. ಇದರ ಬೆನ್ನಲ್ಲೇ ಡಿಜಿಪಿ ಇದೀಗ ಮಹತ್ವದ ಆದೇಶ ಮಾಡಿತ್ತು. ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಸದ್ಯ ಧರ್ಮಸ್ಥಳದಲ್ಲಿ ಬುರುಡೆ ತನಿಖೆ ಮಾಡುತ್ತಿರುವ ಎಸ್ಐಟಿಗೆ ವರ್ಗಾಯಿಸಿದೆ.
ಶೀಘ್ರದಲ್ಲೇ ಸುಜಾತ್ ಭಟ್ ವಿಚಾರಣೆ ಸಾಧ್ಯತೆ
ಎಸ್ಐಟಿ ತನಿಖಾ ತಂಡ ಇದೀಗ ಸುಜಾತ್ ಭಟ್ ಕರೆಯಿಸಿ ವಿಚಾರಣೆ ನಡೆಸಲಿದೆ. ಅನನ್ಯಾ ಭಟ್ ಕುರಿತು ಮಾಹಿತಿಗಳನ್ನು ಕಲೆಹಾಕಲಿದೆ. ಈ ಮೂಲಕ ಅನನ್ಯಾ ಭಟ್ ನಾಪತ್ತೆ ಪ್ರಕರಣ, ಸುಜಾತ್ ಭಟ್ ಆರೋಪಗಳ ಅಸಲಿಯತ್ತು ಹೊರಬರಲಿದೆ.
ಸುಜಾತ್ ಭಟ್ ಆರೋಪವೇನು?
ಮಣಿಪಾಲ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದ ಅನನ್ಯಾ ಭಾಟ್ 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಗೆಳತಿಯರೊಂದಿಗೆ ಭೇಟಿ ನೀಡಿದ್ದರು. ಆದರೆ ದೇವಸ್ಥಾನಕ್ಕೆ ತೆರಳಿದ ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ. ಈ ವೇಳೆ ತಾನು ಕೋಲ್ಕತಾದಲ್ಲಿ ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿದ್ದೆ. ಮಗಳು ನಾಪತ್ತೆಯಾಗಿರುವ ಮಾಹಿತಿ ತಿಳಿದು ಧರ್ಮಸ್ಥಳಕ್ಕೆ ಬಂದು ಹುಡುಕಾಟ ಮಾಡುವ ಪ್ರಯತ್ನ ಮಾಡಿದ್ದೇನೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಅವರ ತಮ್ಮ ಹರ್ಷೇಂದ್ರ ಕುಮಾರ್ ಜೈನ್ ಬಳಿ ಮಗಳ ನಾಪತ್ತೆ ವಿಚಾರ ಪ್ರಸ್ತಾಪಿಸಿದಾಗ ನಿರ್ಲಕ್ಷ್ಯ ಮಾಡಿದ್ದಾರೆ. ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಪ್ರಯತ್ನಕ್ಕೂ ಹಿನ್ನಡೆಯಾಗಿತ್ತು ಎಂದು ಸುಜಾತ್ ಭಟ್ ದೂರಿನಲ್ಲಿ ಹೇಳಿದ್ದಾರೆ. ಧರ್ಮಸ್ಥಳ ಸಿಬ್ಬಂದಿ ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನನ್ನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಸುಜಾತ್ ಭಟ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
