ವೇಗವಾಗಿ ಸಾಗುತ್ತದ್ದ ಕಾರು ಮರಕ್ಕೆ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭಿವಿಸಿದೆ. ಈ ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಒರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಂಗಳೂರು (ಆ.10) ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕ ಡಿಕ್ಕಿಯಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಹಟ್ಟಿ ಗ್ರಾಮದಲ್ಲಿ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ಡಾ ವೀರಯ್ಯ ಹಿರೇಮಠ, ಪಿಐ ಗಜಾನನ ನಾಯ್ಕ್ ಭೇಟಿ ನೀಡಿದ್ದಾರೆ.

ಮೂವರು ಪ್ರಯಾಣಿಸುತ್ತಿದ್ದ ಕಾರು

ಮೂವರು ಕಾರಿನ ಮೂಲಕ ಯರಗಟ್ಟಿ ಕಡೆಯಿಂದ ಬೆಳಗಾವಿ ಕಡೆಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಕಾರು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಅಘಾತದ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದೆ. ಮೃತರನ್ನು ಕರೀಕಟ್ಟಿ ಗ್ರಾಮದ ಸಚಿನ್ ಬೋರಿಮರದ, ಬಾಲಕೃಷ್ಣ ಸುಲದಾಳ ಎಂದು ಗುರುತಿಸಲಾಗಿದೆ. ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಲಬುರಗಿ ರಸ್ತೆ ಅಪಘಾತದಲ್ಲಿ ತಂದೆ ಮಗ ಸ್ಥಳದಲ್ಲೇ ಸಾವು

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರಕೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಬಾಗಲಕೋಟೆಯ ಬೀಳಗಿ ನಿವಾಸಿಗಳಾದ ತಂದೆ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ತಂದೆ ಸೋಮಶೇಖರ ಹಾಗೂ ಮಗ ಪ್ರಕಾಶ್ ಎಂದು ಗುರುತಿಸಲಾಗಿದೆ. ತಂದೆ ಹಾಗೂ ಮಗ ಕಲಬುರಗಿಯಿಂದ ಬೀಳಗಿ ಕಡೆ ತೆರಳುತ್ತಿದ್ದಾಗ ಎದುರಿನಿಂದ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿ ಒಟ್ಟು ಮೂವರು ಪ್ರಯಾಣಿಸುತ್ತಿದ್ದರು. ಮೃತ ಸೋಮೇಶೇಖರ್ ಪತ್ನಿಗೂ ಗಂಭೀರ ಗಾಯವಾಗಿದ್ದು, ಕಲಬುರಗಿ ಆಸ್ಪತ್ರಗೆ ದಾಖಲಿಸಲಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಅಪಘಾತ

ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಚಿಕ್ಕಮಗಳು-ದಕ್ಷಿಣ ಕನ್ನಡದ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ನಾಲ್ವರಿಗೂ ಗಾಯಗಳಾಗಿದ್ದು, ಬಣಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾರ್ಮಾಡಿ ಘಾಟ್ ನ ಬಿದುರುತಳದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಚಾರ್ಮಿಡಿ ಘಾಚಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಸ್ಥಳಕ್ಕೆ ಬಣಕಲ್ ಪೋಲೀಸರು ಭೇಟಿ ನೀಡಿದ್ದಾರೆ.