Apoorva K Bhat Death: ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಅಪೂರ್ವ ಕೆ ಭಟ್ ಅವರು ನಿಧನರಾಗಿದ್ದಾರೆ. 134 ದಿನಗಳಿಂದ ನಡೆದ ಅಪಘಾತ ಇದಾಗಿತ್ತು. ಇಷ್ಟು ದಿನಗಳಿಂದ ಆಸ್ಪತ್ರೆ ಬೆಡ್ ಮೇಲೆ ಕಾಲ ಕಳೆದಿದ್ದ ಅಪೂರ್ವ ಕೊನೆಗೂ ಹೋರಾಡಿ ಸೋತರು.
ಕಳೆದ ಮೇ 27 ರಂದು ನಡೆದ ಮಂಗಳೂರು ಬಳಿ ನಡೆದ ಬಸ್ ಅಪಘಾತದಲ್ಲಿ 32 ವರ್ಷದ ಅಪೂರ್ವ ಕೆ ಭಟ್ ಹಾಗೂ ಅವರ ಪುಟ್ಟ ಮಗಳು, ಮಾವ ಗಾಯಗೊಂಡಿದ್ದರು. ಮಗಳು, ಮಾವ ಆರೋಗ್ಯವಾಗಿದ್ದರೆ, ಅಪೂರ್ವ ಮಾತ್ರ 134 ದಿನಗಳಿಂದ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದರು. ನಾಲ್ಕು ತಿಂಗಳಿಗೂ ಅಧಿಕ ಕಾಲದಿಂದ ಪತ್ನಿ ಹುಷಾರಾಗಲಿ, ಮನೆಗೆ ಬರಲಿ, ಮಗಳಿಗೆ ತಾಯಿ ಪ್ರೀತಿ ಸಿಗಲಿ ಎಂದು ಆಶಿಶ್ ಸರಡ್ಕ ಅವರು ಪ್ರಾರ್ಥಿಸುತ್ತಿದ್ದರು. ಈಗ ಅಪೂರ್ವ ನೆನಪು ಮಾತ್ರ.
ಇಂದು ಕೊನೆಯುಸಿರು ಬಿಟ್ಟ ಅಪೂರ್ವ
ಆಶಿಶ್ ಸರಡ್ಕ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು, “134 ದಿನಗಳ ಪ್ರಯಾಣ ಇಂದು ಸಾಯಂಕಾಲ 6 ಗಂಟೆಗೆ ಮುಗಿಯಿತು.. ಅಪೂರ್ವ ಈಗ ನಮ್ಮೊಂದಿಗೆ ಇಲ್ಲ! ಆಕೆ ಇನ್ನು ನೆನಪು ಮಾತ್ರ. ಪ್ರಾರ್ಥಿಸಿದ ಎಲ್ಲರಿಗೂ ನಾನು ಚಿರಋಣಿ!” ಎಂದಿದ್ದಾರೆ.
ಸಾವಿರಾರು ಜನರ ಪ್ರಾರ್ಥನೆ
ಬೆಂಗಳೂರಿನಲ್ಲಿ ಆಶಿಶ್ ಹಾಗೂ ಅಪೂರ್ವ ಕೆಲಸ ಮಾಡುತ್ತಿದ್ದರು. ಇವರ ಊರು ಮಂಗಳೂರು. ಈ ಜೋಡಿಗೆ ಮುದ್ದಾದ ಮಗಳಿದ್ದಾಳೆ. ಬಸ್ ಅಪಘಾತದಿಂದ ಇವರ ಜೀವನವೇ ಬದಲಾಯ್ತು. ಕಳೆದ ನಾಲ್ಕು ತಿಂಗಳಿನಿಂದ ಅಪೂರ್ವ ಆಸ್ಪತ್ರೆ ಬೆಡ್ಮೇಲಿದ್ದರು. ಪತ್ನಿ ಹುಷಾರಾಗಲಿ ಎಂದು ಆಶಿಶ್ ಅವರು ಸೋಶಿಯಲ್ ಮೀಡಿಯಾದಲ್ಲಿ “ತಾಯಿ ಪ್ರೀತಿಗೋಸ್ಕರ ಹಂಬಲಿಸುತ್ತಿರುವ ಮಗಳಿಗಾಗಿ ಪ್ರಾರ್ಥಿಸಿ” ಎಂದು ನಿತ್ಯ ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಅದನ್ನು ನೋಡಿ ಅನೇಕರು ವಿಧ ವಿಧವಾಗಿ ಪ್ರಾರ್ಥಿಸಿದ್ದಾರೆ, ಸ್ವಲ್ಪವೂ ಧೃತಿಗೆಡದೆ ಆಶಿಶ್ ಅವರು ಪತ್ನಿ ಈ ಹೋರಾಟದಲ್ಲಿ ಗೆದ್ದು ಬರ್ತಾಳೆ ಎಂದುಕೊಂಡು ಪ್ರಯತ್ನಪಟ್ಟಿದ್ದರು. ಬೆಂಗಳೂರಿನಿಂದ ಮಂಗಳೂರಿಗೆ ಮನೆ ಶಿಫ್ಟ್ ಮಾಡಿದ್ದರು. ಆದರೆ ಯಾವ ಪ್ರಾರ್ಥನೆಯೂ ಫಲಿಸಲೇ ಇಲ್ಲ.
ಆಶಿಶ್ ಸರಡ್ಕ ಅವರು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೇನು?
ಈ 130+ ದಿನಗಳಲ್ಲಿ ಅಪೂರ್ವ ಎಷ್ಟೋ ಜನರ ಮನೆಯ ಮಗಳಾಗಿ, ಅಕ್ಕ , ತಂಗಿಯಾಗಿ ಬಿಟ್ಟಿದ್ದಾಳೆ.... ಎಷ್ಟೋ ಕಾಣದ ಕೈಗಳ ಪ್ರಾರ್ಥನೆ ಆಕೆಯ ಒಳಿತಿಗಾಗಿ ಆಗ್ತಾ ಇದೆ.. ಆಕೆಗೆ ಈ ಪ್ರೀತಿ ಅರಿವಾಗುವ ದಿನ ಬರಲಿ ಅಂತಷ್ಟೇ ಆಸೆ
Irony ಅಂತಾರಲ್ಲ.. ಹಾಗೆ ಕೆಲವೊಂದು ವಿಚಾರಗಳು ನಡೆದಾಗ ಯಾಕೆ ಹೀಗೆ ಅನ್ನೋದು ಅರ್ಥ ಆಗಲ್ಲ..
ಅಪೂರ್ವ ಕಳೆದ 129 ದಿನಗಳಲ್ಲಿ ತುಂಬಾ ಹೋರಾಟ ಮಾಡಿದ್ದಾಳೆ... ಇಲ್ಲಿಂದ ಮೇಲೆ ಬರೋಕೆ ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿಯನ್ನು ಮೀರಿ ಬಂದಿದ್ಲು.. ನವರಾತ್ರಿ ಶುರುವಾದಾಗ ಆಕೆಯೂ ಚೇತರಿಸಿಕೊಳ್ಳುತ್ತಾ ಇದ್ದಳು..
ಆದರೆ ವಿಪರ್ಯಾಸ ನೋಡಿ, ನಿನ್ನೆ ಮಹಾನವಮಿಯ ದಿನ ಅವಳು ಮತ್ತೆ ICU ಕದ ತಟ್ಟಿದ್ದಾಳೆ.. ಒಂದೆರಡು ದಿನದಲ್ಲಿಯೇ ನಮ್ಮ ಮುಖದಲ್ಲಿದ್ದ ಸಣ್ಣ ನಗು ಮಾಯವಾಗಿ ಆತಂಕ, ಹೆದರಿಕೆ ಮತ್ತೆ ಮೈ ಏರಿ ಕುಳಿತಿದೆ..
ತಾಯಿ ಕಾಯಬೇಕು...ಆಕೆ ಕಾಯ್ತಾಳೆ ಅನ್ನುವ ನಂಬಿಕೆಯಲ್ಲಿ ನಾನು ಈಗ ದಿನಕಳೆಯುತ್ತಾ ಇದ್ದೇನೆ.
ತಿಂಗಳ ಲೆಕ್ಕದಲ್ಲಿ ಇವತ್ತಿಗೆ ನಾಲ್ಕು ತಿಂಗಳು ಒಂದು ದಿನ.. ದಿನಗಳ ಲೆಕ್ಕದಲ್ಲಿ 125ನೇ ದಿನ.. ವರ್ಷದ ಮೂರನೇ ಒಂದು ಭಾಗ ಆಸ್ಪತ್ರೆಯಲ್ಲಿ ಕಳೆದಿದ್ದೇವೆ.. ಕೆಲವೊಮ್ಮೆ ಆಶ್ಚರ್ಯ ಆಗುತ್ತೆ.. ಇಷ್ಟು ದಿನ ಹಲ್ಲುಕಚ್ಚಿ ಕಾದು ಕೂರುವ ಶಕ್ತಿ ಕೊಟ್ಟದ್ದು ಯಾರು ಅಂತಾ! ಆದರೆ ಒಂದು ಕಡೆ ಕಾದದಕ್ಕೆ ದೂರದಲ್ಲೆಲ್ಲೋ ಒಂದು ಸಣ್ಣ ಬೆಳಕಿನ ಕಿರಣ ಇದೆ ಅನ್ನುವ ಆಶಾವಾದವೂ ಇದೆ..
