ಎಲೆಕ್ಟ್ರಾನಿಕ್ ಸಿಟಿ ಅಲ್ಲಾವುದ್ದೀನ್ ಮ್ಯಾಜಿಕ್‌ಗೆ ಬೆಂಗಳೂರು ತುಂಬಾ ಬಾಂಗ್ಲಾದೇಶಿಗಳು, ಕೋರ್ಟ್ ಗರಂ, ನಮ್ಮ ಅಣ್ಣ, ನಮ್ಮ ಅಕ್ಕ, ಚಿಕ್ಕಪ್ಪನ ಮಗ, ಎಂದು 400 ಮಂದಿಯನ್ನು ಬಾಂಗ್ಲಾದೇಶದಿಂದ ಅಕ್ರಮವಾಗಿ ಬೆಂಗಳೂರಿಗೆ ಕರೆತಂದು ಇಲ್ಲೇ ಕೆಲಸ ಕೊಡಿಸಿ ಮದುವೆಯಾಗಿ ಸೆಟ್ಲ್ ಆಗುವಂತೆ ಮಾಡಿದ್ದಾನೆ.

ಬೆಂಗಳೂರು (ನ.02) ಬಾಂಗ್ಲಾದೇಶಿಗಳು ಅಕ್ರಮವಾಗಿ ಭಾರತದ ಎಲ್ಲಾ ನಗರ, ಪಟ್ಟಣ, ಗ್ರಾಮ, ಊರುಗಳಲ್ಲಿ ನೆಲೆಸಿದ್ದಾರೆ. ಕೇಳಿದರೆ ನಾವು ಪಶ್ಚಿಮ ಬಂಗಾಳದಿಂದ, ಅಸ್ಸಾಂನಿಂದ ಬಂದಿದ್ದೇವೆ ಎಂದು ಕೆಲಸಕ್ಕೆ ಸೇರಿಬಿಡುತ್ತಾರೆ. ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಾರೆ. ಹೀಗೆ ಬಂದವರು ಹಲವರು ಇಲ್ಲೇ ಅಕ್ರಮವಾಗಿ ಸೆಟ್ಲ್ ಆಗಿದ್ದಾರೆ. ಆಧಾರ್ ಕಾರ್ಡ್, ವೋಟರ್ ಐಡಿ ಎಲ್ಲವನ್ನೂ ಮಾಡಿಸಿಕೊಂಡಿದ್ದಾರೆ. ಹೀಗೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಬೆಂಗಳೂರಿಗೆ 400ಕ್ಕೂ ಹೆಚ್ಚು ಮಂದಿಯನ್ನು ಕರೆತಂದು ಇಲ್ಲಿ ಬೇರೆ ಬೇರೆ ಕಡೆ ಸೆಟ್ಲ್ ಆಗೋ ರೀತಿ ಮಾಡಿದ ಎಲೆಕ್ಟ್ರಾನಿಕಿ ಸಿಟಿ ನಿವಾಸಿ ಅಲ್ಲಾವುದ್ದೀನ್‌ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

Add Asianetnews Kannada as a Preferred SourcegooglePreferred

ಅಲ್ಲಾವುದ್ದೀನ್ ಮ್ಯಾಜಿಕ್, ಊರು ತುಂಬಾ ಬಾಂಗ್ಲಾದೇಶಿಗಳು

ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಯಾಗಿರುವ ಅಲ್ಲಾವುದ್ದೀನ್ ಬಾಂಗ್ಲಾದೇಶದಿಂದ 400ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿ ಬೆಂಗಳೂರಿಗೆ ಕರೆತಂದಿದ್ದಾನೆ. ಹೀಗೆ ಅಕ್ರಮವಾಗಿ ಬಂದ ಬಾಂಗ್ಲಾದೇಶಿ ಪ್ರಜೆಗಳಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸಿದ್ದಾನೆ. ಹಲವರು ಮದುವೆಯಾಗಿ ಇಲ್ಲೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಕೆಲವರು ಕೊಲೆ, ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ವಿಶೇಷ ಅಂದರೆ ಈ ಅಲ್ಲಾವುದ್ದೀನ್ ಭಾರತೀಯನಲ್ಲ. ಈತ ಕೂಡ ಬಾಂಗ್ಲಾದೇಶದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದು ರೇಶನ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದಾನೆ. ಈತ ಬಂದಿದ್ದು ಮಾತ್ರವಲ್ಲ 400ಕ್ಕೂ ಹೆಚ್ಚು ಬಾಂಗ್ಲಾದೇಶಿಗಳನ್ನು ಅಕ್ರಮವಾಗಿ ಕರೆ ತಂದ ಈ ಅಲ್ಲಾವುದ್ದೀನ್‌ಗೆ ಕೋರ್ಟ್ ಜಾಮೀನು ನಿರಾಕರಿಸಿದೆ. ಅತ್ಯಂತ ಗಂಭೀರ ಪ್ರಕರಣ ಎಂದು ಕೋರ್ಟ್ ಪರಿಗಣಿಸಿದೆ. ದೇಶದ ಸುರಕ್ಷತಾ ವಿಚಾರದ ಕಾರಣ ಅಡಿಷನಲ್ ಸಿಟಿ ಸಿವಿಲ್ ಹಾಗೂ ಸೆಶನ್ ಕೋರ್ಟ್ ಜಡ್ಜ್ ಶಿರಿನ್ ಜಾವೆದ್ ಅನ್ಸಾರಿ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ.

ಸೆಕ್ಷನ್ 14ರ ಅಡಿಯಲ್ಲಿ ಇದು ಜಾಮೀನು ರಹಿತ ಪ್ರಕರಣವಾಗಿದೆ. ಅರ್ಜಿದಾರನಿಗೆ ಜಾಮೀನು ನೀಡುವುದು ರಾಜ್ಯದ ಸುರಕ್ಷತೆಯನ್ನೇ ಪ್ರಶ್ನಿಸಿದಂತಾಗುತ್ತದೆ. ದೇಶದ ಭದ್ರತೆಗೆ ಸವಾಲಾಗಿರುವ ಈ ಪ್ರಕರಣದಲ್ಲಿ ಅರ್ಜಿದಾರನಿಗೆ ಯಾವುದೇ ಕಾರಣಕ್ಕೂ ಬೇಲ್ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಬಾಂಗ್ಲಾದೇಶದಲ್ಲಿ ಅಲ್ಲಾದಿನ್ ಹೊವ್ಲಾಧರ್, ಭಾರತದಲ್ಲಿ ಅಲ್ಲಾವುದ್ದೀನ್ ಲತೀಫ್

ಈ ಅಲ್ಲಾವುದ್ದೀನ್ ಮೂಲ ಬಾಂಗ್ಲಾದೇಶ. ಈತ ಹಲವು ವರ್ಷಗಳಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿದ್ದಾನೆ. ಈತನ ಬಳಿಕ ಎರಡು ಗುರುತಿನ ಚೀಟಿ ಇದೆ. ಬಾಂಗ್ಲಾದೇಶ ನೀಡಿರುವ ಗುರುತಿನ ಚೀಟಿಯಲ್ಲಿ ಅಲ್ಲಾದಿನ್ ಹೊವ್ಲಾಧರ್ ಎಂದು ಹೆಸರಿದ್ದರೆ, ಭಾರತದಲ್ಲಿನ ಗುರುತಿನ ಚೀಟಿಯಲ್ಲಿ ಅಲ್ಲಾವುದ್ದೀನ್ ಬಿನ್ ಅಬ್ದುಲ್ ಲತೀಫ್. ಬೆಂಗಳೂರು ನಿವಾಸಿಯಾಗಿ ಬದಲಾಗಿರುವ ಈತ, ಈಗಾಗಲೇ 400ಕ್ಕೂ ಹೆಚ್ಚು ಬಾಂಗ್ಲಾದೇಶಿಯರನ್ನು ಕರೆತಂದು ಇಲ್ಲಿ ಅವರಿಗೆ ಎಲ್ಲಾ ಸೌಲಭ್ಯ ಕಲ್ಪಿಸಿ ಕೆಲಸ ಕೊಡಿಸಿದ್ದಾನೆ. ಅಕ್ರಮ ಚಟುವಟಿಕೆಗಳಿಗೂ ಹಣ ಒದಗಿಸುತ್ತಿದ್ದಾನೆ. ಅಕ್ರಮವಾಗಿ ಬರುವ ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಇತರ ನಕಲಿ ದಾಖಲೆಗೆ ಈತ ಆರ್ಥಿಕ ನೆರವು ನೀಡುತ್ತಿದ್ದಾನೆ. 2019ರಲ್ಲ ಈತ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಬೇಲ್ ಪಡೆದ ಈತನ ಬೆಂಗಳೂರಿನ ನಿವಾಸಿಯಾಗಿದ್ದ.

ಬೆಂಗಳೂರಿನಲ್ಲಿ ಲಕ್ಷಕ್ಕೂ ಅಧಿಕ ಮಂದಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳಿದ್ದಾರೆ ಎಂಬ ವರದಿಗಳಿವೆ. ಈ ಪ್ರಕರಣ ಅಕ್ರಮ ಬಾಂಗ್ಲಾದೇಶಿಗಳಿಗೆ ಹಿಡಿದ ಕನ್ನಡಿಯಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇವರು ಅಕ್ರಮವಾಗಿ ನೆಲೆಸಿದ್ದಾರೆ. ಅಸ್ಸಾಂ ಸೇರಿದಂತೆ ಕೆಲ ರಾಜ್ಯಗಳು ಅಕ್ರಮ ಬಾಂಗ್ಲಾದೇಶಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.