ಪ್ರಸ್ತುತ ಭಾರತದಲ್ಲಿ 18,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿದ್ದು, ಅವುಗಳಲ್ಲಿ 1,000 ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದವು. ಇದರಲ್ಲಿ 250 ಕರ್ನಾಟಕದಲ್ಲೇ ನೆಲೆಗೊಂಡಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಉಳ್ಳಾಲ (ಸೆ.25): ಪ್ರಸ್ತುತ ಭಾರತದಲ್ಲಿ 18,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿದ್ದು, ಅವುಗಳಲ್ಲಿ 1,000 ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದವು. ಇದರಲ್ಲಿ 250 ಕರ್ನಾಟಕದಲ್ಲೇ ನೆಲೆಗೊಂಡಿವೆ. ಇದು ರಾಜ್ಯದ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಇರುವ ಉದ್ಯಮಶೀಲತೆಯ ಹಸಿವು ಸ್ಪಷ್ಟಪಡಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆ ಪಾನೀರ್ ನಲ್ಲಿರುವ ನಿಟ್ಟೆ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಕ್ವಮರೀನ್ ಇನ್ನೋವೇಶನ್‍ನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಟ್ಟೆ ಕಳೆದ ಎರಡು ದಶಕಗಳಲ್ಲಿ ಸಾಧಿಸಿರುವುದು ನಿಜಕ್ಕೂ ಅಪೂರ್ವ. ಭಾರತದಲ್ಲಿ ಮೊದಲ ಬಾರಿಗೆ ಆಕ್ವಾಮೆರೈನ್ ಅತ್ಯುನ್ನತ ಕೇಂದ್ರವನ್ನು ಸ್ಥಾಪಿಸಿರುವುದು ನಿಟ್ಟೆಗೆ ಮಾತ್ರವಲ್ಲ, ಕರ್ನಾಟಕದ ಬೆಳವಣಿಗೆಯ ಹಾದಿಯಲ್ಲಿಯೂ ಬಹುಮುಖ್ಯ ಹೆಜ್ಜೆಯಾಗಿದೆ ಎಂದು ಅವರು ಶ್ಲಾಘಿಸಿದರು. ಕರ್ನಾಟಕವು ದೇಶದ ಜೀವಆರ್ಥಿಕತೆಗೆ ಶೇ.20 ಪಾಲು ನೀಡುತ್ತಿದೆ. ಜೈವಿಕ ತಂತ್ರಜ್ಞಾನವು ಇನ್ನೂ ಮಗು ಹಂತದಲ್ಲಿದೆ. ‘ಹೆಗ್ಗುರುಕು ಹಾಕುತ್ತಿರುವ ಶಿಶು ಆದರೆ ಸರಿಯಾದ ಪ್ರತಿಭೆ, ಅಕಾಡೆಮಿಕ್ ಕ್ಷೇತ್ರ, ಕೈಗಾರಿಕೆ ಹಾಗೂ ಸರ್ಕಾರದ ನೀತಿಯೊಂದಿಗೆ ಇದು ಭಾರತದ ಆರ್ಥಿಕತೆಯ ಪ್ರಮುಖ ಚಾಲಕವಾಗಲು ಸಾಧ್ಯ ಎಂದರು.

ನಿಜವಾದ ನವೀನತಾ ಕೇಂದ್ರ

ಭಾರತದ ಆರ್ಥಿಕತೆಯ ಮೌಲ್ಯ 150 ಬಿಲಿಯನ್ ಡಾಲರ್ ಆಗಿದ್ದು, ಅದರಲ್ಲಿ ಜೈವಿಕ ತಂತ್ರಜ್ಞಾನವು ಮಹತ್ತರ ಕೊಡುಗೆ ನೀಡಲಿದೆ. ಕರ್ನಾಟಕವು ನಿಜವಾದ ನವೀನತಾ ಕೇಂದ್ರವಾಗಿದೆ. ಈ ವೇಗದ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲೇ ಉಳಿಯಲಿದೆ. ಈಗಾಗಲೇ ರಾಜ್ಯದಲ್ಲಿ 20,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ನೋಂದಾಯಗೊಂಡಿದ್ದು, ಸರ್ಕಾರದ ನೀತಿಗಳು ಅಕಾಡೆಮಿಕ್ ಕ್ಷೇತ್ರ ಹಾಗೂ ಕೈಗಾರಿಕೆಯನ್ನು ಸಮನ್ವಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕವು ಭಾರತದಲ್ಲಿನ ಸ್ಟಾರ್ಟ್‌ಅಪ್‌ಗಳ ರಾಜಧಾನಿಯಾಗಿ ಬೆಳೆದು, ಮುಂದಿನ ದಶಕಗಳಲ್ಲಿ 200 ಟ್ರಿಲಿಯನ್ ಡಾಲರ್ ಮೌಲ್ಯವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ.ಎಂ.ಶಾಂತರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್, ನಿಟ್ಟೆ ವಿವಿ ಕುಲಪತಿ ಪ್ರೊ ಎಂ.ಎಸ್.ಮೂಡಿತ್ತಾಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಬಾರಿ ಮೊದಲಾದವರು ಉಪಸ್ಥಿತರಿದ್ದರು. ನಿಟ್ಟೆ ವಿವಿ ಕುಲಪತಿ ಪ್ರೊ.ಹರ್ಷ ಹಾಲಹಳ್ಳಿ ಸ್ವಾಗತಿಸಿದರು. ಎನ್ ಯುಸಿಎಸ್ ಇಆರ್ ನಿರ್ದೇಶಕ ಪ್ರೊ.ಅನಿರ್ಬನ್ ಚಕ್ರಬೊರ್ತಿ ವಂದಿಸಿದರು. ಡಾ.ಅಕ್ಷತಾ ನಿರೂಪಿಸಿದರು.