ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಅಧ್ಯಾಯ 1' ಚಿತ್ರವು ಭಾರಿ ಯಶಸ್ಸು ಗಳಿಸುತ್ತಿದೆ. ಆದರೆ, 4ನೇ ಶತಮಾನದ ಕಥಾಹಂದರ ಹೊಂದಿರುವ ಈ ಚಿತ್ರದ ಒಂದು ದೃಶ್ಯದಲ್ಲಿ ಚಿಕ್ಕ ತಪ್ಪು ನುಸುಳಿಕೊಂಡಿದ್ದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಏನದು ತಪ್ಪು ನೋಡಿ!
ರಿಷಬ್ ಶೆಟ್ಟಿ ಅವರ ಕಾಂತಾರ ಪ್ರೀಕ್ವಲ್ ಸಿನಿಮಾ ಭಾರಿ ವೇಗದಲ್ಲಿ ಮುನ್ನುಗ್ಗುತ್ತಿದೆ. ಇದಾಗಲೇ ಹಲವು ದಾಖಲೆಗಳನ್ನು ಈ ಚಿತ್ರ ಉಡೀಸ್ ಮಾಡಿದೆ. ಇದಾಗಲೇ 590 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿರೋ ಚಿತ್ರ ಎಲ್ಲಾ ಭಾಷೆಗಳಲ್ಲಿಯೂ ಮುನ್ನುಗ್ಗುತ್ತಲೇ ಸಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ರಿಷಬ್ ಶೆಟ್ಟಿ (Rishab Shetty), ಈಗ ಇನ್ನೂ ಒಂದು ಹಂತ ಮೇಲಕ್ಕೆ ಏರಿದ್ದಾರೆ. ವಿವಿಧ ಭಾಷೆಗಳ ಮಾಧ್ಯಮಗಳಿಂದಲೂ ರಿಷಬ್ ಶೆಟ್ಟಿ ಟೀಮ್ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಸ್ಯಾಂಡಲ್ವುಡ್ ಚಿತ್ರವನ್ನು ಬಹುದೊಡ್ಡ ಮಟ್ಟಿಗೆ ಕೊಂಡೊಯ್ದಿರುವ ಕೀರ್ತಿ ರಿಷಬ್ ಶೆಟ್ಟಿ ಅವರಿಗೆ ಸಲ್ಲುತ್ತಿದೆ. ಇದೇ ಕಾರಣಕ್ಕೆ ವಿವಿಧ ಭಾಷೆಗಳ ಸ್ಟಾರ್ ನಟರು ಕೂಡ ಮೆಚ್ಚುಗೆಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ.
ಚಿಕ್ಕ ತಪ್ಪು ನುಸುಳಿಯೇ ಬಿಟ್ಟಿದೆ!
ಅವೆಲ್ಲವೂ ಸರಿ. ಆದರೂ ಒಂದಷ್ಟು ಮಂದಿಯ ಕಣ್ಣಿಗೆ ಈ ಚಿತ್ರದಲ್ಲಿ ಚಿಕ್ಕ ತಪ್ಪು ಕಂಡೇ ಬಿಟ್ಟಿದೆ. ಇದು ಚಿಕ್ಕ ತಪ್ಪು ಎನ್ನಿಸಿದರೂ, ಇಷ್ಟು ದೊಡ್ಡ ಮಟ್ಟದ ಸಿನಿಮಾ ಮಾಡುವ ಸಂದರ್ಭದಲ್ಲಿ ಚಿತ್ರತಂಡವು ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವುದಕ್ಕೂ ಇದು ಉದಾಹರಣೆಯಾಗಿದೆ. ಬಹುಶಃ ರಿಷಬ್ ಶೆಟ್ಟಿ ಅಥವಾ ಅವರ ಟೀಮ್ನವರಿಗೇ ಈ ತಪ್ಪು ಕಂಡಿದ್ಯೋ ಇಲ್ವೋ ಗೊತ್ತಿಲ್ಲ. ಆದರೂ ತಪ್ಪಂತೂ ಆಗಿದ್ದು ನಿಜ.
ಪ್ಲಾಸ್ಟಿಕ್ ಕ್ಯಾನ್
ಅದೇನಪ್ಪಾ ಎಂದರೆ, ಪ್ಲಾಸ್ಟಿಕ್ ಕ್ಯಾನ್! ಬ್ರಹ್ಮಕಲಶದ ಹಾಡಿನ ಸಮುದಾಯ ಊಟದ ದೃಶ್ಯದಲ್ಲಿ 20 ಲೀಟರ್ ನೀರಿನ ಕ್ಯಾನ್ ಗೋಚರಿಸುತ್ತದೆ. ಇದೇನು ಮಹಾದೊಡ್ಡ ತಪ್ಪು ಅಂತೀರಾ? ಅಷ್ಟಕ್ಕೂ ಈ ಚಿತ್ರದ ಕಥೆ ಇರುವುದೇ 4 ನೇ ಶತಮಾನದ ಕದಂಬ ರಾಜವಂಶದ ಸನ್ನಿವೇಶ. ಆ ಸಮಯದಲ್ಲಿ ಇದದ್ದು ಕಂಚು, ಬೆಳ್ಳಿ, ಚಿನ್ನ ಇಂಥದ್ದೇ ವಿನಾ ಪ್ಲಾಸ್ಟಿಕ್ ಬಳಕೆ ಇರಲೇ ಇಲ್ಲ. ಪ್ಲಾಸ್ಟಿಕ್ ಬಳಕೆ ಶುರುವಾಗಿ, ಪರಿಸರ ನಾಶ ಮಾಡುವ ಹಂತಕ್ಕೆ ಬಂದದ್ದು ಬಹಳ ಶತಮಾನಗಳ ನಂತರವಷ್ಟೇ. ಆದರೆ, ಶೂಟಿಂಗ್ ಸಮಯದಲ್ಲಿ ಅಲ್ಲಿಯೇ ಇಟ್ಟಿದ್ದ 20 ಲೀಟರ್ ನೀರಿನ ಕ್ಯಾನ್ ಈ ದೃಶ್ಯದ ಜೊತೆಗೂ ಸೇರಿಹೋಗಿದೆ.
ನೆಟ್ಟಿಗರು ಸುಮ್ನೆ ಬಿಡ್ತಾರಾ?
ಅಂಥ ದೊಡ್ಡ ಸೆಟ್ ಹಾಕಿದ ಸಂದರ್ಭದಲ್ಲಿ ಇದು ಬಹುಶಃ ಯಾರ ಗಮನಕ್ಕೂ ಬಂದಿರಲಿಕ್ಕಿಲ್ಲ. ಇಲ್ಲದಿದ್ದರೆ ಖಂಡಿತವಾಗಿಯೂ ಆ ದೃಶ್ಯವನ್ನು ಮತ್ತೊಮ್ಮೆ ಶೂಟ್ ಮಾಡುತ್ತಿದ್ದರು, ಇಲ್ಲವೇ ಬೇರೆನೋ ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಇದು ಸಿನಿಮಾದಲ್ಲಿ ಸೇರಿಕೊಂಡು ಹದ್ದಿನ ಕಣ್ಣಿನ ವೀಕ್ಷಕರ ಕಣ್ಣಿಗೆ ಕಂಡೇ ಬಿಟ್ಟಿದೆ. ಚಿಕ್ಕ ತಪ್ಪು ಕಂಡರೂ ಬಿಡದ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಈ ಪರಿಯಲ್ಲಿ ಪಬ್ಲಿಸಿಟಿ ಪಡೆಯುತ್ತಿರುವ ಚಿತ್ರದಲ್ಲಿ ಏನಾದರೂ ತಪ್ಪು ಕಂಡರೆ ಸುಮ್ಮನೇ ಬಿಡ್ತಾರಾ?
ಕೆಲವರು ತಮಾಷೆಯಾಗಿ ಉತ್ತರಿಸಿದರೆ, ಮತ್ತೆ ಕೆಲವರು ಸ್ವಲ್ಪ ಸೀರಿಯಲ್ ಆಗಿಯೆ ಬರೆದಿದ್ದಾರೆ. 'ಕದಂಬರು ಪ್ಲಾಸ್ಟಿಕ್ ನೀರಿನ ಕ್ಯಾನ್ಗಳನ್ನು ಮೊದಲು ಬಳಸಿದರು ಎನ್ನುವುದನ್ನು ಕಾಂತಾರ ಅಧ್ಯಾಯ 1ರಿಂದ ತಿಳಿಯಿತು ಎಂದು ಒಬ್ಬಾತ ಹೇಳಿದರೆ, 'ಬಿಸ್ಲೇರಿಯೊಂದಿಗೆ ಕಾಂತಾರ ಪಾಲುದಾರರಾಗಿರಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಮತ್ತೆ ಕೆಲವರು, 'ಈ ತಪ್ಪನ್ನು ನೋಡಿ ಬೇಸರವಾಯಿತು, ಚಿತ್ರದಲ್ಲಿ ಇಷ್ಟೊಂದು ಕಾಳಜಿ ವಹಿಸಿ ಚಿತ್ರೀಕರಣ ಮಾಡಲಾಗಿದೆ. ಆದರೆ ಇದು ಕಾಣಬಾರದಿತ್ತು. ಏಕೆ ಯಾರ ಗಮನಕ್ಕೂ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

