ಡಾ. ವಿಷ್ಣುವರ್ಧನ್ ಸಮಾಧಿ ತೆರವು ವಿಚಾರವಾಗಿ ಅನಿರುದ್ಧ್ ಅಭಿಮಾನಿಗಳೊಂದಿಗೆ ಸಭೆ ನಡೆಸಿ, ಸಮಾಧಿ ಇದ್ದ ಜಾಗದಲ್ಲಿ ಅಸ್ಥಿ ಇರಲಿಲ್ಲ, ಮೈಸೂರಿನ ಸ್ಮಾರಕದಲ್ಲಿದೆ ಎಂದು ಸ್ಪಷ್ಟಪಡಿಸಿದರು. ಕುಟುಂಬಕ್ಕೆ ಯಾವುದೇ ಲಾಭವಿಲ್ಲ, ಸುಳ್ಳು ಆರೋಪ ಮಾಡಿದರೆ ಕಾನೂನು ಕ್ರಮ ಎಂದು ಎಚ್ಚರಿಕೆ ನೀಡಿದರು.

ಡಾ. ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಸಮಾಧಿಯನ್ನು ತೆರವುಗೊಳಿಸಿದ ವಿಚಾರವಾಗಿ ಅವರ ಅಳಿಯ ನಟ ಅನಿರುದ್ಧ್ ಅವರು ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಸಭೆ ನಡೆಸಿದರು. ವಿಷ್ಣುವರ್ಧನ್ ಸಮಾಧಿ ಉಳಿಸಿಕೊಳ್ಳಲು ನೀವು ಏನು ಮಾಡಿದ್ದೀರಿ ಎಂದು ಅಭಿಮಾನಿ ಕೇಳಿದ್ದು ಗೊಂದಲ ಮತ್ತು ವಾಗ್ವಾದಕ್ಕೆ ಕಾರಣವಾಯ್ತು. ಈ ವೇಳೆ ವಿಷ್ಣು ಅಭಿಮಾನಿಗಳು ಅಸಮಾಧಾನಗೊಂಡು ಮಳೆಯಲ್ಲೇ ನಿಂತು ಪ್ರತಿಭಟಿಸಿದ ಘಟನೆ ನಡೆಯಿತು. ಈ ವೇಳೆ ಅನಿರುದ್ಧ ಸಮಾಧಿ ಇರುವ ಜಾಗದಲ್ಲಿ ಅಸ್ಥಿ ಇಲ್ಲ ಎಂದು ಸ್ಪಷ್ಟನೆ ನೀಡಿ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡ್ತಿವಿ ಎಂದು ಒತ್ತಿ ಹೇಳಿದ್ದಾರೆ. ವಿಷ್ಣುವರ್ಧನ್ ಅವರ ಅಂತಿಮ ಸಂಸ್ಕಾರದ ದಿನ ನಡೆದ ಘಟನೆಗಳ ಬಗ್ಗೆ ವಿವರಿಸುತ್ತಾ ಅನಿರುದ್ಧ್ , ಹಿಂದೆ ಸಮಾಧಿ ಇದ್ದ ಜಾಗದಲ್ಲಿ ಅಸ್ಥಿ ಇರಲಿಲ್ಲ. ಅಲ್ಲಿ ಒಂದು ಚೆಂಬು ಇಟ್ಟಿದ್ದೇವೆ ಅಂತ ಹೇಳಲಾಗಿತ್ತು. ಆದರೆ ನಿಜದಲ್ಲಿ ಅಲ್ಲಿ ಏನೂ ಇರಲಿಲ್ಲ. ನನ್ನ ಅಮ್ಮ (ಭಾರತಿ ವಿಷ್ಣುವರ್ಧನ್) ಅವರು ಆಸ್ತಿಯನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದರು. ಕೊನೆಗೆ ಒಂದು ಚೊಂಬಲ್ಲಿ ಉಳಿಸಿಕೊಂಡು, ಉಳಿದುದನ್ನು ನದಿಗೆ ಬಿಡಲಾಯಿತು. ಇಂದಿಗೆ ಆ ಅಸ್ಥಿ ಮೈಸೂರಿನ ಸ್ಮಾರಕದಲ್ಲಿರುವ ಪುತ್ಥಳಿಯ ಕೆಳಗೆ ಇದೆ.

ಕಿಚ್ಚನಿಗೆ ಟಾಂಗ್ ಕೊಟ್ರಾ ವಿಷ್ಣು ಅಳಿಯ?

ಕಿಚ್ಚ ಸುದೀಪ್ ಗೆ ಜಾಗ ಖರೀದಿಸುತ್ತೇನೆ ಅಂದಿದ್ದ ವಿಚಾರಕ್ಕೆ ಹೆಸರು ಹೇಳದೆಯೇ ವಿಷಯ ಪ್ರಸ್ತಾಪಿಸಿದ ಅನಿರುದ್ಧ ಯಾರೋ ಜಾಗ ತಗೊಂಡು ಮಾಡ್ತೀವಿ ಅಭಿಮಾನ್ ಸ್ಟುಡಿಯೋದಲ್ಲಿ ಮತ್ತೆ ಸಮಾಧಿ ಮಾಡ್ತೀವಿ ಅಂತಿದಾರೆ. ಆರು ವರ್ಷ ನಾವೇ ಪ್ರಯತ್ನ ಮಾಡಿದ್ದೇವೆ. ಅವರ ಪ್ರಯತ್ನದಿಂದ ಆದರೆ ತುಂಬಾ ಸಂತೋಷ. ರಾಜ್ಯ ಸರ್ಕಾರವೇ ಇದರ ಜೊತೆ ನಿಂತಿದೆ. ಬಾಲಣ್ಣ ಅವರ ಮಗ ವಾಹಿನಿ ಮುಂದೆ ಕೂತು ಕೆಟ್ಟ ಕೆಟ್ಟದಾಗಿ ಮಾತಾಡಿದ್ರು, ಅದರಿಂದ ಬೇಜಾರಾಗಿ ಅವ್ರು 2016ರಿಂದ ಜಾಗಕ್ಕೆ ಕಾಲಿಡಲ್ಲ ಅಂದ್ರು, ಅವತ್ತು ಬೇಜಾರಾಗಿ ಅದನ್ನು ಅಲ್ಲಿಂದ ತೆಗಿಸಿ ಬಿಡಬಹುದಿತ್ತು. ಆದರೆ ನಾವು ಅಭಿಮಾನಿಗಳಿಗಾಗಿ ಅದನ್ನು ತೆಗೆಸಲಿಲ್ಲ. ಒಂಭತ್ತು ವರ್ಷ ಆಯ್ತು, ಯಾಕೆ ಯಾರೂ ಇನ್ನೂ ಅದನ್ನು ಖರೀದಿಸಲಿಲ್ಲ? ಯಾರಾದರೂ ಮಾಡ್ತೀವಿ ಅಂತ ಹೇಳಬಹುದೇನೋ. ಆದರೆ ಅದು ರಾಜ್ಯಸಭೆಯಲ್ಲಿ ಪಾಸ್ ಆಗಬೇಕಲ್ಲ ಎಂದರು

ಕುಟುಂಬಕ್ಕೆ ಯಾವುದೇ ಲಾಭ ಇಲ್ಲ

ಅಪವಾದಗಳನ್ನು ಖಂಡಿಸಿದ ಅನಿರುದ್ಧ್ ಅವರು, "ಅಭಿಮಾನ ಸ್ಟುಡಿಯೋ ಜಾಗ ಸರ್ಕಾರಿ ಭೂಮಿ. ನಮಗೆ ಅದರಿಂದ ಒಂದು ರೂಪಾಯಿಯೂ ಲಾಭವಾಗುವುದಿಲ್ಲ. ವ್ಯಾಪಾರೀಕರಣ ಅಂತ ಹೇಳುವವರು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಸರ್ಕಾರವೇ ಹಣ ನೀಡಿದೆ. ನಮ್ಮ ಕುಟುಂಬಕ್ಕೆ ಹತ್ತು ಲಕ್ಷ ಬರುತ್ತದೆ ಅಂತ ಕೆಲವರು ಹೇಳುತ್ತಾರೆ. ಅದು ಸಂಪೂರ್ಣ ಸುಳ್ಳು ಎಂದರು.

ಸಮಾಧಿ ಅಭಿಮಾನ ಸ್ಟುಡಿಯೋದಲ್ಲಿ ಬೇಡ ಎಂಬ ಸಲಹೆ

ಆರಂಭದಲ್ಲಿ ನಾವು ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು ಪ್ಲಾನ್ ಮಾಡಿದ್ದೆವು. ಆದರೆ ಅಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅಂಬರೀಶ್ ಅಂಕಲ್ ಅವರು ವಿಷ್ಣುಸರ್‌ಗೆ ಹೆಚ್ಚಿನ ಗೌರವ ಸಿಗಲೆಂದು ಅಭಿಮಾನ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ಮಾಡಲು ಸಲಹೆ ನೀಡಿದರು. ಬಳಿಕ ಗೀತಾ ಬಾಲಿ ಅವರು ಜಾಗದ ಮೇಲೆ ಕೇಸು ಹಾಕಿದ್ದರಿಂದ ಕಾನೂನು ಸಮಸ್ಯೆ ಎದುರಾಯಿತು. ಹಲವಾರು ಬಾರಿ ಸರ್ಕಾರವನ್ನು ಸಂಪರ್ಕಿಸಿದ್ದೇವೆ, ಆದರೆ ಸಮಸ್ಯೆ ಬಗೆಹರಿಯಲಿಲ್ಲ ಎಂದು ಅವರು ವಿವರಿಸಿದರು.

ಮೈಸೂರಿನಲ್ಲಿ ಸ್ಮಾರಕ ಶಾಶ್ವತ

ಅನಿರುದ್ಧ್ ಅಭಿಮಾನಿಗಳಿಗೆ ಸ್ಪಷ್ಟವಾಗಿ ತಿಳಿಸಿ "ಮೈಸೂರಿನಲ್ಲಿ ನಿರ್ಮಿಸಿರುವ ಸ್ಮಾರಕವೇ ಶಾಶ್ವತ. ಅಲ್ಲಿ ಮಾತ್ರ ವಿಷ್ಣುಸರ್ ಅವರ ಅಸ್ಥಿ ಇದೆ. ಮತ್ತೊಬ್ಬರಿಗೆ ಎರಡು ಜಾಗ ಬೇಡ. ಸ್ಮಾರಕದ ಹೆಸರಲ್ಲಿ ಬೇರೆಡೆ ಸಮಾಧಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಸುದ್ದಿ ನನಗೂ ಬಂದಿದೆ. ಆದರೆ ಅದು ಸರಿ ಅಲ್ಲ. ನಿಜವಾದ ಅಭಿಮಾನಿಗಳು ಈ ತರಹದ ಕೆಲಸ ಮಾಡುವುದಿಲ್ಲ" ಎಂದರು.

ಇನ್ಮುಂದೆ ಆರೋಪ ಬಂದರೆ ಕಾನೂನು ಕ್ರಮ

ಅಂತಿಮವಾಗಿ ಅನಿರುದ್ಧ್ ಎಚ್ಚರಿಕೆ ನೀಡಿದರು. ಇನ್ನು ಮುಂದೆ ನಮ್ಮ ಕುಟುಂಬದ ಮೇಲೆ ಯಾವುದೇ ರೀತಿಯ ಅಪವಾದ ಅಥವಾ ಆರೋಪ ಮಾಡಿದರೆ, ಅದು ಮಾಧ್ಯಮದಲ್ಲಾಗಲಿ, ಇನ್ನೆಲ್ಲಿ ಆಗಲಿ, ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುವುದು ನಿಲ್ಲಿಸಬೇಕು" ಎಂದು ಸ್ಪಷ್ಟ ಸಂದೇಶ ನೀಡಿದರು. ಈ ಸಂಪೂರ್ಣ ಸಭೆಯಲ್ಲಿ ಅನಿರುದ್ಧ್ ಅಭಿಮಾನಿಗಳ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ರೂ, ಕೊನೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಡಾ. ವಿಷ್ಣುವರ್ಧನ್ ಅವರ ಸಮಾಧಿ ವಿವಾದಕ್ಕೆ ಇನ್ನೂ ಶಾಶ್ವತ ಪರಿಹಾರ ಸಿಗದಿರುವುದು ಅಭಿಮಾನಿಗಳಿಗೆ ಅಸಮಾಧಾನ ಮೂಡಿಸಿದೆ.