ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರು ಪತ್ನಿ ಗೀತಾ ಶಿವರಾಜಕುಮಾರ್ ಅವರೊಂದಿಗೆ ಭಾನುವಾರ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ತಾಯಿ ಹಾಸನಾಂಬೆ, ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ದೇಶ್ವರ ದೇವರ ದರ್ಶನ ಪಡೆದು ಪುನೀತರಾದರು.
ಹಾಸನ (ಅ.20): ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರು ಪತ್ನಿ ಗೀತಾ ಶಿವರಾಜಕುಮಾರ್ ಅವರೊಂದಿಗೆ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ತಾಯಿ ಹಾಸನಾಂಬೆಯ ದರ್ಶನ ಪಡೆದು ಪುನೀತರಾದರು. ಬಳಿಕ ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ದೇಶ್ವರ ದೇವರ ದರ್ಶನ ಮಾಡಿಕೊಂಡರು. ದರ್ಶನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜಕುಮಾರ್ ಅವರು, ಹಾಸನಾಂಬೆ ತಾಯಿಯ ದರ್ಶನ ಮಾಡಲು ನಾವು ಬಹಳ ದಿನಗಳಿಂದ ಬಯಸುತ್ತಿದ್ದೆವು. ಶಾಸಕರಾದ ಎಚ್.ಪಿ. ಸ್ವರೂಪ್ ಅವರು ಸ್ವತಃ ಮನೆಗೆ ಬಂದು ಆಹ್ವಾನಿಸಿದರು. ತಾಯಿ ಆಶೀರ್ವಾದ ಇದ್ದರೆ ನಮ್ಮನ್ನು ತಾನೇ ಕರೆಯಿಸಿಕೊಳ್ಳುತ್ತಾಳೆ ಎನ್ನುವುದು ನನ್ನ ವಿಶ್ವಾಸ.
ಜಿಲ್ಲಾ ಉಸ್ತುವಾರಿ ಸಚಿವರು ಕೂಡ ದೇವಾಲಯದ ಒಳಗೆ ಇದ್ದು, ಭಕ್ತರಿಗೆ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಹಾಸನಕ್ಕೆ ಬಂದು ತುಂಬಾ ದಿನಗಳಾದವು, ಈಗ ಬಂದು ತುಂಬ ಸಂತೋಷವಾಗಿದೆ ಎಂದರು. ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಸ್ವಾರ್ಥಿಯಲ್ಲ, ಎಲ್ಲರಿಗೂ ಚೆನ್ನಾಗಿರಲಿ ಎಂದು ತಾಯಿಯ ಬಳಿಗೆ ಬೇಡಿಕೊಂಡಿದ್ದೇನೆ.. ಮುಂದಿನ ಚಿತ್ರ ಎ.ಕೆ.45 ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿದ್ದು, ಇನ್ನೂ ಹಲವಾರು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ ಎಂದು ತಿಳಿಸಿದರು.
ಹಿರಿಯ ನಟ ಶಿವರಾಜಕುಮಾರ್ ಅವರು ಪ್ರೋಟೋಕಾಲ್ ಪ್ರಕಾರ ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಿದರು. ದೇವಾಲಯದ ಒಳಗೆ ಇಳಿಯುತ್ತಿದ್ದಂತೆ ಅಭಿಮಾನಿಗಳಿಂದ ಶಿವಣ್ಣಾ, ಶಿವಣ್ಣಾ ಎಂದು ಕೂಗುಗಳು ಮೊಳಗಿದವು. ಅವರು ಅಭಿಮಾನಿಗಳತ್ತ ಕೈಬೀಸಿ, ಕೆಲವರ ಕೈ ಕುಲುಕಿ, ಉತ್ಸಾಹ ತುಂಬಿದ ಕ್ಷಣ ಸೃಷ್ಟಿಸಿದರು. ಬಳಿಕ ಪತ್ನಿ ಗೀತಾ ಸಮೇತ ವಾಹನದೊಳಗೆ ಕುಳಿತು ಮುಂದಿನ ಪ್ರಯಾಣ ಮುಂದುವರೆಸಿದರು.
ದರ್ಶನ ಪಡೆದ ರಿಷಬ್ ಶೆಟ್ಟಿ
ಕಾಂತಾರ ಸಿನಿಮಾದ ಮೂಲಕ ದಾಖಲೆ ನಿರ್ಮಿಸಿದ ನಾಯಕ ನಟ ರಿಷಿಬ್ ಶೆಟ್ಟಿ ದಂಪತಿಗಳು ಭಾನುವಾರ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದೇ ವೇಳೆ ಶ್ರೀ ಸಿದ್ದೇಶ್ವರ ದೇವಾಲಯಕ್ಕೂ ತೆರಳಿದರು. ಕುಟುಂಬ ಸಮೇತ ಹಾಸನಾಂಬೆ ದೇವಿ ದರ್ಶನ ಸಿಕ್ಕಿರುವುದು ಬಹಳ ಖಷಿಯಾಗಿದೆ. ಬೇಡಿಕೊಂಡಿರುವುದು ನಮಗೆ ಸಂಬಂಧಪಟ್ಟಿರುವುದು ನಿಮಗೆ ಏಕೆ ಹೇಳಲಿ! ಪ್ರತಿಯೊಬ್ಬ ಮನುಷ್ಯನಿಗೂ ಪ್ರಾರ್ಥನೆ ಇದ್ದೆ ಇರುತ್ತದೆ. ಪ್ರಾರ್ಥನೆಯನ್ನು ದೇವರಲ್ಲಿ ಮಾಡೆ ಮಾಡುತ್ತಾರೆ. ಆ ಪಾರ್ಥನೆ ನಮ್ಮ ಮತ್ತು ದೇವರ ಮಧ್ಯೆ ಇರಬೇಕು ಅಷ್ಟೆ. ಅದನ್ನು ಯಾರಿಗೂ ಹೇಳಬಾರದು ಎಂದರು.
ಕಾಂತರಾ ಸಿನಿಮಾ ಒಂದು ಅಧ್ಯಾತ್ಮಿಕವಾಗಿರಬಹುದು, ಒಂದು ದೈವತ್ವ ಎಂಬುದು ದೇವರ ಬಗ್ಗೆ ಆಗಬಹುದು, ಸಿನಿಮಾ ಮಾಡುತ್ತೇವೆ ಎಂದರೇ ಒಂದು ನಂಬಿಕೆ ಇಟ್ಟುಕೊಂಡು ಮಾಡುತ್ತೇವೆ. ಆಗಿ ನಂಬಿಕೆ ಇದ್ದರೇ ಮಾತ್ರ ಸಾಧ್ಯ. ಆಗೇ ಸರಿಯಾದ ರೀತಿಯಲ್ಲಿ ಬರುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ನಾನಾಷ್ಟೆ ಅಲ್ಲ, ನಮ್ಮ ತಂಡ ಮತ್ತು ಕುಟುಂಬ ನಿರ್ಮಾಪಕರು ಸೇರಿದಂತೆ ಪ್ರತಿಯೊಬ್ಬರೂ ಕೂಡ ನಂಬಿ ಸಿನಿಮಾ ಮಾಡಿದ್ದೇವೆ. ಜನರ ಆಶೀರ್ವಾದ ಮತ್ತು ದೈವ ಆಶೀರ್ವಾದದಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ತಲುಪಿದೆ. ಫಿಲಂ ಯಶಸ್ವಿಗೊಂಡ ಮೇಲೆ ಎಲ್ಲಾ ಕಡೆ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡಲಾಗುತ್ತಿದೆ.
ಜನರ ಬಳಿಯೂ ಕೂಡ ಹೋಗುತ್ತಿದ್ದು, ಆಗೇ ದೇವಸ್ಥಾನದ ಬಳಿಯೂ ಹೋಗಲಾಗುತ್ತಿದೆ. ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಹೇಳಲಾಗಿದೆ. ಮುಂದೆ ನಿರ್ಮಾಪಕರು ಪ್ರಚಾರ ಮಾಡುತ್ತಾರೆ. ಆಗ ಗೊತ್ತಾಗುತ್ತದೆ. ನಿಮ್ಮ ಚಿತ್ರಗಳೆಲ್ಲಾ ಆಧ್ಯಾತ್ಮಿಕವಾಗಿರುತ್ತದೆಯೇ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಾಯಕರ ನಟ, ಮೊದಲು ಇರಲಿಲ್ಲ. ಈಗ ಕಾಂತರಾ ಅಷ್ಟೆ ಆಧ್ಯಾತ್ಮಿಕವಾಗಿ ಬಿತ್ತರವಾಗಿದೆ. ಸಿನಿಮಾ ಎಂದ ಮೇಲೆ ಬೇರೆ ಬೇರೆ ರೀತಿ ನಿರ್ಮಿಸುವುದು ಇದ್ದೆ ಇರುತ್ತದೆ ಎಂದು ಉತ್ತರಿಸಿದರು. ಹಾಸನ ಎಂದರೇ ಒಂದು ವಿಶೇಷ. ನಮ್ ಇಡೀ ತಂಡಕ್ಕೆ ಬಹಳ ಯಶಸ್ಸು ಸಿಕ್ಕಿದೆ. ಕಿರಿಕ್ ಪಾರ್ಟಿ ಸಿನಿಮಾ ಹಾಸನದಲ್ಲೆ ಶೂಟಿಂಗ್ ಮಾಡಿರುವುದು ಆಗಾಗಿ ಇಲ್ಲಿ ಹೆಚ್ಚಿನ ಜನ ಸ್ನೇಹಿತರು, ಹಿರಿಯರು, ಅಧಿಕಾರಿಗಳು ಎಲ್ಲಾರು ನಮಗೆ ಸಹಕಾರ ಮಾಡಿದ್ದಾರೆ. ಇವತ್ತು ಪೊಲೀಸ್ ಇಲಾಖೆಗೆ ಅಭಿನಂದನೆ ಹೇಳುವುದಕ್ಕೆ ಇಷ್ಟ ಪಡುತ್ತೇನೆ.
ಇಷ್ಟು ಅದ್ಭುತವಾಗಿ ದರ್ಶನ ಮಾಡಿಕೊಂಡು ಬರುವುದಕ್ಕೆ ದೇವಸ್ಥಾನದವರು ಸೇರಿ ಅವಕಾಶ ಮಾಡಿಕೊಟ್ಟಿದ್ದಾರೆ ಅದಕ್ಕೆ ಅಭೀನಂದನೆ ಹೇಳುತ್ತೇನೆ ಎಂದು ಹೇಳಿದರು. ನಾಯಕ ನಟ ರಿಷಿಬ್ ಶೆಟ್ಟಿ ಹಾಸನಾಂಬೆ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಸರದಿ ಸಾಲಿನಲ್ಲಿ ಇದ್ದ ಭಕ್ತಾದಿಗಳಲ್ಲಿ ಉತ್ಸಹ ಕಂಡು ಬಂದು ನಾಯಕ ನಟನನ್ನು ಕೂಗಿ ಕರೆದರು. ಘೋಷಣೆ ಕೂಗಿದರು. ನಂತರ ರಿಷಿಬ್ ಶೆಟ್ಟಿ ಅವರು ನಿಂತಲ್ಲೆ ಕೈ ಬಿಸಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಮೊದಲು ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನೋಡಿ ಮಾತನಾಡಿಸಲು ಕರೆಯೋಲೆ ಕೊಟ್ಟರು. ನಂತರ ವಿಷಯ ತಿಳಿದು ರಿಷಿಬ್ ಶೆಟ್ಟಿ ಓಡಿ ಬಂದು ಶಿವರಾಜ ಕುಮಾರ್ ಕಾಲು ಮುಗಿದು ಶರಣು ಮಾಡಿಕೊಂಡರು. ಈ ವೇಳೆ ಕೆಲ ಸಮಯ ಮಾತನಾಡಿ ಹೊರಟರು.
