ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮತ ಪ್ರಮಾಣದ ಗ್ರಾಫ್‍ನಲ್ಲಿ ಏರಿಕೆಯಾಗಿದೆ. ಆದರೆ, ರಾಹುಲ್‌ ಗಾಂಧಿಗೆ ಅಸಮಾಧಾನ ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಬೆಂಗಳೂರು (ಆ.09): ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮತ ಪ್ರಮಾಣದ ಗ್ರಾಫ್‍ನಲ್ಲಿ ಏರಿಕೆಯಾಗಿದೆ. ಆದರೆ, ರಾಹುಲ್‌ ಗಾಂಧಿಗೆ ಅಸಮಾಧಾನ ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ರಾಹುಲ್‌ ಗಾಂಧಿ ಕುರಿತು ‘ಮೈಂಡ್‌ ಫುಲ್‌ ಆಫ್‌ ಇಮ್ಮೆಚ್ಯೂರಿಟಿ’ ಎಂದು ಹೇಳಿದ್ದರು. ಅಂದರೆ, ರಾಹುಲ್‌ ಅವರ ಯೋಚನೆ ಸಂಪೂರ್ಣ ಅಪಕ್ವವಾಗಿದೆ ಎಂದರ್ಥ. ಈಗ ರಾಹುಲ್‌ ಅವರು ಅದನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ ಎಂದೂ ಲಿಂಬಾವಳಿ ಟಾಂಗ್‌ ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಆಗಿದೆ ಎಂಬ ರಾಹುಲ್‌ ಗಾಂಧಿ ಆರೋಪಗಳಿಗೆ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಬಾವಳಿ ಅವರು ದಾಖಲೆ ಸಮೇತ ತಿರುಗೇಟು ನೀಡಿದರು. ನಾವು ಮಹದೇವಪುರದಲ್ಲಿ ಸಕ್ರಮವಾಗಿಯೇ ಚುನಾವಣೆ ಮಾಡಿದ್ದೇವೆ. ನಾಲ್ಕು ಲೋಕಸಭಾ ಮತ್ತು ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ ಗಳಿಕೆ ಹೆಚ್ಚಳವಾಗಿದೆ. ಅಂದರೆ, ಕ್ಷೇತ್ರದಲ್ಲಿ ಬಿಜೆಪಿ ಬೆಳವಣಿಗೆ ಸಹಜವಾಗಿದೆ. ಇದನ್ನು ರಾಹುಲ್‌ ಗಾಂಧಿ ಅವರು ಅರ್ಥ ಮಾಡಿಕೊಳ್ಳಬೇಕು. ಇಷ್ಟು ದಿನ ಇವಿಎಂ ಕುರಿತು ಬೈಯ್ಯುತ್ತಿದ್ದ ರಾಹುಲ್‌ ಈಗ ಮತದಾರರ ಪಟ್ಟಿಗೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಚುನಾವಣಾ ಆಯೋಗದೊಂದಿಗೆ ಸೇರಿ ಚುನಾವಣಾ ಅಕ್ರಮ ಎಸಗುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅದರಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಉದಾಹರಣೆ ತೆಗೆದುಕೊಂಡು ಪಿಪಿಟಿ ಪ್ರಾತ್ಯಕ್ಷಿಗೆ ನೀಡಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ 40,009 ನಕಲಿ ಮತ್ತು ಅಸಿಂಧು ಮತಗಳಿವೆ. ಒಂದೇ ವಿಳಾಸದ 10,45 ಬಲ್ಕ್‌ ಮತದಾರರು ಇದ್ದಾರೆ. ಫಾರ್ಮ್‌-6ರ(ಹೊಸ ಮತದಾರ) ದುರ್ಬಳಕೆ 33,692, ಡುಪ್ಲಿಕೇಟ್‌ ಮತದಾರರ ಸಂಖ್ಯೆ 11,965 ಇದೆ. 4,132 ಮಂದಿ ಅಸಮರ್ಪಕ ಫೋಟೋ ಇರುವ ಮತದಾರರು 4,132 ಮಂದಿ ಇದ್ದಾರೆ ಎಂದು ಏಳು ಉದಾಹರಣೆ ನೀಡಿದ್ದಾರೆ. ರಾಹುಲ್‌ ಗಾಂಧಿ ಅವರ ಈ ಆರೋಪಗಳ ಕುರಿತು ನಾವು ರಿಯಾಲಿಟ್ ಚೆಕ್ ಮಾಡಿದ್ದೇವೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ದಾಖಲೆ ಪ್ರದರ್ಶನ: ರಾಹುಲ್‌ ಗಾಂಧಿ ಅವರು ಗುರುಕೀರಿತ್‌ ಸಿಂಗ್‌ ಹೆಸರು ಮತದಾರರ ಪಟ್ಟಿಯಲ್ಲಿ 4 ಕಡೆ ಇದೆ ಎಂದು ಆರೋಪಿಸಿದ್ದರು. ನಾವು ರಿಯಾಲಿಟಿ ಚೆಕ್‌ ಮಾಡಿದಾಗ, ಗುರುಕೀರಿತ್‌ ಸಿಂಗ್‌ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದು, ನಾಲ್ಕು ಬಾರಿಯೂ ತಿರಸ್ಕಾರವಾಗಿತ್ತು. ಆದರೆ, ಮತಪಟ್ಟಿ ಬಂದ ಬಳಿಕ ನಾಲ್ಕು ಕಡೆ ಹೆಸರು ಕಾಣಿಸಿಕೊಂಡಿದೆ. ಬಳಿಕ ಮೂರು ಕಡೆ ಅವರು ಹೆಸರು ರದ್ದು ಮಾಡುವಂತೆ ಕೋರಿದ್ದರು ಎಂದು ದಾಖಲೆ ಮುಂದಿಟ್ಟರು. ಉತ್ತರಪ್ರದೇಶ ಮೂಲದ ಆದಿತ್ಯ ಶ್ರೀವಾಸ್ತವ 19 ವರ್ಷದ ಇದ್ದಾಗ ಲಕ್ನೋದಲ್ಲಿ ಮತದಾರರ ಪಟ್ಟಿಗೆ ಸೇರಿದ್ದರು. ಬಳಿಕ ಮುಂಬೈನಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿಯೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದರು. ನಂತರ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದು ನೆಲೆ ನಿಂತು ಇಲ್ಲಿಯೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದರು. ಬಳಿಕ ಬೆಂಗಳೂರಿನಲ್ಲಿಯೇ ಮತ ಚಲಾಯಿಸಿದ್ದಾರೆ. ಇವರು ಕೂಡ ಫಾರ್ಮ್‌-7 ಮೂಲಕ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದರು.

ಕ್ಷೇತ್ರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಳ: ಇನ್ನು ನಕಲಿ ವಿಳಾಸದ ಆರೋಪದ ಬಗ್ಗೆ ಪರಿಶೀಲಿಸಿದಾಗ 13 ಜನ ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಮತದಾರರ ಪಟ್ಟಿಗೆ ಸೇರಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬಲ್ಕ್‌ ಮತದಾರರ ಕುರಿತ ಆರೋಪ ಸರಿಯಲ್ಲ ಎಂದರು. ಕ್ಷೇತ್ರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಹೋಗುವವರು ಮತ್ತು ಬರುವವರ ಸಂಖ್ಯೆ ಹೆಚ್ಚೇ ಇದೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಡಾರ್ಮೆಟ್ರಿಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಒಂದೇ ಮನೆಯಲ್ಲಿ 80 ಜನ ಮತದಾರು ಎಂದರೆ, ಆ ಸ್ಥಳಕ್ಕೆ ಹೋಗಿ ನೋವು ನೋಡಿದಾಗ ಅಲ್ಲಿ ಹಲವು ರೂಮ್‌ಗಳು ಇವೆ. ಇನ್ನೂ ಹಲವು ಕೆಲಸಗಾರರು ಅಲ್ಲಿದ್ದಾರೆ ಎಂದು ಆ ಮನೆಯ ವಿಡಿಯೋ ಪ್ರದರ್ಶಿಸಿದರು. ಎರಡು ಕಡೆ ಮತ ಚಲಾವಣೆ ಕುರಿತ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ಕುರಿತೂ ತಪಾಸಣೆ ಮಾಡಿದ್ದೇವೆ, ಅವರು ಒಂದೇ ಕಡೆ ಮತ ಚಲಾಯಿಸಿದ್ದಾರೆ ಎಂದು ದಾಖಲೆ ತೋರಿಸಿದರು.

ಮತದಾರರ ಸಂಖ್ಯೆ ಏರಿಕೆ: ಮಹದೇವಪುರ ಕ್ಷೇತ್ರದಲ್ಲಿ 2008ರ ವಿಧಾನಸಭಾ ಚುನಾವಣೆ ವೇಳೆ 2,75,328 ಮತದಾರರಿದ್ದರು. ಈ ಪೈಕಿ 1,46,404 ಮಂದಿ ಮತ ಚಲಾಯಿಸಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ 3,14,000 ಮತದಾರರ ಪೈಕಿ 1,50,080 ಮಂದಿ ಮತ ಚಲಾಯಿಸಿದ್ದರು. 2013ರ ವಿಧಾನಸಭಾ ಚುನವಣೆಯಲ್ಲಿ 3,68,210 ಮತದಾರರ ಪೈಕಿ 2,26,749 ಮಂದಿ ಮತ ಚಲಾಯಿಸಿದ್ದರು. 2014ರ ಲೋಕಸಭಾ ಚುನಾವಣೆ, 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭೆ ಚುನಾವಣೆಯ ಮತದಾನದ ಕುರಿತು ವಿವರವಾದ ಮಾಹಿತಿ ಹಂಚಿಕೊಂಡರು.

2023ರ ವಿಧಾನಸಭಾ ಚುನಾವಣೆಯಲ್ಲಿ 6,07,135 ಮತದಾರರ ಪೈಕಿ 3,29,841 ಮಂದಿ ಚಲಾಯಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ 6,59,733 ಮತದಾರರ ಪೈಕಿ 3,51,535 ಮಂದಿ ಮತ ಚಲಾಯಿಸಿದ್ದರು. ಪ್ರಸ್ತುತ ಮಹದೇವಪುರ ಕ್ಷೇತ್ರದಲ್ಲಿ 6,80,514 ಮತದಾರರು ಇದ್ದಾರೆ. ಕ್ಷೇತ್ರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಿರುವ ಕಾರಣ ಮತದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 4 ಬಾರಿ ವಿಧಾನಸಭೆ ಮತ್ತು 4 ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 1 ಲಕ್ಷಕ್ಕಿಂತ ಹೆಚ್ಚಿನ ಮತ ಬಂದಿದೆ. ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಮತಗಳಿಕೆ ಪ್ರಮಾಣ ಹೆಚ್ಚಳವಾಗಿದೆ ಎಂದು ಲಿಂಬಾವಳಿ ಅಂಕಿ-ಅಂಶಗಳ ಸಹಿತ ವಿವರಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಿ.ಸಿ.ಮೋಹನ್‌ 69,974 ಮತಗಳ ಅಂತರದಿಂದ ಗೆದ್ದಿದ್ದರು. ಮಹದೇವಪುರ ಕ್ಷೇತ್ರದಲ್ಲಿ 72,559 ಲೀಡ್‌ ಕೊಟ್ಟಿದ್ದೆವು. 2023ರ ಲೋಕಸಭಾ ಚುನಾವಣೆಯಲ್ಲಿ ಪಿ.ಸಿ.ಮೋಹನ್‌ಗೆ 1,14,046 ಲೀಡ್‌ ಕೊಟ್ಟಿದ್ದೇವೆ. ಹೀಗಾಗಿ 32,707 ಮತಗಳ ಅಂತರದಿಂದ ಪಿ.ಸಿ.ಮೋಹನ್‌ ಗೆದ್ದಿದ್ದಾರೆ ಎಂದು ಹೇಳಿದರು.

ಮಾಧ್ಯಮಗಳಿಗೆ ರಾಹುಲ್ ತಪ್ಪು ಮಾಹಿತಿ: ರಾಹುಲ್‌ ಗಾಂಧಿ ಗುರುವಾರ ದೆಹಲಿಯಲ್ಲಿ ಮಾಧ್ಯಮದವರಿಗೆ ಒಂದು ತಪ್ಪು ಮಾಹಿತಿ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಂದಿತ್ತು. ಮಹದೇವಪುರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಗೆ ಲೀಡ್‌ ಗಳಿಸಿ ಗೆದ್ದಿದ್ದಾರೆ ಎಂದಿದ್ದಾರೆ. ಇದು ಸುಳ್ಳು ಎಂದು ಲಿಂಬಾವಳಿ ಪ್ರತಿಪಾದಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಮುಂದಿದ್ದೆವು. ರಾಜಾಜಿನಗರ, ಗಾಂಧಿನಗರ, ಸಿ.ವಿ.ರಾಮನ್‌ ನಗರ, ಮಹದೇವಪುರದಲ್ಲಿ ಬಿಜೆಪಿಗೆ ಲೀಡ್‌ ಸಿಕ್ಕಿದೆ. ಈ ನಾಲ್ಕು ಕ್ಷೇತ್ರಗಳ ಮುನ್ನಡೆಯಿಂದ ನಾವು 32,707 ಮತಗಳ ಅಂತರದಿಂದ ಗೆದ್ದಿದ್ದೇವೆ ಎಂದು ಹೇಳಿದರು. ಮಹದೇವಪುರ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ 2016-17ರಲ್ಲಿ 1,48,743 ಆಸ್ತಿಗಳಿದ್ದವು. ಇದರಿಂದ 361 ಕೋಟಿ ರು. ತೆರಿಗೆ ಬಿಬಿಎಂಪಿಗೆ ಬರುತ್ತಿತ್ತು. 2024-25ರಲ್ಲಿ 3,59,468 ಆಸ್ತಿಗಳಿವೆ. ಇದರಿಂದ ಬಿಬಿಎಂಪಿಗೆ 885 ಕೋಟಿ ರು. ತೆರಿಗೆ ಬರುತ್ತಿದೆ. ನನ್ನ ತೆರಿಗೆ ನನ್ನ ಹಕ್ಕು. ನನ್ನ ಕ್ಷೇತ್ರಕ್ಕೆ ನೀವೇನು ಕೊಟ್ಟಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಮುಂದೊಂದು ದಿನ ಕೇಳುತ್ತೇನೆ ಎಂದು ತಿಳಿಸಿದರು.

ವರುಣಾದಲ್ಲೂ ‘00’ ಮನೆ ನಂಬರ್‌: ರಾಹುಲ್‌ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿ ‘00’ ಮನೆ ಸಂಖ್ಯೆ ಬಗ್ಗೆ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಪಾರ್ಟ್‌ ನಂಬರ್‌-8ರಲ್ಲಿ ‘00’ ಮನೆ ಸಂಖ್ಯೆ ಇದೆ ಎಂದು ಮತದಾರರ ಪಟ್ಟಿ ಪ್ರದರ್ಶಿಸಿದರು. ಹಾಗಾದರೆ ಸಿದ್ದರಾಮಯ್ಯ ಅವರೂ ನಕಲಿ ಅಲ್ಲವೇ? ನಾನು ಹಾಗೆ ಹೇಳಲ್ಲ. ರಾಹುಲ್‌ ಗಾಂಧಿ ಹೇಳುವ ಪ್ರಕಾರ ನಕಲಿ. ಇದು ಒಂದು ಮಾತ್ರವಲ್ಲ, ಸಂಡೂರು, ಮಾನ್ವಿ, ಮಸ್ಕಿ ಸೇರಿ ಹಲವು ಕ್ಷೇತ್ರಗಳಲ್ಲಿ ‘ಝಿರೋ’ ಕಥೆ ಇದೆ ಎಂದ ಅವರು, ಈ ಸಂಬಂಧ ದಾಖಲೆಗಳನ್ನು ಪ್ರದರ್ಶಿಸಿದರು.

ಚಾಮರಾಜಪೇಟೆ, ಶಿವಾಜಿನಗರದಲ್ಲೂ ಡಬಲ್‌ ಎಂಟ್ರಿ: ರಾಹುಲ್‌ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿ ಡಬಲ್‌ ಎಂಟ್ರಿ ಬಗ್ಗೆ ಆರೋಪಿಸಿದ್ದಾರೆ. ಚಾಮರಾಜಪೇಟೆ ಪಾರ್ಟ್ ಸಂಖ್ಯೆ 45, ಪಾರ್ಟ್‌ ಸಂಖ್ಯೆ 47ರಲ್ಲಿ ಆಯಿಷಾ ಬಾನು ಹೆಸರಿದೆ. ಶಿವಾಜಿನಗರದ ಪಾರ್ಟ್ ಸಂಖ್ಯೆ 169, ಪಾರ್ಟ್ ಸಂಖ್ಯೆ 11ರಲ್ಲಿ ರೆಹಮತುಲ್ಲಾ ಹೆಸರಿದೆ ಎಂದು ಮತದಾರರ ಪಟ್ಟಿ ತೋರಿಸಿ ರಾಹುಲ್‌ ಗಾಂಧಿಗೆ ಟಾಂಗ್‌ ನೀಡಿದರು.