ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಪ್ರತಿಷ್ಠಿತ ಗೂಗಲ್ ಕಂಪನಿ ನಮ್ಮ ರಾಜ್ಯ ಬಿಟ್ಟು ಆಂಧ್ರಪ್ರದೇಶಕ್ಕೆ ಹೋಗುವಂತಾಗಿದೆ. ಸರ್ಕಾರ ಪ್ರಗತಿಪರವಾಗಿದ್ದರೆ ನಮ್ಮ ರಾಜ್ಯ ಬಿಟ್ಟು ಯೋಜನೆಗಳು ಹೋಗುವುದಿಲ್ಲ ಎಂದು ಸಂಸದ ಬೊಮ್ಮಾಯಿ ಆರೋಪಿಸಿದರು.

ಹಾವೇರಿ (ಅ.18): ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಪ್ರತಿಷ್ಠಿತ ಗೂಗಲ್ ಕಂಪನಿ ನಮ್ಮ ರಾಜ್ಯ ಬಿಟ್ಟು ಆಂಧ್ರಪ್ರದೇಶಕ್ಕೆ ಹೋಗುವಂತಾಗಿದೆ. ಸರ್ಕಾರ ಪ್ರಗತಿಪರವಾಗಿದ್ದರೆ ನಮ್ಮ ರಾಜ್ಯ ಬಿಟ್ಟು ಯೋಜನೆಗಳು ಹೋಗುವುದಿಲ್ಲ. ಈಗಿನ ಸರ್ಕಾರ ನೀವು ಹೋಗುವುದಿದ್ದರೆ ಹೋಗಿ ಅಂತ ಬೇಜವಾಬ್ದಾರಿ ತೋರುತ್ತಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಷ್ಠಿತ ಸಂಸ್ಥೆ ಅಮೆರಿಕಾದ ಹೊರಗಡೆ ₹ 1.23 ಲಕ್ಷ ಕೋಟಿ ಬಂಡವಾಳ ಹೂಡುವ ಸಂಸ್ಥೆ ರಾಜ್ಯಕ್ಕೆ ಬರಬೇಕಿತ್ತು, ಅದು ಬರದಿರುವುದು ದುರ್ದೈವದ ಸಂಗತಿ. ಕಾರಣ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಎಲ್ಲದಕ್ಕೂ ದರ ಪಟ್ಟಿ ಸಿದ್ಧವಾಗಿದೆ. ಮೂಲ ಸೌಕರ್ಯ ಕುಸಿದು ಬಿದ್ದಿದೆ. ಇಲ್ಲಿ ಸಾಮಾಜಿಕವಾಗಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಪ್ರಕರಣ ಹೆಚ್ಚಾಗಿದೆ. ಹೀಗಾಗಿ ಆಂಧ್ರದಲ್ಲಿ ಅಷ್ಡೊಂದು ಮಾನವ ಸಂಪನ್ಮೂಲ ಅವಕಾಶ ಇಲ್ಲದಿದ್ದರೂ ಆ ಸಂಸ್ಥೆ ಆಂಧ್ರಪ್ರದೇಶದಕ್ಕೆ ಹೋಯಿತು.

ನಾವಿದ್ದಾಗ ಪಾಸ್ಕಾನ್ ಕಂಪನಿ ಬಂದಾಗ ಆಂಧ್ರ ಪ್ರದೇಶ, ತಮಿಳುನಾಡು ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ನಾವು ಎಲ್ಲ ರೀತಿಯ ಸೌಕರ್ಯ ಕೊಟ್ಟು ಅದನ್ನು ಉಳಿಸಿಕೊಂಡಿದ್ದೆವು. ಅದು ಸುಮಾರು ಒಂದು ಲಕ್ಷ ಕೋಟಿ ಬಂಡವಾಳ ಹೂಡಿದೆ‌. ಈಗಾಗಲೇ 30 ಸಾವಿರ ಜನ ಉದ್ಯೋಗ ಪಡೆದಿದ್ದಾರೆ. ಸರ್ಕಾರ ಪ್ರಗತಿಪರವಾಗಿದ್ದರೆ ನಮ್ಮ ರಾಜ್ಯ ಬಿಟ್ಟು ಯೋಜನೆಗಳು ಹೋಗುವುದಿಲ್ಲ. ಈಗಿನ ಸರ್ಕಾರ ನೀವು ಹೋಗೊದಿದ್ದರೆ ಹೋಗಿ ಅಂತ ಬೇಜವಾಬ್ದಾರಿಯಿಂದ ಮಾತನಾಡುವುದು. ಸಿಎಂ ಹಾಗೂ ಸಚಿವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.

ವೈಫಲ್ಯ ಮುಚ್ಚಿಕೊಳ್ಳಲು ಸಂಘಕ್ಕೆ ಅಂಕುಶ

ಆರೆಸ್ಸೆಸ್‌ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲ ನಗರ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಯಂ ಸೇವಕರು ಸೇರುತ್ತಿದ್ದಾರೆ. ಇದರಿಂದ ವಿಚಲಿತರಾಗಿದ್ದಾರೆ. ಪಿಎಫ್‌ಐ, ಎಸ್‌ಡಿಪಿಐ ಇದೆ. ಅವರು ಕೂಡ ಈ ತರದ ಚಟುವಟಿಕೆ ಮಾಡುತ್ತಾರೆ. ಕಾನೂನು ವಿರುದ್ಧ ಕೆಲಸ ಮಾಡುತ್ತಾರೆ. ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದಾಗ ನಾವು ಹತೋಟಿಗೆ ತಂದು ಮುನ್ನೂರು ಜನರನ್ನು ಒಳಗೆ ಹಾಕಿದ್ದೆವು. ಆ ಎಲ್ಲ ಸಮಾಜ ಘಾತಕ ಶಕ್ತಿಗಳಿಗೆ ರಕ್ಷಣೆ ಕೊಡಲು ಸರ್ಕಾರ ಈ ಕೆಲಸ ಮಾಡುತ್ತಿದೆ. ಅದನ್ನು ಮರೆ ಮಾಚಲು ಆರೆಸ್ಸೆಸ್‌ ಮೇಲೆ ದಾಳಿ ಮಾಡುತ್ತಿದ್ದಾರೆ. ಆರೆಸ್ಸೆಸ್‌ ಯಾವಾಗಲೂ ಬಗ್ಗಿಲ್ಲ. ಇದೆಲ್ಲ ನೋಡಿದರೆ ಮತ್ತೆ ಎಮರ್ಜೆನ್ಸಿ ಬರುತ್ತಿದೆ ಎನಿಸುತ್ತಿದೆ‌. ಸರ್ಕಾರಿ ಶಾಲೆಗಳ ಆಟದ ಮೈದಾನದಲ್ಲಿ ಮಕ್ಕಳು ಆಟವಾಡುತ್ತಾರೆ, ರಕ್ಷಣಾ ವೇದಿಕೆ ಕನ್ನಡ ಸಂಘಟನೆಗಳು ಕಾರ್ಯಕ್ರಮ ಮಾಡುತ್ತಾರೆ.

ಅವರೆಲ್ಲ ಅನುಮತಿ ಪಡೆಯಬೇಕಾಗುತ್ತದೆ. ಸಂಘದವರು ಶೇ.70ರಷ್ಟು ಖಾಸಗಿ ಸ್ಥಳದಲ್ಲಿ ಶಾಖೆ ನಡೆಸುತ್ತಾರೆ. ಶೇ. 30ರಷ್ಟು ಕಡೆ ಮಾತ್ರ ಸರ್ಕಾರಿ ಜಾಗದಲ್ಲಿ ನಡೆಯುತ್ತದೆ. ಅದನ್ನು ತಡೆಯಲು ಈ ಸರ್ಕಾರ ಮುಂದಾಗಿದೆ. ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ ಜಾತಿಸ್ಟ್ ಸಿಎಂ ಆಗಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಸಿಎಂ ಸ್ಥಾನ ಉಳಿಸಿಕೊಳ್ಳು ಈ ರೀತಿ ಮಾಡುತ್ತಿದ್ದಾರೆ. ಇವತ್ತೆ ಚುನಾವಣೆ ನಡೆದರೆ ಕಾಂಗ್ರೆಸ್ 25 ಸ್ಥಾನ ಗೆಲ್ಲುವುದು ಕಷ್ಟ ಎಂದು ವಾಗ್ದಾಳಿ ನಡೆಸಿದರು‌. ಸರ್ಕಾರದ ಬಳಿ ದುಡ್ಡಿಲ್ಲ ಅನ್ನುವ ಬದಲು ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ಕಡಿಮೆ ಮಾಡಿ ತಮ್ಮ ಹಣಕಾಸಿನ ದುಸ್ಥಿತಿ ಮುಚ್ಚಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ‌ ಎಂದು ಹೇಳಿದರು.