ನವೆಂಬರ್ ಕ್ರಾಂತಿ ಇಲ್ಲ, ವಾಂತಿ ಇಲ್ಲ, ಭ್ರಾಂತಿ ಇಲ್ಲ. ನೀವೂ ಆರಾಮಾಗಿ ಇರಿ. ನಾವೂ ಆರಾಮಾಗಿ ಇದ್ದೇವೆ. ನೀವು ಅದರ ಬಗ್ಗೆ ಟೆನ್ಶನ್ ತಗೋಬೇಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಬೆಂಗಳೂರು (ಅ.23): ನವೆಂಬರ್ ಕ್ರಾಂತಿ ಇಲ್ಲ, ವಾಂತಿ ಇಲ್ಲ, ಭ್ರಾಂತಿ ಇಲ್ಲ. ನೀವೂ ಆರಾಮಾಗಿ ಇರಿ. ನಾವೂ ಆರಾಮಾಗಿ ಇದ್ದೇವೆ. ನೀವು ಅದರ ಬಗ್ಗೆ ಟೆನ್ಶನ್ ತಗೋಬೇಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ರೀತಿಯ ಪ್ರಗತಿಪರ ಚಿಂತಕರು ಅಂತ ಹೇಳಿದ್ದಾರೆ. ನಾವೂ ಅದನ್ನೇ ಹೇಳುತ್ತೇವೆ. ಅದರಲ್ಲಿ ತಪ್ಪೇನಿದೆ. ಅದರಲ್ಲಿ ಕ್ರಾಂತಿ ಭ್ರಾಂತಿ ಏನು ಇಲ್ಲ. ನನಗೆ ದಯಮಾಡಿ ಈ ವಿಚಾರವನ್ನು ತಿಕ್ಕಿ ತಿಕ್ಕಿ ಕೇಳಬೇಡಿ. ಸಂಪುಟ ಪುನರ್‌ರಚನೆ ವಿಚಾರವಾಗಿ ನಿರ್ಧಾರ ಮಾಡಲು ಹೈಕಮಾಂಡ್ ಇದೆ. ಅತ್ಯುತ್ತಮವಾದ ಗಟ್ಟಿಯಾದ ಹೈಕಮಾಂಡ್ ನಮ್ಮ ಪಕ್ಷದಲ್ಲಿದೆ ಎಂದರು.

Add Asianetnews Kannada as a Preferred SourcegooglePreferred

ಆರ್.ಅಶೋಕ್ ಅವರಿಗೆ ಬೇರೆ ಕೆಲಸ ಏನಿದೆ. ಅವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಅವರು ಕೇವಲ ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಯಾವ ಕೆಲಸ ಕಾರ್ಯಗಳಾಗಿಲ್ಲ ಅನ್ನೋದನ್ನ ಗಮನಕ್ಕೆ ತರಲಿ. ನಮಗಿಂತ ಹೆಚ್ಚಾಗಿ ನವೆಂಬರ್ ಕ್ರಾಂತಿ ಅವರ ನಿದ್ದೆಯನ್ನು ಗೆಡಿಸಿದೆ. ಕೇಂದ್ರ ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಅಂತ ತೋರಿಸಲಿ. ಈ ಹಿಂದೆ ಇದ್ದ ಯುಪಿಎ ಸರ್ಕಾರವೇ ಎಲ್ಲವನ್ನು ಮಾಡಿರೋದು. ರೈತರಿಗೆ ಡ್ಯಾಮ್ ಕಟ್ಟಿದ್ದಾರಾ? ಕೊನೆ ಪಕ್ಷ ಏನು ಮಾಡಿದ್ದಾರೆ ಬಿಜೆಪಿ ಏನು ಅಭಿವೃದ್ಧಿ ಮಾಡಿದ್ದಾರೆ? ಮೆಟ್ರೋ ಮಾಡಿದ್ದು, ನಾವೇ ಡ್ಯಾಮ್ಗಳು ಕಟ್ಟಿದ್ದು ನಾವೇ, ಶಿಲಾನ್ಯಾಸ ಮಾಡಿದ್ದು ನಾವೇ ರೈತರಿಗೆ ಅನುಕೂಲ ಮಾಡಿದ್ದು ನಾವೇ. ನಾವು ಇಟ್ಟ ಹೆಸರುಗಳನ್ನು ಬದಲಾಯಿಸಿದ್ದಾರೆ ಅಷ್ಟೇ ಎಂದು ಹೇಳಿದರು.

ನಿರ್ಮಲ ಭಾರತವನ್ನು ಸ್ವಚ್ಛ ಭಾರತ ಅಂತ ಮಾಡಿದ್ದಾರೆ. ಬಿಜೆಪಿಯವರಿಗೆ ಸತ್ಯವನ್ನು ಹೇಳಿದರೆ ಯಾಕೆ ಮಿರ್ಚಿ ಇಟ್ಟಂತೆ ಆಗುತ್ತಿದೆ. ನಾನು ಕೂಡ ಆರ್‌ಎಸ್‌ಎಸ್ ಬಗ್ಗೆ ಕೇಳುತ್ತೇನೆ. ಆರ್‌ಎಸ್‌ಎಸ್ ದೇಶಭಕ್ತಿಯ ಯಾವ ಕೆಲಸವನ್ನು ಮಾಡಿದೆ? ಸ್ವಾತಂತ್ರಕ್ಕೆ ಹೋರಾಟ ಮಾಡಿದ್ದ ಅಂಬೇಡ್ಕರ್‌ರನ್ನ, ಸಂವಿಧಾನ ಬರೆದ ವ್ಯಕ್ತಿಯನ್ನೇ ವಿರೋಧ ಮಾಡಿದ ಸಂಘಟನೆ ಅದು. ಸ್ವಾತಂತ್ರ ತಂದುಕೊಟ್ಟ ಗಾಂಧಿಯನ್ನು ವಿರೋಧ ಮಾಡಿದ ಸಂಘ. ಆರ್‌ಎಸ್‌ಎಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನೇ ಏರಿಸಲಾಗದಂತ ಸಂಘಟನೆ ಅದು. ಇವರು ದೇಶಭಕ್ತರಾ? ಯಾವ ಆಧಾರದ ಮೇಲೆ ಇದು ದೇಶಭಕ್ತಿ ಇರುವಂತ ಸಂಸ್ಥೆ ಅಂತ ತಿಳಿಸಲಿ. ಅಸಲಿಗೆ ಆದೇಶ ಮಾಡಿದ್ದು ಜಗದೀಶ್ ಶೆಟ್ಟರ್ ಅವರೇ. ಆದೇಶ ಕಾಫಿಯನ್ನು ನಾವೇ ಕ್ಯಾಬಿನೆಟ್ ನಲ್ಲಿ ನೋಡಿದ್ದೇವೆ ಎಂದರು.

ನಾವು ಆರ್‌ಎಸ್‌ಎಸ್ ಅನ್ನ ಬ್ಯಾನ್ ಮಾಡುತ್ತೇವೆ ಅಂತ ಎಲ್ಲಿಯೂ ಹೇಳಿಲ್ಲ. ಸರ್ಕಾರ ಅಭಿವೃದ್ಧಿ ಮಾಡಿಲ್ಲ ಅಂತ ಆರ್‌ಎಸ್‌ಎಸ್‌ನ ಮುನ್ನೆಲೆಗೆ ತಂದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರಲ್ಲದೇ ಬನ್ನಿ ಕೊಪ್ಪಳಕ್ಕೆ ಕರೆದುಕೊಂಡು ಹೋಗುತ್ತೇನೆ. 2 ಸಾವಿರ ಕೋಟಿ ಅಷ್ಟು ಕಾಮಗಾರಿಯನ್ನು ಮಾಡಿದ್ದೇವೆ. ಬಿಜೆಪಿಯವರನ್ನ ಕರೆದಿದ್ದೆ, ಆದರೆ ಅವರೇ ಬರಲಿಲ್ಲ. ಹಿಂದೆ ತಾಲೂಕನ್ನ ಘೋಷಣೆ ಮಾಡಿದ್ದರು. ಆದರೆ ಪ್ರಜಾಸೌಧವನ್ನು ಕಟ್ಟಿಸಲು ಯೋಗ್ಯತೆ ಇಲ್ಲದ ವ್ಯಕ್ತಿಗಳವರು. ನೀವು ಏನು ಮಾಡಿದ್ದೀರಾ ಹೇಳಿ. ಬಡವರು ನೆಮ್ಮದಿಯಿಂದ ಇರಬಾರದು. ಬಡವರು ಎರಡು ಹೊತ್ತು ಊಟ ಮಾಡಬಾರದು ಇದೇ ಅವರ ಉದ್ದೇಶ. ನವೆಂಬರ್ ಸಂಪುಟ ಪುನರ್‌ರಚನೆ ವಿಚಾರವಾಗಿ ಚರ್ಚೆ ಇಲ್ಲ. ಸಂಪುಟದಲ್ಲಿ ನನ್ನನ್ನ ಉಳಿಸಿಕೊಳ್ಳುತ್ತಾರೋ ಇಲ್ಲವೋ ಅದರ ಬಗ್ಗೆಯೂ ಚರ್ಚೆ ಇಲ್ಲ ಎಂದು ತಿಳಿಸಿದರು.

70 ಪ್ರಶಸ್ತಿಗಳನ್ನು ನೀಡಲಾಗುತ್ತೆ

ಇನ್ನು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸದ ವಿಚಾರವಾಗಿ, ಸಾಹಿತಿಗಳು ಮಾಧ್ಯಮದವರ ಮಾಹಿತಿಯನ್ನು ಆಧರಿಸಿ ಕಮಿಟಿ ರಚಿಸಲಾಗಿದೆ. ಅರ್ಜಿ ಕರೆದು ಪ್ರಶಸ್ತಿ ಕೊಡುವ ಬದಲಾಗಿ ಆಯ್ಕೆ ಸಮಿತಿ ಮೂಲಕ ಪ್ರಶಸ್ತಿ ಕೊಡಲು ನಿರ್ಧರಿಸಿದ್ದೇವೆ. ಸಮಿತಿಯ ಸದಸ್ಯರು ಈಗಾಗಲೇ ಸಭೆಯನ್ನು ನಡೆಸಿದ್ದಾರೆ. ಹೈ ಲೆವೆಲ್ ಕಮಿಟಿ ಮೀಟಿಂಗ್ ನಲ್ಲಿ ನಿರ್ಧರಿಸಲಾಗಿದೆ. 70ನೇ ವರ್ಷದ ರಾಜ್ಯೋತ್ಸವ ಹಿನ್ನೆಲೆ 70 ಪ್ರಶಸ್ತಿಗಳನ್ನು ನೀಡಲಾಗುತ್ತೆ ಎಂದರು. ಸಾಮಾಜಿಕ ಶೈಕ್ಷಣಿಕ ಗಣತಿ ವಿಚಾರವಾಗಿ, ಈ ತಿಂಗಳ 19ರವರೆಗೂ ಸಮಯ ನೀಡಲಾಗಿತ್ತು. ಆದರೆ ಈಗ 30ನೇ ತಾರೀಕಿನವರೆಗೂ ವಿಸ್ತರಣೆ ಮಾಡಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶೇ.95ರಷ್ಟು ಗಣತಿ ಮುಗಿಸಲಾಗಿದೆ. ಬೀದರ್, ಧಾರವಾಡ ರಾಮನಗರದಲ್ಲಿ ಪೂರ್ಣ ಆಗಿರಲಿಲ್ಲ. ಎಲ್ಲಾ ಜಿಲ್ಲೆಗಳ ಜೊತೆ ವಿಶೇಷವಾಗಿ ಬೆಂಗಳೂರನ್ನು ಗಮನಿಸಿ ಗಣತಿ ಮುಗಿಸಲಾಗುತ್ತೆ ಎಂದು ತಂಗಡಗಿ ಹೇಳಿದರು.