ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿಯಾಗುವ ಯೋಗ ಸಮೀಪಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು ಭವಿಷ್ಯ ನುಡಿದಿದ್ದಾರೆ.

ಯಾದಗಿರಿ (ಸೆ.02): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿಯಾಗುವ ಯೋಗ ಸಮೀಪಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು ಭವಿಷ್ಯ ನುಡಿದಿದ್ದಾರೆ. ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿ ಆಗುವ ಯೋಗ ಸಮೀಪ ಬಂದಿದೆ,

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ನಮ್ಮ ಭಾಗದ ದೊಡ್ಡ ನೇತಾರ, ಪ್ರಧಾನಿಮಂತ್ರಿ ಸಮಾನ ಅನ್ನುವ ದೊಡ್ಡಮಟ್ಟದಲ್ಲಿ ಅವರು ಬೆಳೆದಿದ್ದಾರೆ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು ಇದ್ದಾರೆ. ಇವತ್ತು ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಳಿತ ಸ್ಥಾನದಲ್ಲಿ ಖರ್ಗೆಯವರು ಕುಳಿತಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಮುಖಾಂತರ ನಾನು ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬ ಪ್ರತಿಜ್ಞೆ ತೊಟ್ಟಿದ್ದೇನೆ. ಸೂರ್ಯ- ಚಂದ್ರ ಹುಟ್ಟೋದು ಎಷ್ಟು ಸತ್ಯವೋ, ಮಲ್ಲಿಕಾರ್ಜುನ ಖರ್ಗೆಯವರ ಮುಖಾಂತರ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವುದು ಅಷ್ಟೇ ಸತ್ಯ ಎಂದರು. ಇನ್ನು, ತಮಗೆ ಎಂಎಲ್ಸಿ ಸ್ಥಾನ ತಪ್ಪಿದ ವಿಚಾರವಾಗಿ ಕೇಳಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಹಿಂದಿನ ಬಾಗಿಲಿನಿಂದಾಗಲೀ, ಮುಂದಿನ ಬಾಗಿಲಿನಿಂದಾಗಲೀ ಎಂಎಲ್ಸಿ ಆಗುವುದಿಲ್ಲ, ನಾನು ಜನರೆದುರು ಯುದ್ಧಭೂಮಿಯಲ್ಲಿ (ಚುನಾವಣೆ) ಸೋತಿದ್ದೇನೆ,

ಜನರೆದುರು 2028ರಲ್ಲಿ ಯುದ್ಧಭೂಮಿಯಲ್ಲಿ ಮತ್ತೇ ಗೆದ್ದು ಡಿಸಿಎಂ ಆಗಿ ಬರ್ತಿನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು 25 ವರ್ಷ ಎಂಎಲ್ಎ ಆಗಿದೀನಿ, 10 ವರ್ಷ ಮಿನಿಸ್ಟರ್ ಆಗಿದ್ದೀನಿ, 10 ವರ್ಷ ಕ್ಯಾಬಿನೆಟ್ ಸಿನಿಯಾರಿಟಿ ಇದೆ. ನನಗೆ ತಾಯಿ ಇಲ್ಲ, ತಂದೆ ಇಲ್ಲ, ಮಕ್ಕಳೂ ಇಲ್ಲ. ಸಮಾಜ ಸೇವೆ ಬಿಟ್ಟರೆ ಏನೂ ಇಲ್ಲ ಎಂದರು. ಧರ್ಮಸ್ಥಳಕ್ಕೆ ಕಾಂಗ್ರೆಸ್‌ನಿಂದ ಕೆಟ್ಟ ಹೆಸರು ಬರುತ್ತಿದೆ ಎಂಬ ಆರೋಪಗಳಿಗೆ ಮಾತನಾಡಿದ ಬಾಬುರಾವ್‌, ಕಾಂಗ್ರೆಸ್ ನವರು ಯಾವುದೇ ಕಾರಣಕ್ಕೂ ಕೆಟ್ಟ ಹೆಸರು ಮಾಡಲ್ಲ, ಧರ್ಮಸ್ಥಳ ವಿಚಾರ ಮುಖ್ಯಮಂತ್ರಿ ಗಮನದಲ್ಲಿದೆ, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆಂದು ಹೇಳಿದರು.