ಕುರಿಗಾಹಿಯು ನ್ಯಾಯಿಕ ನೆರವನ್ನು ಪಡೆಯುವುದರಿಂದ ತಡೆಯುವ ವ್ಯಕ್ತಿಗೆ 2 ವರ್ಷಗಳ ಸೆರೆವಾಸ, ₹50 ಸಾವಿರ ದಂಡ ಸೇರಿ ವಿವಿಧ ಶಿಕ್ಷೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ವಿಧಾನಸಭೆ (ಆ.22): ರಾಜ್ಯದಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಕ್ಷೇಮಾಭಿವೃದ್ಧಿಗೆ ಕ್ರಮ ಹಾಗೂ ಅವರ ವಿರುದ್ಧ ದೌರ್ಜನ್ಯಗಳ ಅಪರಾಧ ಎಸಗುವುದನ್ನು ತಡೆಗಟ್ಟುವ ಸಲುವಾಗಿ ಮಂಡಿಸಿದ್ದ 2025ನೇ ಸಾಲಿನ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧದ ರಕ್ಷಣೆ) ವಿಧೇಯಕಕ್ಕೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ವಿಧೇಯಕ ಪರ್ಯಾಲೋಚನೆಗೆ ಮಂಡಿಸಿದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ‘ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 242 ಕುರಿಗಾಹಿಗಳ ದೌರ್ಜನ್ಯಕ್ಕೆ ಸಂಬಂಧಿಸಿದ ಕೇಸು ದಾಖಲಾಗಿವೆ.
ಅವರು ವಲಸೆ ಹೋದಾಗ ಕುರಿತು ಹೊತ್ತುಕೊಂಡು ಹೋಗುವುದು, ದೌರ್ಜನ್ಯ ನಡೆಸುವುದು, ಅತ್ಯಾಚಾರ ಎಸಗುವ ಕೃತ್ಯಗಳು ನಡೆದಿವೆ. ಹೀಗಾಗಿ, ಇಂತಹವುಗಳನ್ನು ತಡೆಯಲು ಹಾಗೂ ಅವರಿಗೆ ಭದ್ರತೆ ಒದಗಿಸಲು ವಿಧೇಯಕ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು. ಜತೆಗೆ ಫಲಾನುಭವಿಯಾಗಿ ನೋಂದಣಿ ಮಾಡಿಕೊಂಡವರಿಗೆ ಕೈಗೆಟಕುವ ಬೆಲೆಯಲ್ಲಿ ವಸತಿಗಾಗಿ ಭೂಮಿ ಮಂಜೂರಾತಿ, ಜೀವವಿಮೆ, ಆರೋಗ್ಯವಿಮೆ, ಪಶುವಿಮೆ, ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳು, ಕೌಶಲ್ಯಗಳ ಉನ್ನತೀಕರಣ, ಆಹಾರ ಭದ್ರತೆ, ಕಲ್ಯಾಣ ಕಾರ್ಯಕ್ರಮ ನೀಡಲಾಗುವುದು. ಅಲ್ಲದೆ ಜಾನುವಾರುಗಳಿಗೆ ಲಸಿಕೆ, ಚಿಕಿತ್ಸೆ, ಕುರಿಗಾಹಿಗಳ ಉತ್ಪನ್ನಗಳಿಗೆ ಮಾರಾಟ ಬೆಂಬಲ, ನಷ್ಟದ ಸಂದರ್ಭದಲ್ಲಿ ನಷ್ಟ ಪರಿಹಾರ ಮೊದಲಾದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತದೆ ಎಂದರು.
ಕುರಿಗಾಹಿಗೆ ನೀಡುವ ಕಿರುಕುಳಕ್ಕೆ ಶಿಕ್ಷೆ ವಿವರ: ಅಲೆಮಾರಿ ಕುರಿಗಾಹಿ ಯಾವುದೇ ಕಾನೂನಾತ್ಮಕ ಆಧಾರವಿಲ್ಲದೆ ಯಾವುದೇ ಸಾರ್ವಜನಿಕ ಸ್ವತ್ತು, ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿಗೆ (ಮೀಸಲು ಅರಣ್ಯ ಹೊರತುಪಡಿಸಿ) ಪ್ರವೇಶಿಸುವುದನ್ನು ನಿರಾಕರಿಸಿದರೆ 1 ವರ್ಷ ಜೈಲು ಮತ್ತು ₹50 ಸಾವಿರ ದಂಡ, ಉದ್ದೇಶಪೂರ್ವಕವಾಗಿ ಕುರಿಗಾಹಿಯನ್ನು ಅವಮಾನಿಸಿದರೆ, ನಿಂದಿಸಿದರೆ ಆರು ತಿಂಗಳಿಂದ 5 ವರ್ಷದವರೆಗೆ ವಿಸ್ತರಿಸಬಹುದಾದ ಸೆರೆವಾಸ ಮತ್ತು ₹1 ಲಕ್ಷ ದಂಡ, ಕುರಿಗಾಹಿ ಮರಣಕ್ಕೆ ಕಾರಣವಾಗುವ ವ್ಯಕ್ತಿಗೆ ಕ್ರಿಮಿನಲ್ ಕಾನೂನಿನಡಿ ಕ್ರಮ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಎಂಎಸ್ ಕಾಯ್ದೆಯಡಿ ದಂಡನೆ, ಕುರಿಗಾಹಿಯು ನ್ಯಾಯಿಕ ನೆರವನ್ನು ಪಡೆಯುವುದರಿಂದ ತಡೆಯುವ ವ್ಯಕ್ತಿಗೆ 2 ವರ್ಷಗಳ ಸೆರೆವಾಸ, ₹50 ಸಾವಿರ ದಂಡ ಸೇರಿ ವಿವಿಧ ಶಿಕ್ಷೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ವಿಧೇಯಕ ಕುರಿತು ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕುರಿಗಾಹಿಗಳಿಗೆ ಮಳೆಯಲ್ಲಿ ರಕ್ಷಣೆಗೆ ಟೆಂಟ್ ಕೊಡಬೇಕು. ಕುರಿಗಾಹಿಗಳ ಜತೆ ಹೆಣ್ಣು ಮಕ್ಕಳು ಬರುತ್ತಾರೆ. ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಅವರಿಗೆ ಕಾನೂನು ಸೌಲಭ್ಯ ಒದಗಿಸಬೇಕು ಎಂದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸದಸ್ಯರಾದ ಬಿ.ಬಿ.ಚಿಮ್ಮನಕಟ್ಟಿ, ಟಿ.ಬಿ.ಜಯಚಂದ್ರ, ಶಿವಲಿಂಗೇಗೌಡ ಸೇರಿ ಹಲವರು ವಿಧೇಯಕ ಬೆಂಬಲಿಸಿ ಮಾತನಾಡಿದರು.
ಹೊರ ರಾಜ್ಯದಿಂದ ಜಾನುವಾರುಗಳನ್ನು ತಂದು ನಮ್ಮ ರಾಜ್ಯದ ಕಾಡಿನಲ್ಲಿ ಮೇಯಿಸುವುದನ್ನು ನಿಷೇಧಿಸಲು ಹಾಗೂ ಇದೇ ವೇಳೆ ನಮ್ಮ ರಾಜ್ಯದ ಕುರಿಗಾಹಿಗಳಿಗೆ ತೊಂದರೆ ನೀಡದಂತೆ ಅಧಿಕಾರಿಗಳಗೆ ಸೂಚಿಸಲಾಗಿದೆ.
-ಈಶ್ವರ್ ಖಂಡ್ರೆ, ಅರಣ್ಯ ಸಚಿವ.
