ಜಯದೇವ ಹೃದ್ರೋಗ ಸಂಸ್ಥೆ ಮತ್ತು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಉಪ ಕೇಂದ್ರಗಳನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ (ಆ.14): ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಅಧೀನದಲ್ಲಿರುವ ಮೂಡಶೆಡ್ಡೆಯಲ್ಲಿನ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆಯ ಆವರಣದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಮತ್ತು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಉಪ ಕೇಂದ್ರಗಳನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಕಾಂಗ್ರೆಸ್ನ ಐವನ್ ಡಿಸೋಜಾ ಗಮನ ಸೆಳೆಯುವ ಪ್ರಸ್ತಾಪ ಮಾಡಿ ಮೈಸೂರು ಮತ್ತು ಕಲಬುರಗಿ ಮಾದರಿಯಲ್ಲಿ ಎರಡು ಕೇಂದ್ರಗಳನ್ನು ಸ್ಥಾಪಿಸಿದರೆ ರಾಜ್ಯದ 10ರಿಂದ 15 ಜಿಲ್ಲೆಗಳು ಹಾಗೂ ಕೇರಳ ರಾಜ್ಯದ ಬಡ ರೋಗಿಗಳಿಗೆ ಸಹಾಯವಾಗುತ್ತದೆ ಮನವಿ ಮಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆ ಅವಶ್ಯ: ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ರೋಗ ನಿರ್ಣಯ ತಂತ್ರಜ್ಞಾನ, ಡಿಜಿಟಲ್ ಆರೋಗ್ಯ, ಟೆಲಿಮೆಡಿಸಿನ್ಗಳು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ವೈದ್ಯಕೀಯ ಸೇವೆಗಳ ಕಾರ್ಯದಕ್ಷತೆ ಹೆಚ್ಚಲು, ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಮತ್ತು ಹೆಚ್ಚು ನಿಖರವಾಗಿ ಗುಣಮಟ್ಟದ ಸೇವೆ ಒದಗಿಸಲು ಆಧುನಿಕ ತಂತ್ರಜ್ಞಾನದ ಬಳಕೆ ಅವಶ್ಯಕವಾಗಿದೆ. ಲಭ್ಯವಿರುವ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಜೊತೆಗೆ ನಮ್ಮ ವ್ಯವಸ್ಥೆಗೆ ಪೂರಕವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಅಳವಡಿಸಿಕೊಳ್ಳಬೇಕು ಎಂದರು.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ವಿವರಿಸಿರುವ ಜಾಗತಿಕ ಆದ್ಯತೆಗಳ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಜನರಿಗೆ ಉತ್ತಮ ಆರೋಗ್ಯ, ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕೇವಲ ಗುರಿಗಳಲ್ಲ. ಅವು ಪ್ರತಿಯೊಬ್ಬ ನಾಗರಿಕನ ಗೌರವಯುತ ಜೀವನಕ್ಕೆ ನೀಡಬೇಕಾದ ಮೂಲಭೂತ ಹಕ್ಕುಗಳಾಗಿವೆ. ರಾಜೀವ್ ಗಾಂಧಿ ವಿವಿಯು ನಾವೀನ್ಯತೆಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ಸಾರ್ವಜನಿಕರ ಅಗತ್ಯತೆಗಳನ್ನು ಪೂರೈಸುತ್ತಿದೆ ಎಂದು ಶರಣಪ್ರಕಾಶ್ ಪಾಟೀಲ್ ವಿವರಿಸಿದರು.
ಅವದೂತ ವಿನಯ್ ಗುರೂಜಿ ಮಾತನಾಡಿ, ಒತ್ತಡರಹಿತ ಜೀವನಕ್ಕೆ ಆಧ್ಯಾತ್ಮಿಕತೆ ಅಗತ್ಯ. ಇದರಿಂದ ಮನಸ್ಸು, ದೇಹ ಚಟುವಟಿಕೆಯಿಂದ ಇದ್ದು, ಗುರಿ ಸಾಧನೆಗಳಿಗೆ ದಾರಿ ಮಾಡಿ ಕೊಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಭಗವಾನ್, ಪೌಷ್ಟಿಕ ತಜ್ಞ ಡಾ. ಗೌರಿ ರೊಕ್ಕಮ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
