ಸಿಎಂ ಸ್ಥಾನಕ್ಕೆ ಎಲ್ಲರಿಗೂ ಆಸೆ ಇದ್ದೆ ಇರುತ್ತದೆ. ಆಸೆ ಪಟ್ಟವರಿಗೆಲ್ಲ ಕಡಿವಾಣ ಹಾಕಲು ಸಾಧ್ಯವಿಲ್ಲ. ನಾನಂತೂ ಮುಖ್ಯಮಂತ್ರಿ ವಿಚಾರವಾಗಿ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.

ರಾಮನಗರ (ಅ.29): ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲರಿಗೂ ಆಸೆ ಇದ್ದೆ ಇರುತ್ತದೆ. ಆಸೆ ಪಟ್ಟವರಿಗೆಲ್ಲ ಕಡಿವಾಣ ಹಾಕಲು ಸಾಧ್ಯವಿಲ್ಲ. ನಾನಂತೂ ಮುಖ್ಯಮಂತ್ರಿ ವಿಚಾರವಾಗಿ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಪರೋಕ್ಷವಾಗಿ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು. ನಗರದ ಶಾಂತಿನಗರ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಸಾಕಷ್ಟು ಮಂದಿ ಹಿರಿಯ ನಾಯಕರಿದ್ದಾರೆ. ಒಬ್ಬೊಬ್ಬರದು ಒಂದೊಂದು ಬಗೆಯ ಅಭಿಪ್ರಾಯಗಳಿರುತ್ತವೆ. ನಾನು ನಮ್ಮ ನಾಯಕರ ಪರವಾಗಿದ್ದೇನೆ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಕ್ಷದ ವರಿಷ್ಠರು ಹೇಳಿದರೆ 5 ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಪಕ್ಷ ಲಂಗು ಲಗಾಮು ಹಾಕಿದೆ. ಯಾವುದೇ ರೀತಿಯ ಹೇಳಿಕೆ, ಚರ್ಚೆ‌ ಮಾಡದಂತೆ ಸೂಚನೆ ನೀಡಿದೆ. ಹಾಗಾಗಿ ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ದಲಿತ ಸಿಎಂ ಬಗ್ಗೆ ಪರಮೇಶ್ವರ್ ಹಾಗೂ ಮುನಿಯಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ದೊಡ್ಡವರು, ಪಕ್ಷದ ಹಿರಿಯ ನಾಯಕರು. ಮುನಿಯಪ್ಪ, ಮಹದೇವಪ್ಪ, ಪರಮೇಶ್ವರ್ ಎಲ್ಲರೂ ನಮ್ಮ ನಾಯಕರೇ. ಆದರೆ, ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ನಮ್ಮ ಪಕ್ಷದಲ್ಲಿ ಸಾಕಷ್ಟು ಮಂದಿ ಹಿರಿಯ ನಾಯಕರು ಇದ್ದಾರೆ. 7ರಿಂದ 8 ಬಾರಿ ಗೆದ್ದಿರುವ ಎಂ.ಬಿ.ಪಾಟೀಲ್, ದೇಶಪಾಂಡೆ ಸೇರಿ ಹಲವು ನಾಯಕರಿದ್ದಾರೆ. ಕೇಳಿರುವ ಎಲ್ಲರೂ ಕಾಂಗ್ರೆಸ್ ಶಾಸಕರೆ ಅಲ್ಲವೇ, ಸಿಎಂ ಸ್ಥಾನವನ್ನು ಬೇರೆ ಪಕ್ಷದವರು ಕೇಳಿಲ್ಲ ಎಂದು ಹೇಳಿದರು. ಯತೀಂದ್ರ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ನಾಯಕ ಅಗತ್ಯ ಎಂದು ಹೇಳಿದ್ದರು. ಜಾರಕಿ ಹೊಳಿ ಅಹಿಂದ ಸಮುದಾಯಕ್ಕೆ ಮುಂದೆ ನಾಯಕತ್ವ ವಹಿಸುತ್ತಾರೆಂದು ಹೇಳಿದ್ದಾರೆಯೇ ಹೊರತು ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿಲ್ಲ. ಯತೀಂದ್ರ ಹೇಳಿಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಹೊಸದಾಗೇನು ದೆಹಲಿಗೆ ಹೋಗುತ್ತಿಲ್ಲ

ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ನೀಡುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಈಗ ಹೊಸದಾಗೇನು ದೆಹಲಿಗೆ ಹೋಗುತ್ತಿಲ್ಲ. ಅವರು ಕೆಪಿಸಿಸಿ ಅಧ್ಯಕ್ಷರು ಮತ್ತು ಪ್ರಭಾವಿ ಖಾತೆ ಸಚಿವರಾಗಿದ್ದಾರೆ. ಪಕ್ಷದ ಸಂಘಟನೆ ಹಾಗೂ ವಿವಿಧ ಕೆಲಸಕ್ಕೆ ದೆಹಲಿಗೆ ಹೋಗುತ್ತಾರೆ. ವರಿಷ್ಠರನ್ನು ಭೇಟಿ ಮಾಡಿ ಪಕ್ಷದ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಹೊಸದೇನಲ್ಲ ಎಂದರು. ಬೆಂಗಳೂರು ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿದೆ. ಅದರ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಬೇಕು. ರಾಜಕೀಯವಾಗಿಯೂ ಭೇಟಿ ಮಾಡುತ್ತಿರುತ್ತಾರೆ.

ಹಾಗಾಗಿ ದೆಹಲಿಗೆ ಹೋಗುತ್ತಾರೆಯೇ ಹೊರತು ಬೇರೇನೂ ಇಲ್ಲ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ನಿಜಾಮುದ್ದೀನ್ ಷರೀಫ್ , ಅಜ್ಮತ್ , ಗಿರಿಜಮ್ಮ, ಪವಿತ್ರ, ಜಯಲಕ್ಷ್ಮಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ರಂಜೀತ್ , ಯುವ ಮುಖಂಡ ಗುರುಪ್ರಸಾದ್, ವಕೀಲ ಹನುಮಂತರಾಜು ಮತ್ತಿತರರು ಹಾಜರಿದ್ದರು.