ನಾನು ಕೆಎಸ್‌ಎಸಿಎ ಸದಸ್ಯ. ಅದರ ಕಾರ್ಯದರ್ಶಿ ನನ್ನ ಬಾಲ್ಯ ಸ್ನೇಹಿತ. ಆರ್‌ಸಿಬಿ ತಂಡವನ್ನು ಸ್ವಾಗತಿಸಲು ನಾನು ಏರ್‌ಪೋರ್ಟ್‌ಗೆ ಹೋಗಿದ್ದೆ. ಬಾವುಟ ಹಿಡಿದಿದ್ದೆ. ಕಪ್‌ಗೆ ಮುತ್ತಿಕ್ಕಿದೆ.

ವಿಧಾನಸಭೆ (ಆ.22): ನಾನು ಕ್ರಿಕೆಟ್‌ ಅಭಿಮಾನಿಯಾಗಿ ಆರ್‌ಸಿಬಿ ಕಪ್‌ಗೆ ಮುತ್ತಿಕ್ಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮರ್ಥಿಸಿಕೊಂಡಿದ್ದಾರೆ. ಆರ್‌ಸಿಬಿ ಕಾಲ್ತುಳಿತ ಸಂಬಂಧ ಗೃಹ ಸಚಿವರ ಉತ್ತರದ ಬಳಿಕ ಮಾತನಾಡಿದ ಅವರು, ನಾನು ಕೆಎಸ್‌ಎಸಿಎ ಸದಸ್ಯ. ಅದರ ಕಾರ್ಯದರ್ಶಿ ನನ್ನ ಬಾಲ್ಯ ಸ್ನೇಹಿತ. ಆರ್‌ಸಿಬಿ ತಂಡವನ್ನು ಸ್ವಾಗತಿಸಲು ನಾನು ಏರ್‌ಪೋರ್ಟ್‌ಗೆ ಹೋಗಿದ್ದೆ. ಬಾವುಟ ಹಿಡಿದಿದ್ದೆ. ಕಪ್‌ಗೆ ಮುತ್ತಿಕ್ಕಿದೆ. ಬೇರೆ ರಾಜ್ಯಗಳಲ್ಲಿ ಏನೇನಾಗಿದೆ ಎಂಬುದು ನನಗೂ ಗೊತ್ತಿದೆ. ಆದರೆ, ಈಗ ಎಲ್ಲವನ್ನೂ ಹೇಳುವುದಿಲ್ಲ ಎಂದರು.

ನಾನು ಗೃಹ ಸಚಿವ ಪರಮೇಶ್ವರ್‌ ಗರಡಿಯಲ್ಲಿ ಬೆಳೆದಿದ್ದೇನೆ. ಅವರಂತೆ ನಾನು ಉತ್ತರ ಕೊಡಬಲ್ಲೇ ಎಂದು ಬಿಜೆಪಿ ಸದಸ್ಯರನ್ನು ಕಿಚಾಯಿಸಿದರು. ಇದೇ ವೇಳೆ ಆರ್‌ಎಸ್‌ಎಸ್‌ನ ಸದವತ್ಸಲೇ ಗೀತೆಯನ್ನು ಹೇಳಿ ಈಗ ಹೆಚ್ಚಿನ ಚರ್ಚೆ ಬೇಡ. ರಾಜ್ಯದ ಬೇರೆ ಕಡೆ ಏನೇನಾಗಿದೆ ಎಂಬುದು ನನಗೆ ಗೊತ್ತಿದೆ. ಆರ್‌ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರನ್ನು ನಾನು ದೂಷಿಸುವುದಿಲ್ಲ. ಈಗಾಗಲೇ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದರು. ಇದಕ್ಕೂ ಮುನ್ನ ವಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಕೆಲ ಬಿಜೆಪಿ ಸದಸ್ಯರು ಆರ್‌ಸಿಬಿ ವಿಜಯೋತ್ಸವ ದಿನ ಆರ್‌ಸಿಬಿ ಬಾವುಟ ಹಿಡಿದು, ಕಪ್‌ಗೆ ಮುತ್ತಿಕ್ಕಿದ ವಿಚಾರ ಪ್ರಸ್ತಾಪಿಸಿ ಡಿ.ಕೆ.ಶಿವಕುಮಾರ್‌ ಅವರ ಕಾಲೆಳೆದರು.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಹೂಳು ಇದೆ: ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್‌ಎನ್‌ಎಲ್) ವ್ಯಾಪ್ತಿಯ ಜಲಾಶಯಗಳಲ್ಲಿ ಹೈಡ್ರೋಗ್ರಾಫಿಕ್ ಸರ್ವೇ ಕಾರ್ಯ ಕೈಗೊಂಡು ಹೂಳಿನ ಪರಿಮಾಣವನ್ನು ಅಳೆಯಲಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರು, ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಡಿಸಿಎಂ, ನಿಗಮ ವ್ಯಾಪ್ತಿಯ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ, ವಾಟೆಹೊಳೆ ಹಾಗೂ ಮಾರ್ಕೋನಹಳ್ಳಿ ಜಲಾಶಯಗಳ ಹೂಳಿನ ಪ್ರಮಾಣ ಅಳೆಯಲು ಹೈಡ್ರೋಗ್ರಾಫಿಕ್ ಸರ್ವೇ ಕಾರ್ಯ ಕೈಗೊಳ್ಳಲಾಗಿರುತ್ತದೆ ಎಂದಿದ್ದಾರೆ.

ಬ್ಯಾತಿಮೆಟ್ರಿ (Bathymetry) ಎಂಬ ವಿಧಾನದ ಬಳಕೆಯಿಂದ ಹೈಡ್ರೋಗ್ರಾಫಿಕ್ ಸರ್ವೇ ಕಾರ್ಯವನ್ನು ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜಸಾಗರದ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದಿಂದ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಜಲಾಶಯಗಳಲ್ಲಿನ ಪ್ರಸ್ತುತ ಹಾಗೂ ಮೊದಲನೇ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಕಂಡುಬರುವ ವ್ಯತ್ಯಾಸದಿಂದ ಶೇಖರಣೆಗೊಂಡ ಹೂಳಿನ ಪ್ರಮಾಣ ಲೆಕ್ಕಿಸಬಹುದಾಗಿರುತ್ತದೆ ಎಂದು ವಿವರಿಸಿದ್ದಾರೆ.