ಭಾರತ ಜಾಗತಿಕ ಮಟ್ಟದಲ್ಲಿ ಬಹುಪಕ್ಷೀಯ ಪಾಲುದಾರಿಕೆ ಹೊಂದುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಜಪಾನ್‌ ಮತ್ತು ಚೀನಾ ದೇಶಗಳ ಪ್ರವಾಸದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಸೆ.04): ಅಮೆರಿಕದ ಸುಂಕ ಸಮರದ ನಡುವೆಯೂ ಭಾರತ ಜಾಗತಿಕ ಮಟ್ಟದಲ್ಲಿ ಬಹುಪಕ್ಷೀಯ ಪಾಲುದಾರಿಕೆ ಹೊಂದುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಜಪಾನ್‌ ಮತ್ತು ಚೀನಾ ದೇಶಗಳ ಪ್ರವಾಸದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಗೌಡರು, ಜಪಾನ್ ಮತ್ತು ಚೀನಾಕ್ಕೆ ನಿಮ್ಮ ಭೇಟಿಯ ಸುದ್ದಿಯನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅಮೆರಿಕವು ಅವಿವೇಕದ ಮತ್ತು ಅನ್ಯಾಯದ ಸುಂಕ ಯುದ್ಧ ಪ್ರಾರಂಭಿಸಿದ ನಂತರ ನೀವು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಹೊರಟಿರುವುದು ಎಲ್ಲ ಭಾರತೀಯರಂತೆ ನನಗೆ ಸಮಾಧಾನ ತಂದಿದೆ ಎಂದಿದ್ದಾರೆ.

ಎರಡೂ ದೇಶಗಳ ನಿಮ್ಮ ಭೇಟಿ ಅತ್ಯಂತ ಯಶಸ್ವಿಯಾಯಿತು. ನೀವು ನಡೆಸಿದ ಮಾತುಕತೆ ಮತ್ತು ಅನುಸರಿಸಿದ ಹೊಸ ಉಪಕ್ರಮಗಳ ಲಾಭವನ್ನು ಭಾರತವು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ಧರ್ಮವು ನಮ್ಮ ಕಡೆಗಿದೆ ಮತ್ತು ನಮ್ಮ ರಾಷ್ಟ್ರವು ಜಗತ್ತಿನಲ್ಲಿ ಬೇರೆ ಯಾವುದೇ ರಾಷ್ಟ್ರಕ್ಕಿಂತ ಆರ್ಥಿಕ, ಜನಸಂಖ್ಯೆಯಲ್ಲಿ ಅಗಾಧತೆಯನ್ನು ಹೊಂದಿದೆ. ಪ್ರಜಾಪ್ರಭುತ್ವದ ಪ್ರಯೋಜನಗಳ ಸಂಯೋಜನೆಯನ್ನು ಎಲ್ಲೆಡೆಗೂ ವಿಸ್ತರಿಸುತ್ತಿರುವುದರಿಂದ ಅಮೆರಿಕ ಕೂಡ ತ್ವರಿತವಾಗಿ ಅಥವಾ ತಡವಾಗಿ ಆದರೂ ನಮ್ಮ ಬಳಿಗೆ ಬರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಹೊಸ ವಿಶ್ವದ ಆರಂಭದ ಸಂಕೇತ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು‌ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ನಿಮ್ಮ ಛಾಯಾಚಿತ್ರಗಳು ಮತ್ತು ವೀಡಿಯೊಗಳು ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ಪ್ರವಾಹದಂತೆ ತುಂಬಿವೆ. ಅವು ರಾಷ್ಟ್ರಗಳ ಮುಖ್ಯಸ್ಥರ ನಡುವಿನ ದಿನನಿತ್ಯದ ಸ್ನೇಹ ಮತ್ತು ಸಂಬಂಧ ಮೀರಿದವು. ಇದು ಜಾಗತಿಕ ಮಟ್ಟದಲ್ಲಿ ಹೊಸ ಜಾಗೃತಿ ಪ್ರತಿಬಿಂಬಿಸುತ್ತದೆ. ಬಹುಶಃ ಭಾರತವನ್ನು ಜಾಗತಿಕ ಸಮೃದ್ಧಿ ಮತ್ತು ಶಾಂತಿಯ ಮಧ್ಯದಲ್ಲಿ ಇರಿಸುವ ಹೊಸ ವಿಶ್ವದ ಆರಂಭವನ್ನು ಸಂಕೇತಿಸುತ್ತದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.