ಗಾಂಧೀಜಿ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಂದೇ. ಆದರೆ ಬಿಜೆಪಿ ಸಿದ್ಧಾಂತ ಬೇರೆ. ಆದರೂ, ಬಿಜೆಪಿಯವರ ಬೆಳವಣಿಗೆಗೆ ಗಾಂಧೀಜಿ ಮತ್ತು ಕಾಂಗ್ರೆಸ್‌ ಪಕ್ಷವೇ ಆಸರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು (ಅ.03): ಗಾಂಧೀಜಿ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಂದೇ. ಆದರೆ ಬಿಜೆಪಿ ಸಿದ್ಧಾಂತ ಬೇರೆ. ಆದರೂ, ಬಿಜೆಪಿಯವರ ಬೆಳವಣಿಗೆಗೆ ಗಾಂಧೀಜಿ ಮತ್ತು ಕಾಂಗ್ರೆಸ್‌ ಪಕ್ಷವೇ ಆಸರೆ. ಅವರು ಪ್ರತಿಭಟನೆ ಮಾಡಬೇಕಾದರೂ ಗಾಂಧಿ ಪ್ರತಿಮೆ ಮುಂದೆ ನಿಲ್ಲುತ್ತಾರೆ, ಗ್ಯಾರಂಟಿ ಸೇರಿ ನಮ್ಮ ಕಾರ್ಯಕ್ರಮಗಳನ್ನು ನಕಲು ಮಾಡಿಕೊಂಡೇ ತಮ್ಮ ಪಕ್ಷ ಕಟ್ಟಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮೊದ ಮೊದಲು ನಮ್ಮ ಕಾರ್ಯಕ್ರಮಗಳನ್ನು ಟೀಕೆ ಮಾಡುತ್ತಾರೆ. ನಂತರ ಅವುಗಳನ್ನೇ ಚುನಾವಣೆಗಳಲ್ಲಿ ನಕಲು ಮಾಡುತ್ತಾರೆ.

ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಅನೇಕ ಜನೋಪಯೋಗಿ ಕಾಯ್ದೆ, ಕಾರ್ಯಕ್ರಮಗಳನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಇವುಗಳೆಲ್ಲವುಗಳ ಬಗ್ಗೆ ಬಿಜೆಪಿ, ಜೆಡಿಎಸ್‌ ಎಷ್ಟೇ ಟೀಕಿಸಿದರೂ ಅವುಗಳಲ್ಲಿ ಯಾವ ಬದಲಾವಣೆ ಮಾಡಲೂ ಸಾಧ್ಯವಾಗಿಲ್ಲ ಎಂದರು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಇದು ಕಾಂಗ್ರೆಸ್‌ ಆಡಳಿತದ ತಾಕತ್ತು ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌, ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌ಗೌಡ, ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಸಾಧು ಕೋಕಿಲ ಮತ್ತಿತರರು ಹಾಜರಿದ್ದು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

224 ಕ್ಷೇತ್ರಗಳಲ್ಲೂ ಶೀಘ್ರ ಗಾಂಧಿ ಜ್ಯೋತಿ ಮೆರವಣಿಗೆ

ಮಹಾತ್ಮಾ ಗಾಂಧಿ ಅವರ ಸ್ವರೂಪ ಭಾರತಕ್ಕೆ ದೀಪವಾಗಿದೆ. ಹಾಗಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಗಾಂಧಿ ಜ್ಯೋತಿ ಮೆರವಣಿಗೆ ಮಾಡುವ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್‌ ಹೇಳಿದರು. ಗಾಂಧೀಜಿ ಅವರನ್ನು ಸ್ಮರಿಸಿ, ಅವರ ಆಶಯಗಳನ್ನು ಪಾಲಿಸೋಣ. ಮಹಾತ್ಮ ಗಾಂಧೀಜಿ ಅವರ ಕನಸಿನ ಭಾರತ ನಿರ್ಮಾಣ ಮಾಡೋಣ. ಇದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಅವರ ಅನುಪಸ್ಥಿತಿಯಲ್ಲಿ ಇದನ್ನು ಪ್ರಕಟಿಸುವುದು ಸರಿಯಲ್ಲ. ಅವರ ಸಮ್ಮುಖದಲ್ಲೇ ಶೀಘ್ರ ಈ ಕಾರ್ಯಕ್ರಮ ಆರಂಭಿಸಲಾಗುವುದು.

ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗಾಂಧಿ ಜ್ಯೋತಿ ಮೆರವಣಿಗೆ ಬಗ್ಗೆ ಪಕ್ಷದ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಲು ಜಿ.ಸಿ ಚಂದ್ರಶೇಖರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿರುವವರು ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ವಹಿಸಿಕೊಂಡು ತಮ್ಮ ಶಕ್ತಿ ಪ್ರದರ್ಶನ ಮಾಡಬೇಕು. ಅಧ್ಯಕ್ಷರಾಗಿ ಆಯ್ಕೆಯಾಗಿರುವವರು ಕೇವಲ ಅಧಿಕಾರ ನಡೆಸುವುದು ಮಾತ್ರವಲ್ಲ, ಜಿಲ್ಲಾ ಕಾಂಗ್ರೆಸ್, ಪಕ್ಷದ ಮುಖ್ಯ ಘಟಕಗಳ ಜೊತೆ ಸಮನ್ವಯತೆ ಸಾಧಿಸಿ ಈ ಕಾರ್ಯಕ್ರಮ ಮಾಡಬೇಕು. ಕಾಂಗ್ರೆಸ್ ಸಂಸ್ಥಾಪನಾ ದಿನದ ವೇಳೆಗೆ ಅದು ಮತ್ತೆ ನಮ್ಮ ಬಳಿಗೆ ಮರಳಲಿದೆ. ಎರಡು ತಿಂಗಳ ಅವಧಿಯಲ್ಲಿ ಈ ಕಾರ್ಯಕ್ರಮ ಮುಗಿಯಬೇಕು ಎಂದರು.