ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಇತ್ತೀಚಿನ ಹೇಳಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆರ್‌ಎಸ್‌ಎಸ್ ಗೀತೆ ಪ್ರಸ್ತಾಪ ವಿವಾದಕ್ಕೆ ಕ್ಷಮೆ ಕೇಳಲು ಸಿದ್ಧ ಎಂದಿದ್ದಾರೆ. ತಮ್ಮ ರಾಜಕೀಯ ಹೋರಾಟ, ಸಿದ್ಧಾಂತಗಳ ಅಧ್ಯಯನ ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆಯೂ ವಿವರಿಸಿದರು.

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಇತ್ತೀಚಿನ ತಮ್ಮ ಹೇಳಿಕೆ ಕುರಿತ ವಿವಾದಕ್ಕೆ ಸ್ಪಷ್ಟನೆ ನೀಡಿದರು. ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ಆರ್ ಎಸ್ ಎಸ್ ಗೀತೆ ಪ್ರಸ್ತಾಪ‌ದ ವಿಚಾರವಾಗಿ “ನನ್ನ ಹೇಳಿಕೆಯಿಂದ ಕ್ಷಮೆ ಕೇಳಬೇಕು ಅಂತಿದ್ದರೆ ಕ್ಷಮೆಗೆ ಸಿದ್ದನಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಸಿದ್ದಾಂತಗಳ ಬಗ್ಗೆ ತಿಳಿದಿದ್ದೇನೆ

ಬಿಜೆಪಿ ನಾಯಕರು ಮಾತಾಡಿದಾಗ, ಅವರ ಸಿದ್ದಾಂತದ ಅರಿವು ನನಗೆ ಇದೆ ಅಂತ ಕಾಲೆಳೆದೆ. ಸಂಸದೀಯ ವ್ಯವಸ್ಥೆ ಯಲ್ಲಿ, ನಾನು ಅಸೆಂಬ್ಲಿ ಯಲ್ಲಿ ಆಚಾರ ವಿಚಾರ ತಿಳಿಸಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡಿದವನು ಹೀಗಾಗಿ ಯಾರಿಂದಲೂ ಪಾಠದ ಅಗತ್ಯ ಇಲ್ಲ. ನನಗೆ ಗಾಂಧಿ ಕುಟುಂಬಕ್ಕೆ ‌ಭಕ್ತ ಮತ್ತು ಭಗವಂತನ ಸಂಬಂಧ. ಅವರ ಬಲಿದಾನ, ಆಡಳಿತ ಮಾರ್ಗದರ್ಶನ ಪಡೆದುಕೊಂಡು ಕೆಲಸ ಮಾಡಿದ್ದೇನೆ. ಸಾಂದರ್ಭಿಕವಾಗಿ ನಾನು ೨೦೦೮ ರಲ್ಲಿ ಪೊಲಿಟಿಕಲ್ ಸೈನ್ಸ್ ಡಿಗ್ರಿ ಪಡೆದಿದ್ದೇನೆ. ಎಲ್ಲಾ ಪಾರ್ಟಿಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಕಮ್ಯುನಿಸ್ಟ್, ಟಿಡಿಪಿ, ಬಿಜೆಪಿ , ಜೆಡಿಎಸ್ ಬಗ್ಗೆ ತಿಳಿದಿದ್ದೇನೆ. ಅವರ ಸಿದ್ದಾಂತಗಳ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಕಾನ್ಫರೆನ್ಸ್ ಗೆ ಸಹ ಹೋಗಿದ್ದೇನೆ. ಅವರ ಶಿಸ್ತು ಕಂಡು ಬೆರಗಾಗಿದ್ದೇನೆ. ನೃಪತುಂಗ ರಸ್ತೆಯಲ್ಲಿರುವ ಆರ್ ಬಿ ಐ ಎದುರು ಆರ್ ಎಸ್ ಎಸ್ ಬಿಲ್ಡಿಂಗ್ ಇದೆ. ಕೋಟ್ಯಾಂತರ ರೂ ಬಾಡಿಗೆ ಬರುತ್ತದೆ. ಒಬ್ಬ ಲೀಡರ್ ಆಗಿ ತಿಳಿದುಕೊಂಡಿದ್ದೇನೆ.

ತಿಹಾರ್ ಜೈಲಿನ ದಿನ ನೆನೆದ ಡಿಕೆಶಿ

ನನ್ನ ಇತಿಹಾಸ, ಬದ್ಧತೆಯನ್ನು ಅನುಮಾನ ಮಾಡಿದರೆ, ಅವರಷ್ಟು ಮೂರ್ಖರು ಯಾರೂ ಇಲ್ಲ. ನನ್ನ ಹೋರಾಟ ಬಹಳ ಇದೆ. ಯಾರು ಮ್ಯಾಚ್ ಮಾಡಲು ಆಗಲ್ಲ. ವಿಲಾಸ್ ರಾವ್ ಸರ್ಕಾರದ ಪತನದ ವೇಳೆ ಪಕ್ಷದ ಕೆಲಸ ಮಾಡಿದೆ. ಆಗ ನಾನು ಜಿಂಕೆ ಮಾಂಸ ಹಂಚಿದೆ ಅಂತ ಸುದ್ದಿ ಮಾಡಿದ್ದರು. ನಾನು ಜೈಲಿಗೆ ಹೋಗಿ ಹೊರ ಬಂದಿದ್ದೇನೆ. ಬಹಳ ಜನ ಖುಷಿ ಪಟ್ಟರು, ಬಹಳ ಜನ ಬೇಸರ ಮಾಡಿಕೊಂಡರು. ನನಗೆ ಜವಾಬ್ದಾರಿ ನೀಡಿದ್ದಾರೆ. ಅಂದಿನಿಂದ ನಿದ್ರೆ ಮಾಡಿಲ್ಲ. ತಿಹಾರ್ ಜೈಲಿನಿಂದ ಬಿಡುಗಡೆ ಆದೆ. ನಂತರ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ.

ಡಿಕೆಶಿ ತಮ್ಮ ಹೋರಾಟದ ಅನುಭವವನ್ನು ನೆನಪಿಸಿಕೊಂಡು, “ನಾನು ಜೈಲಿಗೆ ಹೋಗಿದ್ದೇನೆ, ತಿಹಾರ್ ಜೈಲಿನಲ್ಲೂ ಶಿಕ್ಷೆ ಅನುಭವಿಸಿದ್ದೇನೆ. ಒಂದು ಕುರ್ಚಿಯೂ ಕೊಡದ 10x10 ಅಡಿ ಕೊಠಡಿಯಲ್ಲಿ ನಾನು ಇದ್ದೆ. ಒಂದು ಕುರ್ಚಿ ಸಹ ಕೊಡಲಿಲ್ಲ. ಅದನ್ನು ನಾನು ಈಗ ಮಾತಾಡಲ್ಲ. ನನ್ನ ಮೇಲೆ ಇಡಿ ಕೇಸು ಹಾಕಿ ಜೈಲಿಗೆ ಕಳುಹಿಸಿದರು, ಆದರೆ ಆ ಕೇಸು ಬಳಿಕ ಡಿಸ್ಮಿಸ್ ಆಯಿತು. ಇಂತಹ ಹೋರಾಟವನ್ನು ಯಾರೂ ಮ್ಯಾಚ್ ಮಾಡಲು ಸಾಧ್ಯವಿಲ್ಲ,” ಎಂದರು.

ಮಿತ್ರ ಪಕ್ಷಕ್ಕೆ ಬೇಸರ ಆಗಿದ್ದರೆ ಕ್ಷಮೆ‌ ಕೇಳಲು ಸಿದ್ಧ

ನಾನು ಬಿಜೆಪಿ ಬಗ್ಗೆ ಮಾತಾಡುವಾಗ, ಭೂಮಿ ಗೆ ಪ್ರಾರ್ಥನೆ ಮಾಡ್ತೀರಾ ಅಂತ ಹೇಳುವಾಗ ಮಾತಾಡಿದೆ. ಕಟ್ ಆ್ಯಂಡ್ ಪೆಸ್ಟ್ ಮಾಡಿದ್ರು. ದೊಡ್ಡ ದೊಡ್ಡವರು ಮಾತಾಡಿದ್ದಾರೆ.‌ ಬಹಳ ಜನ ಸಲಹೆ ಕೊಟ್ಟಿದ್ದಾರೆ. ಮಾಧ್ಯಮ ದಲ್ಲಿ ಮಾತಾಡಬೇಡಿ. ಪಾರ್ಟಿ ಆಫೀಸ್ ಗೆ ಬನ್ನಿ. ಯಾರಿಗೂ ನೋವು ಮಾಡುವ ಉದ್ದೇಶದಿಂದ ಮಾತಾಡಿಲ್ಲ. ನಾನು ‌ಕ್ಷಮೆ ಕೇಳಬೇಕು ಅಂತಿದ್ದರೆ ಕ್ಷಮೆಗೆ ಸಿದ್ದನಿದ್ದೇನೆ. ನನ್ನ ಹೇಳಿಕೆಯಿಂದ ನಮ್ಮ ಮಿತ್ರ ಪಕ್ಷಕ್ಕೆ ಬೇಸರ ಆಗಿದ್ದರೆ, ಕ್ಷಮೆ‌ ಕೇಳಲು ಸಿದ್ಧ. ಪಾಸಿಂಗ್ ರೆಪರೆನ್ಸ್ ಇದು. ನಾನು ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ನಲ್ಲಿ ಗಟ್ಟಿಯಾಗಿ ನಿಂತು ರಾಜಕಾರಣ ಮಾಡಿದ್ದೇನೆ. ನಾನು ಕಾಂಗ್ರೆಸ್ ಗೆ ಬದ್ದ, ಕಾಂಗ್ರೆಸ್ ನಲ್ಲಿ ಹುಟ್ಟಿದ್ದೇನೆ. ಕಾಂಗ್ರೆಸ್ ನಲ್ಲೇ ಸಾಯ್ತೇನೆ.

ಯಾವ ಧರ್ಮ ವಾದರೂ ಭಕ್ತಿ ಒಂದೇ

ನಾನು ಕಮ್ಯುನಿಸ್ಟ್ ಬಗ್ಗೆ, ಚಾಣಕ್ಯ ನೀತಿ ಬಗ್ಗೆ ಮಾತಾಡಬಲ್ಲೆ. ನಾನು ಯಾರನ್ನೂ ಹರ್ಟ್ ಮಾಡಿಲ್ಲ. ಎಲ್ಲಾ ಧರ್ಮದ ಬಗ್ಗೆ ನನಗೆ ಗೊತ್ತು. ಯಾವ ಧರ್ಮ ವಾದರೂ ಭಕ್ತಿ ಒಂದೇ. ಎಲ್ಲರಿಗೂ ಹೇಳ್ತೇನೆ. ಇದರಲ್ಲಿ ರಾಜಕಾರಣ ಮಾಡಿದರೂ ಪರವಾಗಿಲ್ಲ. ನನ್ನ ಕೆಲಸ ಮಾಡ್ತೇನೆ ಮಾಡ್ತಾ ಇರ್ತೇನೆ. ಇಲ್ಲಿಗೆ ತೆರೆ ಎಳೆಯುತ್ತೇನೆ. ನನಗೆ ಯಾರು ಕೇಳಲಿಲ್ಲ. ರಾಹುಲ್ ಕೇಳಲಿಲ್ಲ. ಹರಿಪ್ರಸಾದ್ ಗೂ ಕ್ಷಮೆ ಕೇಳೋಣ ಬಿಡಿ. ನಾನು ಎಲ್ಲೂ ಎಡವಿಲ್ಲ. ತಿಳ್ಕೋಬಾರದಾ. ನಾನು ಎನಾದ್ರೂ ಹೊಗಳಿದ್ನಾ? ನಿಮ್ಮ ಚಾನೆಲ್ ಐಡಿಯಾಲಜಿ ಬೇರೆ ಇರಬಹುದು. ನನ್ನ ಹೇಳಿಕೆ‌ ಬಗ್ಗೆ ಯಾರು ಪ್ರಶ್ನೆ ಮಾಡಿಲ್ಲ.

ಮಾತು ಬಿಡದ ಮಂಜುನಾಥ. ಕಾಸು ಬಿಡದ ತಿಮ್ಮಪ್ಪ

ಮಾಜಿ ಸಚಿವ ರಾಜಣ್ಣ ಅವರ ಸಲಹೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅವರ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸುತ್ತೇನೆ ಎಂದರು. ಇನ್ನು ಸಾಪ್ಟ್ ಹಿಂದುತ್ವವೇ ನಿಮಗೆ ಮುಳುವಾಯ್ತಾ...? ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ನಾನು ಬೆಳಿಗ್ಗೆ ಮಂಜುನಾಥನ ಬೊಟ್ಟು ಇಟ್ಕೊಂಡು ಬಂದಿದ್ದೇನೆ. ಮಾತು ಬಿಡದ ಮಂಜುನಾಥ. ಕಾಸು ಬಿಡದ ತಿಮ್ಮಪ್ಪ. ನಾನು ಬೆಳಿಗ್ಗೆ ಎದ್ರೆ ಅಜ್ಜಯ್ಯನ ಪೂಜೆ ಮಾಡಿ ಬರ್ತೇನೆ. ಈಗಲೂ ನಾಮ ಹಾಕಿಕೊಂಡು ಬಂದಿದ್ದೇನೆ. ನನ್ನ ಧರ್ಮ ಬಿಡಲ್ಲ ಎಂದರು.