ಜಾತಿ ಗಣತಿ ಸಮೀಕ್ಷೆಗೆ ಒಪ್ಪದ ಇನ್ಫೋಸಿಸ್ ಸುಧಾಮೂರ್ತಿ ಹಾಗೂ ನಾರಾಯಣ್ ಮೂರ್ತಿ ವಿಚಾರವಾಗಿ, ಇನ್ಫೋಸಿಸ್‌ನವರು ಏನು ಬಹಳ ಬೃಹಸ್ಪತಿಗಳಾ? ಇದು ಹಿಂದುಳಿದ ವರ್ಗದ ಜಾತಿ ಸಮೀಕ್ಷೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು (ಅ.17): ಬಿಹಾರ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಬಿಹಾರದಲ್ಲಿ ನಮ್ಮ ಮೈತ್ರಿ ಒಕ್ಕೂಟ ಗೆಲ್ಲುವು ಪಡೆಯುವ ಸಾಧ್ಯತೆ ಇದೆ. ನನ್ನ ಪ್ರಚಾರದ ಅಗತ್ಯ ಇದ್ರೆ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂತರ ಮಾತನಾಡಿದ ಅವರು, ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ ಬ್ರಾಂತಿಯೂ ಇಲ್ಲ. ಕ್ರಾಂತಿ ಕ್ರಾಂತಿ ಎಂದು ಹೇಳುವವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಸುಮ್ಮನೆ ಏನೇನೊ ಹೇಳುತ್ತಾರೆ. ಮಾಧ್ಯಮದವರು ಆ ಹೇಳಿಕೆಗಳಿಗೆ ಪ್ರಚಾರ ಕೊಡುವುದನ್ನ ನಿಲ್ಲಿಸಲಿ. ಆಗ ಅವರೇ ಸುಮ್ಮನಾಗುತ್ತಾರೆ ಎಂದು ತಿಳಿಸಿದರು.

ಜಾತಿ ಗಣತಿ ಸಮೀಕ್ಷೆಗೆ ಒಪ್ಪದ ಇನ್ಫೋಸಿಸ್ ಸುಧಾಮೂರ್ತಿ ಹಾಗೂ ನಾರಾಯಣ್ ಮೂರ್ತಿ ವಿಚಾರವಾಗಿ, ಇನ್ಫೋಸಿಸ್‌ನವರು ಏನು ಬಹಳ ಬೃಹಸ್ಪತಿಗಳಾ? ಇದು ಹಿಂದುಳಿದ ವರ್ಗದ ಜಾತಿ ಸಮೀಕ್ಷೆ ಅಲ್ಲ. ಎಲ್ಲಾ ಜಾತಿಗಳ ಸಮೀಕ್ಷೆ. ಇದನ್ನ ಅರ್ಥ ಮಾಡಿಕೊಳ್ಳದಿದ್ದರೆ ನಾವು ಏನು ಮಾಡುವುದು. ಇದು ಅಜ್ಞಾನವೋ ಉದ್ದೇಶ ಪೂರ್ವಕವೊ ಅವರಿಗೆ ಗೊತ್ತು. ಮೇಲ್ಜಾತಿಯವರು ಗೃಹ ಜ್ಯೋತಿ ಪಡೆಯುತ್ತಿಲ್ವಾ. ಮೇಲ್ಜಾತಿ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಓಡಾಡುತ್ತಿಲ್ವಾ. ಇದು ಕೂಡ ಅದೇ ರೀತಿ. ಎಲ್ಲಾ ಜಾತಿಯವರಿಗೆ ಮಾಡುತ್ತಿರುವ ಸಮೀಕ್ಷೆ ಎಂದು ಹೇಳಿದರು.

ಗುತ್ತಿಗೆದಾರರ ಸಂಘದಿಂದ ಕಮಿಷನ್ ಆರೋಪ ವಿಚಾರವಾಗಿ, ಅದು ಸತ್ಯವಾಗಿದ್ರೆ ಅವರಿಗೆ ಕೋರ್ಟ್‌ಗೆ ಹೋಗುವುದಕ್ಕೆ ಹೇಳಿ. ಯಾರೋ ಇದನ್ನ ಅವರ ಬಳಿ ಹೇಳಿಸುತ್ತಿದ್ದಾರೆ. ಐಟಿ ಕಂಪನಿಗಳು ಆಂಧ್ರ ಪಾಲಾದ ವಿಚಾರವಾಗಿ, ಅಯಾ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜ್ಯಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಕಂಪನಿ ಬೇರೆ ರಾಜ್ಯಕ್ಕೆ ಹೋದ ಕೂಡಲೇ ಇಲ್ಲಿನ ವ್ಯವಸ್ಥೆ ಸರಿ ಇಲ್ಲ ಎಂದು ಹೇಳುವುದು ತಪ್ಪು. ಹೂಡಿಕೆಗಳ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಹಾಗಾದರೆ ಅವರೆಲ್ಲ ಯಾಕೆ ನಮ್ಮಲ್ಲಿ ಉಳಿದುಕೊಂಡರು ಎಂದರು.

ಆರ್‌ಎಸ್‌ಎಸ್‌ಗೆ ಮಾತ್ರ ಅನ್ವಯ ಅಲ್ಲ

ಆಂಧ್ರ ಐಟಿ ಸಚಿವರ ಟ್ವೀಟ್ ವಿಚಾರವಾಗಿ, ಇದೆಲ್ಲಾ ನಮಗೆ ಗೊತ್ತಿಲ್ಲ.ಇದನ್ನ ಯಾರೋ ಸೃಷ್ಟಿ ಮಾಡುತ್ತಿರಬಹುದು ಎಂದರಲ್ಲದೇ 5 ವರ್ಷ ನಮ್ಮ ತಂದೆ ಸಿಎಂ ಆಗಿರುತ್ತಾರೆ ಎಂಬ ಪುತ್ರನ ಹೇಳಿಕೆ ವಿಚಾರವಾಗಿ, ಅವನನ್ನೇ ಉಳಿದ ವಿಚಾರ ಕೇಳಿಕೊಳ್ಳಿ ಎಂದರು. ಇನ್ನು ಸರ್ಕಾರಿ ಶಾಲೆ, ಕಚೇರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿರ್ಬಂಧ ವಿಚಾರವಾಗಿ, ಇದು ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಅನ್ವಯ ಅಲ್ಲ. ಎಲ್ಲ ಖಾಸಗಿ ಸಂಘ ಸಂಸ್ಥೆಗಳಿಗೂ ಅನ್ವಯ ಆಗುತ್ತದೆ. ಈ ಸುತ್ತೋಲೆ ಹೊರಡಿಸಿರೋದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ, ಬಿಜೆಪಿಯವರೇ ಮಾಡಿ, ಈಗ ವಿರೋಧ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.