ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಮಾಜಿ ಸಂಸದ ರಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿಯ 'ಅಶ್ವಮೇಧ ಯಾಗದ ಕುದುರೆ'ಯನ್ನು ಕಟ್ಟಿಹಾಕುವುದಾಗಿ ಸವಾಲು ಹಾಕಿದ್ದಾರೆ. 40 ವರ್ಷಗಳಿಂದ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಬಾರಿಯೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ (ಅ.08): ನಾನು ಡಿಸಿಸಿ ಬ್ಯಾಂಕ್ನಲ್ಲಿ 40 ವರ್ಷದಿಂದಾ ಇದ್ದೇನೆ. ಇದರಲ್ಲಿ 25 ವರ್ಷ ನಾನೇ ಅಧ್ಯಕ್ಷನಾಗಿದ್ದೇನೆ. ಪ್ರತಿಬಾರಿಯಂತೆ ಈ ಬಾರಿಯೂ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಅಗ್ರೆಸಿವ್ ಆಗಿದ್ದೇನೆ. ಬಾಲಚಂದ್ರ ರಕಿಹೊಳಿ ಅವರ 'ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕುತ್ತೇವೆ' ಎಂದು ಮಾಜಿ ಸಂಸದ ರಮೇಶ್ ಕತ್ತಿ ಸವಾಲು ಹಾಕಿದರು.
ಬೆಳಗಾವಿ ಜಿಲ್ಲಾ ಸಹಕಾರಿ ಕೇಂದ್ರ (DCC) ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ವೇಳೆ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಕರೆತಂದಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ರಮೇಶ್ ಕತ್ತಿ, 'ನಾನೇನು ಶಕ್ತಿ ಪ್ರದರ್ಶನ ಮಾಡಿಲ್ಲ. ನಮ್ಮ ಪಿಕೆಪಿಎಸ್ ಸದಸ್ಯರು ಬ್ಯಾಂಕ್ ನೋಡುತ್ತೇವೆ ಎಂದು ಕೇಳಿದರು. ಹಾಗಾಗಿ, ಕರೆದುಕೊಂಡು ಬಂದಿದ್ದೇನೆ, ಅದನ್ನು ಬಿಟ್ಟರೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ತಮ್ಮ ವಿರುದ್ಧ ಬಾಲಚಂದ್ರ ಜಾರಕಿಹೊಳಿ 40 ಸದಸ್ಯರೊಂದಿಗೆ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಭೆ ಮಾಡಲು ಎಲ್ಲರೂ ಸ್ವತಂತ್ರರು. ನಾನು ಐದಾರು ಬಾರಿ ಸಭೆ ಮಾಡಿದ್ದೇನೆ. ಬ್ಯಾಂಕ್ ನೋಡಬೇಕು ಅಂದಿದಕ್ಕೆ ನಿರ್ದೇಶಕರನ್ನು ಕರೆದುಕೊಂಡು ಬಂದಿರುವೆ. ಈ ಬಗ್ಗೆ ನನ್ನ ಉತ್ತರವೂ ಇಲ್ಲ, ಪತ್ರನೂ ಇಲ್ಲ ಎಂದು ಹೇಳಿದರು..
ಡಿಸಿಸಿ ಬ್ಯಾಂಕ್ನಲ್ಲಿ ಕತ್ತಿ ಸುದೀರ್ಘ ಸೇವೆ ದಾಖಲೆ
ಡಿಸಿಸಿ ಬ್ಯಾಂಕ್ ಜೊತೆಗಿನ ತಮ್ಮ ನಂಟು ಮತ್ತು ಸುದೀರ್ಘ ಸೇವೆಯನ್ನು ಸ್ಮರಿಸಿದ ರಮೇಶ್ ಕತ್ತಿ, 'ಈಗ 9ನೇ ಬಾರಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಸುದೀರ್ಘವಾಗಿ 40 ವರ್ಷ ಡಿಸಿಸಿ ಬ್ಯಾಂಕಿನಲ್ಲಿದ್ದೇನೆ. 10 ವರ್ಷ ನಿರ್ದೇಶಕ, 5 ವರ್ಷ ಉಪಾಧ್ಯಕ್ಷ ಮತ್ತು 25 ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವೆ. ಇದು ಇಡೀ ರಾಜ್ಯದಲ್ಲೆ ಒಂದು ರೀತಿ ದಾಖಲೆ ಆಗಿದೆ' ಎಂದು ಹೆಮ್ಮೆಯಿಂದ ಹೇಳಿದರು. ಇದು ಜಿಲ್ಲೆಯ ಜನರ, ಸಹಕಾರಿಗಳ ಮತ್ತು ಸಿಬ್ಬಂದಿಗಳ ಸಹಕಾರದಿಂದ ಸಾಧ್ಯವಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.
ಚುನಾವಣೆಯಲ್ಲಿ ಆಕ್ರಮಣಕಾರಿ ನಿಲುವು:
ನಾನು ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರದಲ್ಲೂ ಅಗ್ರೆಸ್ಸಿವ್ ಆಗಿಯೇ ಇದ್ದೇನೆ. ಇಂದು ಹುಕ್ಕೇರಿ ವಿದ್ಯುತ್ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಗಿಸಿ ಇಲ್ಲಿಗೆ ಬಂದಿದ್ದೇನೆ. ವಿದ್ಯುತ್ ಸಂಘದ ಚುನಾವಣೆ ಬಳಿಕ ಇಲ್ಲೂ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತೇವೆ. ಸಂಸ್ಥೆಯ ಅಧಿಕಾರ ಒಳ್ಳೆಯವರ ಕೈಯಲ್ಲಿ ಇರಬೇಕು. ಯಾರ ಕೈಗೆ ಅಧಿಕಾರ ಕೊಟ್ಟರೆ ಒಳ್ಳೆಯದು ಎನ್ನುವುದನ್ನು ಜಿಲ್ಲೆಯ 50 ಲಕ್ಷ ಜನರು ನಿರ್ಣಯಿಸುತ್ತಾರೆ. ಬ್ಯಾಂಕ್ ಸಂಕಷ್ಟದಲ್ಲಿದ್ದಾಗ ನಾನು ಅಧ್ಯಕ್ಷನಾಗಿದ್ದೆ, ಈಗ ಸುಸ್ಥಿತಿಯಲ್ಲಿದೆ ಎಂದು ನಾಯಕತ್ವವನ್ನು ಸಮರ್ಥಿಸಿಕೊಂಡರು.
ಡಿಸಿಸಿ ಬ್ಯಾಂಕ್ನ ನಾಯಕತ್ವ ತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ಆಯಾ ತಾಲ್ಲೂಕಿನ ಸುಪುತ್ರರು ನಾಯಕತ್ವ ವಹಿಸಿಕೊಳ್ಳುತ್ತಾರೆ. ಜನರು ನನ್ನ ನಾಯಕತ್ವ ಬಯಸಿದರೆ ತಪ್ಪು ಅಂತಾ ಹೇಳೋಕೆ ಆಗಲ್ಲ. ಪ್ರಚಾರಕ್ಕೆ ಯಾರೇ ಕರೆದರೂ ಹೋಗಿ ಬರುತ್ತೇನೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಸ್ಪಷ್ಟಪಡಿಸಿದರು.
