ಉಡುಪಿ(ಸೆ.06): ಹಿಜಾಬ್ ಪ್ರಕರಣವನ್ನು ಮುಂದಿಟ್ಟುಕೊಂಡು, ಉಡುಪಿ ಜಿಲ್ಲೆಯ ಶಿಕ್ಷಕರೊಬ್ಬರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ತಡೆಹಿಡಿದಿರುವ ರಾಜ್ಯ ಸರ್ಕಾರ, ಹೈಕೋರ್ಟ್ ಆದೇಶವನ್ನು ಪಾಲಿಸುತ್ತದೋ ಅಥವಾ ತನ್ನ ಅಜೆಂಡಾವನ್ನು ಜಾರಿಗೊಳಿಸುತ್ತದೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಗ್ರಹಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಾಪುರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಎಂಬವರಿಗೆ ಶಿಕ್ಷಕ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ಘೋಷಿಸಿತ್ತು. ಅವರು ರಾಜ್ಯ ಸರ್ಕಾರದ ಆದೇಶ ಮತ್ತು ಅದಕ್ಕೆ ಪೂರಕವಾಗಿದ್ದ ಹೈಕೋರ್ಟ್‌ನ ಆದೇಶದಂತೆ ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆಯನ್ನು ಪಾಲಿಸಿದ್ದರು. ಈಗ ಅದೇ ಕಾರಣಕ್ಕೆ ಅವರಿಗೆ ಘೋಷಣೆ ಮಾಡಲಾಗಿದ್ದ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ. ಇದು ದಿಗ್ಭ್ರಮೆಗೆ ಕಾರಣವಾಗಿದೆ ಎಂದವರು ಹೇಳಿದರು.

Udupi: ಉತ್ತಮ ಶಿಕ್ಷಕ ಪ್ರಶಸ್ತಿಗೂ ತಟ್ಟಿದ ಹಿಜಾಬ್‌ ವಿವಾದ, ಅವಾರ್ಡ್‌ ಘೋಷಿಸಿದ ಬಳಿಕ ತಡೆಹಿಡಿದ ಸರ್ಕಾರ!

ಶಿಕ್ಷಕರೊಬ್ಬರಿಗೆ ಘೋಷಿಸಿದಂತಹ ಪ್ರಶಸ್ತಿಯನ್ನು ತಡೆ ಹಿಡಿಯುವುದು ಶಿಕ್ಷಕರ ವೃಂದಕ್ಕೆ ಮತ್ತು ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಮಾಡಿರುವ ಅಪಮಾನ, ಈ ತಪ್ಪನ್ನು ಸರಪಡಿಸಿಕೊಳ್ಳಿ, ತಡೆ ಹಿಡಿದಿರುವ ಪ್ರಶಸ್ತಿಯನ್ನು ಪುನಃ ಘೋಷಿಸಿ ಮತ್ತು ಗೌರವದಿಂದ ಅದನ್ನು ಪ್ರದಾನ ಮಾಡಿ ಎಂದು ಕೋಟ ಅವರು ರಾಜ್ಯದ ಶಿಕ್ಷಣ ಸಚಿವ ಮತ್ತು ಮುಖ್ಯಮಂತ್ರಿ ಅವರಿಗೆ ಆಗ್ರಹಿಸಿದರು.

ಈ ಪ್ರಾಂಶುಪಾಲರು 2 ವರ್ಷಗಳ ಹಿಂದೆ ಸರ್ಕಾರದ ಆದೇಶದಂತೆ ತಮ್ಮ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರನ್ನು ಗೇಟಿನ ಬಳಿ ತಡೆದಿದ್ದರು. ಈಗ ಅದೇ ಕಾರಣಕ್ಕೆ ಸರ್ಕಾರ ಅವರಿಗೆ ತಾನೇ ಘೋಷಿಸಿದ್ದ ರಾಜ್ಯ ಪ್ರಶಸ್ತಿಯನ್ನು ತಡೆಹಿದಿದು ವಿವಾದವನ್ನು ಹುಟ್ಟು ಹಾಕಿದೆ.

ಸಂಸ್ಕೃತ ಕಲಿಯದಿದ್ದರೆ ಸತ್ತ ಮೇಲೆ ಸ್ವರ್ಗಕ್ಕೆ ಟಿಕೆಟ್‌ ಸಿಗಲ್ಲ, ಪುತ್ತಿಗೆ ಶ್ರೀಗಳ ಹೇಳಿಕೆಗೆ ಭಾರೀ ವಿರೋಧ

* ಎಂಎಲ್ಸಿ ಅಭ್ಯರ್ಥಿ ಪಕ್ಷದ ತೀರ್ಮಾನ

ತಾನು ಸಂಸದರಾದ ಮೇಲೆ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಗೆ, ಪಕ್ಷದ ನಾಯಕರಾದ ಬಸವರಾಜ ಬೊಮ್ಮಯಿ ಮತ್ತು ಪ್ರೀತಂ ಗೌಡರು ಮಂಗಳೂರಿಗೆ ಬಂದು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಪಕ್ಷದ ಪ್ರಮುಖರನ್ನು ಕರೆದಿದ್ದಾರೆ, ನನ್ನನ್ನು ಕರೆದಿದ್ದಾರೆ, ನಾನು ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. ಪಕ್ಷವೇ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಗೆಲ್ಲುವ ಸ್ಥಾನವಾದ್ದರಿಂದ ಅನೇಕ ಮಂದಿ ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಅರ್ಹರಾಗಿದ್ದಾರೆ, ಆದರೆ ಒಬ್ಬರಿಗೆ ಮಾತ್ರ ಅವಕಾಶ ಕೊಡುವ ಅನಿವಾರ್ಯತೆ ಇದೆ. ಪಕ್ಷದ ತೀರ್ಮಾನವೇ ಅಂತಿಮ ಎಂದರು.

ಶಿಕ್ಷಕರಿಗೆ ನ್ಯಾಯ ಸಿಗುತ್ತದೆ

ಜಿಲ್ಲಾ ಶಿಕ್ಷಕ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರದ ಶಿಕ್ಷಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಪ್ರಾಂಶುಪಾಲರ ಪ್ರಶಸ್ತಿಯನ್ನು ತಡೆ ಹಿಡಿದಿರುವ ಬಗ್ಗೆ ಅಧಿಕಾರಿಗಳನ್ನು ಕೇಳಿದರೇ, ಅವರು ಅಸಹಾಯಕರಾಗಿ ಸರ್ಕಾರದ ನಿರ್ಧಾರವೇ ನಮ್ಮ ನಿರ್ಧಾರ ಎಂದಿದ್ದಾರೆ. ಶಿಕ್ಷಕರಿಗೆ ಇಂದು ನ್ಯಾಯ ಸಿಗದಿದ್ದರೂ ನಾಳೆ ನ್ಯಾಯ ಸಿಗುತ್ತದೆ, ಎದೆಗೆ ಬಿದ್ದ ಅಕ್ಷರ ಮತ್ತು ಭೂಮಿಗೆ ಬಿದ್ದ ಬೀಜ ನಾಳೆ ಫಲ ಕೊಡುತ್ತದೆ ಎಂದವರು ಮಾರ್ಮಿಕವಾಗಿ ನುಡಿದರು.